Monday 17 September 2012

"ಗಣೇಶನ ಹಬ್ಬ" ಅಂದಾಗಲೆಲ್ಲಾ ನೆನಪಾಗೋದು ಅವರೇ....


1890 ರ ದಶಕ.. 1857 ರ ಭೀಕರ ಸ್ವತಂತ್ರ ಸಂಗ್ರಾಮ ತಣ್ಣಗಾಗಿ ಅದೆಷ್ಟೋ ವರ್ಷಗಳು ಕಳೆದು ಹೋಗಿದ್ವು. ತದನಂತರ ಅಲ್ಲಲ್ಲಿ ಸಣ್ಣ-ಪುಟ್ಟ ಹೋರಾಟಗಳು ನಡೆದರೂ, ಅಷ್ಟೊಂದು ಯಶಸ್ವಿಯಾಗಲಿಲ್ಲ. ಈ ಮಧ್ಯೆ ಬ್ರಿಟಿಷರನ್ನು ನಡುಗಿಸಿದ ಒಂದೇ ಒಂದು ದಿಟ್ಟ ಹೋರಾಟವೆಂದರೆ, 'ವಾಸುದೇವ ಬಲವಂತ್ ಫಡ್ಕೆ'ಯ ಮೊಟ್ಟಮೊದಲ ಸಶಸ್ತ್ರಕ್ರಾಂತಿ. ಆದರೆ ಅವನ ಬಂಧನದ ನಂತರ ಆ ಹೋರಾಟವೂ ಶಮನವಾಗಿಹೋಯಿತು. ಕ್ರಾಂತಿಯ ಜ್ವಾಲೆ ತಣ್ಣಗಾಗಿದ್ದರೂ, ಅದರದೊಂದು ಕಿಡಿ ಮಾತ್ರ ಎಲ್ಲರಲ್ಲಿ ಬೂದಿಮುಚ್ಚಿದ ಕೆಂಡದಂತೆ ಹಾಗೇ ಜೀವಂತವಾಗಿತ್ತು. 

ಇದನ್ನರಿತ ಬ್ರಿಟಿಶ್ ಸರ್ಕಾರ, 1885 ರಲ್ಲಿ ಎ.ಓ.ಹ್ಯೂಮ್ ನಿಂದ "ಇಂಡಿಯನ್ ನ್ಯಾಷನಲ್ ಕಾಂಗ್ರೆಸ್"ನ್ನು ಸ್ಥಾಪಿಸಿತು."ಯುದ್ಧ ಮಾಡಿದರೆ ಸ್ವಾತಂತ್ರ್ಯ ಸಿಗೋದಿಲ್ಲ, ಅರ್ಜಿಗಳನ್ನು ಹಾಕಿ 'ಭಿಕ್ಷಾ'ಪಾತ್ರೆ ಹಿಡಿದು ನಿಂತರೆ, ಸ್ವತಂತ್ರ ಸಿಕ್ಕರೂ ಸಿಗಬಹುದು" ಎಂಬ ಧೋರಣೆಯನ್ನಿಟ್ಟುಕೊಂಡು ಹುಟ್ಟಿಕೊಂಡ I.N.C ಜನರಲ್ಲಿನ ಕ್ರಾಂತಿಯ ಮನೋಭಾವವನ್ನು ಮತ್ತಷ್ಟು ಶಾಂತಗೊಳಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಯಿತು. 

ಇಂತಹ ನಿಸ್ತೇಜವಾದ ಪರಿಸ್ಥಿತಿಯಲ್ಲಿ, ಮತ್ತೊಮ್ಮೆ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ, ಸ್ವಾತಂತ್ರ್ಯಯಜ್ಞದ ಅಗ್ನಿಯನ್ನು ಮತ್ತೆ ಪ್ರಜ್ವಲಗೊಳಿಸುವ ಕಾರ್ಯ ಆಗಲೇಬೇಕಿತ್ತು. ಅಂಥ ಯಜ್ಞದ ಆಧ್ವರ್ಯು ಆದವರು, "ಲೋಕಮಾನ್ಯ ಬಾಲಗಂಗಾಧರ ತಿಲಕರು". ಮನೆಗಳಲ್ಲಿ ಅವರವರ ಕುಟುಂಬದ ಮಟ್ಟಿಗೆ ಆಚರಿಸುತ್ತಿದ್ದ "ಗಣೇಶ ಚತುರ್ಥಿ"ಯನ್ನು ಸಾರ್ವಜನಿಕ ಉತ್ಸವವಾಗಿ ಮಾಡಿದವರು ಅವರೇ.1894 ರಲ್ಲಿ.. ಅದರ ಜೊತೆ ಶಿವಾಜಿ ಮಹಾರಾಜರ ಜಯಂತಿಯನ್ನೂ ಸಾರ್ವಜನಿಕ ಹಬ್ಬವನ್ನಾಗಿಸಿದ ಕೀರ್ತಿ ಅವರದ್ದೇ. ರಾಷ್ಟ್ರೀಯತೆಯ ಪುನರುತ್ಥಾನದಲ್ಲಿ ಇದೊಂದು ಮೈಲಿಗಲ್ಲು..
ಒಂದು ಧಾರ್ಮಿಕ ಹಬ್ಬವನ್ನು, ರಾಷ್ಟ್ರೀಯ ಉತ್ಸವವನ್ನಾಗಿ ಮಾಡಿದ್ದು ಮಹಾನ್ ಸಾಹಸವೇ..ಅದೊಂದು ಕಾರ್ಯದಿಂದ ಮತ್ತೆ ಜನರೆಲ್ಲರೂ ಮಾನಸಿಕವಾಗಿಯೇ ಸಂಘಟಿತರಾದರು. ಮುಂದಿನ ಹೋರಾಟಗಳಲ್ಲಿ, ಈ ಪೀಠಿಕೆ ಅದೆಂಥ ಮಹತ್ತರ ಪಾತ್ರ ವಹಿಸಿತು ಅನ್ನೋದು ಇತಿಹಾಸ ಬಲ್ಲವರಿಗೆ ಅಪರಿಚಿತವೇನೂ ಅಲ್ಲ..

ಇವತ್ತು ಗಲ್ಲಿ-ಗಲ್ಲಿಗಳಲ್ಲಿ, ಮನೆ-ಮನಗಳಲ್ಲಿ, ಜಾತಿ-ಪಂಥದ ಭೇದ ಮರೆತು, ಜನರೆಲ್ಲಾ ಒಗ್ಗೂಡಿ ಅತೀವ ಸಂಭ್ರಮದಿಂದ ಗಣೇಶನ ಹಬ್ಬವನ್ನ ಆಚರಿಸುತ್ತಿದ್ದಾರೆಂದರೆ, ಅದಕ್ಕೆ ಕಾರಣ ಆ ಲೋಕಮಾನ್ಯರೆ.. ಈ ಸಡಗರ-ಉತ್ಸಾಹಗಳನ್ನು ನೋಡಿದಾಗಲೆಲ್ಲಾ, ಮತ್ತೆ ಮತ್ತೆ ನೆನಪಾಗೋದು ಆ ತಿಲಕರು, ಅವರ ಸಂಘಟನಾ ಚಾತುರ್ಯ, ಮತ್ತು ದೂರದೃಷ್ಟಿ. ಗಣೇಶನ ಹಬ್ಬದಲ್ಲಿ ಸಂಸ್ಕೃತಿಯ ಜೊತೆಗೆ ರಾಷ್ಟ್ರಚಿಂತನೆಯೂ ಬೆರೆಯಲಿ ಎಂಬ ಅವರ ಸದಭಿಲಾಷೆ, ಶಾಶ್ವತವಾಗಿ ನೆಲೆಗೊಳ್ಳಲಿ..

ಎಲ್ಲರಿಗೂ ಗೌರೀ-ಗಣೇಶ ಉತ್ಸವದ ಹಾರ್ದಿಕ ಶುಭಾಶಯಗಳು...

Thursday 10 May 2012

೧೮೫೭ ಮೇ ೧೦ ರ ಕಿಡಿ - ಸ್ವಾತಂತ್ರ್ಯದ ಮುನ್ನುಡಿ..

೧೮೫೭ ಮೇ ೧೦ , ಅಂದು ನಡೆಯಲಿದ್ದ ಮಹಾ ಸಂಗ್ರಾಮಕ್ಕೆ ಸಾಕ್ಷಿಯಾಗಲು ಸೂರ್ಯ ಆಗ ತಾನೇ ಉದಿಸುತ್ತಿದ್ದ.. ಮೀರತ್ ನಲ್ಲಿದ್ದ ೨೦ ನೆ ಪದಾತಿ ರೆಜಿಮೆಂಟಿನವರು ಮತ್ತು ೩ ನೆ ಅಶ್ವಾರೋಹಿ ದಳದವರೂ ತಮ್ಮಲ್ಲಿ ಭುಗಿಲೆದ್ದಿದ್ದ ದೇಶಪ್ರೇಮದ ಜ್ವಾಲೆಯನ್ನು ಕಾಳ್ಗಿಚ್ಚಿನಂತೆ ಹರಡಿಸಲು ತವಕಿಸುತ್ತಿದ್ದರು. ಅದಕ್ಕೆ ಕಾರಣ ೧೮೫೭ ಏಪ್ರಿಲ್ ೮ ರಂದು ನಡೆದ ಮಂಗಲ್ ಪಾಂಡೆಯ ಬಲಿದಾನ. 

೧೮೫೭ ಮಾರ್ಚ್ ೨೯ ರಂದೇ ಬ್ಯಾರಕ್ಪುರದ ೧೯ ನೆ ರೆಜಿಮೆಂಟಿನ ಮಂಗಲ್ ಪಾಂಡೆ ಉಕ್ಕುತ್ತಿದ್ದ ದೇಶಪ್ರೇಮವನ್ನು ಬದಿಗೊತ್ತದೆ, ತನ್ನ ಸಹ-ಸೈನಿಕರನ್ನೆಲ್ಲಾ ಹುರಿದುಂಬಿಸುತ್ತ ಸ್ವಾತಂತ್ರ ಸಂಗ್ರಾಮಕ್ಕೆ ಶ್ರೀಗಣೇಶ ಮಾಡಿಯೇ ಬಿಟ್ಟ. ಸಾರ್ಜಂಟ್-ಮೇಜರ್ ಹ್ಯುಸನ್ ನನ್ನು ಗುಂಡಿಕ್ಕಿ ಕೊಂದು ರಣಕಹಳೆ ಊದಿದ..ಆ ಕಾರಣಕ್ಕಾಗಿಯೇ ಆತನನ್ನು ಏಪ್ರಿಲ್ ೮ ರಂದು ನೇಣಿಗೇರಿಸಲಾಯಿತು..

ಇದರ ಜೊತೆ ಇನ್ನೊಂದು ಹೃದಯ-ವಿದ್ರಾವಕ ಘಟನೆಯೊಂದು ನಡೆಯಿತು.. ಬ್ರಿಟಿಷರು ಕೊಟ್ಟಿದ್ದ ಕಾಡತೂಸುಗಳನ್ನು ಉಪಯೋಗಿಸಲು ನಿರಾಕರಿಸಿದ ೮೫ ಜನ ದೇಶೀ ಸೈನಿಕರನ್ನು ಬೆತ್ತಲಾಗಿಸಿ, ಬೇಡಿಗಳನ್ನು ತೊಡಿಸಿ ಕಾರಾಗೃಹಕ್ಕೆ ತಳ್ಳಿದರು. ತಮ್ಮ ಮುಂದೆಯೇ ತಮ್ಮ ಸಹೋದರರಿಗಾದ ಅಪಮಾನವನ್ನು ನೋಡಿ ಉಳಿದ ಸೈನಿಕರು ಕುದ್ದು ಹೋದರು..ಇದು ನಡೆದಿದ್ದು ಮೇ ೯ ರಂದು..

ಮೊದಲಿನ ನಿರ್ಧಾರದಂತೆ, ನಿಜವಾಗಿಯೂ ೧೮೫೭ ಮೇ ೩೧ ರಂದು ಇಡೀ ದೇಶವೇ ಭುಗಿಲೇಳಬೇಕೆಂದು ನಾನಾ-ಸಾಹಿಬ್-ಪೇಶ್ವ , ರಾಣಿ ಲಕ್ಷ್ಮಿಬಾಯಿ ಅವರ ಸಹಮತದೊಂದಿಗೆ ನಿರ್ಣಯವಾಗಿತ್ತು... ಆದರೆ ಇಷ್ಟೆಲ್ಲಾ ಬ್ರಿಟಿಷರ ಕುಕೃತ್ಯಗಳಿಂದ ತಪ್ತರಾಗಿದ್ದ ಮೀರತ್ ನ ಸಿಪಾಯಿಗಳು ಮೇ ೩೧ ರ ತನಕ ಕಾಯುವ ತಾಳ್ಮೆಯನ್ನು ಕಳೆದುಕೊಂಡಿದ್ದರು... ಹೀಗಾಗಿ ಮೇ ೧೦ ರಂದೇ ಆಂಗ್ಲರ ಮೇಲೆ ಆಕ್ರಮಿಸಲು ನಿರ್ಧರಿಸಿದರು.. ಅವರ ಜೊತೆ ಸುತ್ತಲಿದ್ದ ಹಳ್ಳಿಗಳ ಜನರೂ ಕೈಗೂಡಿಸಿದರು...

ಹೀಗೆ ಒಟ್ಟುಗೂಡಿದ ಸಿಪಾಯಿಗಳು ಮತ್ತು ಜನರು , ಮೇ ೧೦ ರ ಸಂಜೆ ಪ್ರಾರ್ಥನೆಗೆಂದು ಚರ್ಚ್ ಗೆ ತೆರಳುತ್ತಿದ್ದ ಬಿಳಿಯರ ಮೇಲೆ 'ಹರ ಹರ ಮಹಾದೇವ್','ಮಾರೋ ಫಿರಂಗಿ ಕೋ' ಎಂದು ಕೂಗುತ್ತ ದಾಳಿ ನಡೆಸಿದರು... ಭಾರತೀಯರನ್ನು ಗುಲಾಮರೆಂದು ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಸಂಹರಿಸಿದರು.. ಜೊತೆಗೆ ಸೆರೆಮನೆಯಲ್ಲಿದ್ದ ದೇಶೀ ಸಿಪಾಯಿಗಳನ್ನೆಲ್ಲ ಬಿಡಿಸಿದರು.. ಆ ಬಿಡುಗಡೆಯಾದ ಸಿಪಾಯಿಗಳೂ ಎಲ್ಲರ ಜೊತೆ ಸೇರಿ, ಆಕ್ರಮಣಕ್ಕೆ ಮುಂದಾದರು..
ಅಂದು ಭಾರತೀಯರ ಮನದಲ್ಲಿದ್ದ ಸೇಡಿನ ಅಗ್ನಿಯಲ್ಲಿ ಎಲ್ಲ ಬಿಳಿಯರೂ ಬೆಂದು ಹೋದರು.. ಆದರೆ ಈ ಯಾವ ದಾಳಿಯಲ್ಲಿಯೂ ಭಾರತೀಯ ಸಿಪಾಯಿಗಳು ಯಾವ ಬ್ರಿಟಿಶ್-ಹೆಂಗಸನ್ನೂ ಅಪಮಾನಿಸಲಿಲ್ಲ ಅನ್ನೋದು ಭಾರತೀಯತೆಗೆ ಹಿಡಿದ ಕೈಗನ್ನಡಿ...

ಅದೆಷ್ಟೋ ಜನ ಬ್ರಿಟಿಷರು ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು, ವೇಷ ಮರೆಸಿಕೊಂಡು, ದಿಕ್ಕಾಪಾಲಾಗಿ ಓಡಿಹೋದರು.. ಹೀಗೆ ಮೇ ೧೦ ರಂದು ಮೀರತ್ ನಲ್ಲಿ ಪ್ರಾರಂಭವಾದ ಕ್ರಾಂತಿಕಿಡಿ ಕ್ರಮೇಣ ಕಾನ್ಪುರ, ಝಾನ್ಸಿ , ದೆಹಲಿ ತನಕ ಹಬ್ಬಿತು... ಆದರೂ ನಮ್ಮ ಸೈನ್ಯದಲ್ಲಿ ಇನ್ನೂ ಸಾಕಷ್ಟು ಪೂರ್ವತಯಾರಿ ಇಲ್ಲದಿದ್ದ ಕಾರಣ, ಬ್ರಿಟಿಷರ ಬೃಹತ್ ಸೈನ್ಯದ ಮುಂದೆ ಭಾರತೀಯ ಸಿಪಾಯಿಗಳ ಸಂಗ್ರಾಮ ಸೋಲಬೇಕಾಯಿತು...

ಈ ಪ್ರಥಮ-ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತಕ್ಕೆ ಯಶಸ್ಸು ದೊರೆಯದಿದ್ದರೂ, ಅದು ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದಂತೂ ಖಂಡಿತ..ಅಲ್ಲದೆ ಆ ಸಿಪಾಯಿಗಳ ದೇಶಭಕ್ತಿ, ಮುಂದೆ ಬಂದ ಅನೇಕ ಸ್ವಾತಂತ್ರ ಹೋರಾಟಗಾರರಿಗೆ ಸ್ಫೂರ್ತಿಯಾಯಿತು ಅನ್ನೋದೂ ಇತಿಹಾಸವಿದಿತ.. ವೀರ ಸಾವರ್ಕರ್ ಅವರು ಈ ಪ್ರಥಮ-ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪುಸ್ತಕ ಬರೆದರು. ಅದು ಎಷ್ಟೊಂದು ಪ್ರಖರವಾಗಿತ್ತೆಂದರೆ ಆ ಪುಸ್ತಕ ಪ್ರಕಟಣೆಯಾಗುವುದಕ್ಕೂ ಮೊದಲೇ ವಿಶ್ವಾದ್ಯಂತ ಬ್ರಿಟಿಷರಿಂದ ನಿಷೇಧಿತವಾಗಿತ್ತು... ಆದರೂ ಹೇಗೋ ಭಾರತವನ್ನು ತಲುಪಿದ ಆ ಪುಸ್ತಕ ಸಹಸ್ರಾರು ಯುವ ಸ್ವಾತಂತ್ರ ಯೋಧರಲ್ಲಿ ಕೆಚ್ಚನ್ನು ತುಂಬಿತು.. ಭಗತ್ ಸಿಂಗ್ ಮೂರು ಬಾರಿ ಈ ಪುಸ್ತಕವನ್ನು ಪ್ರಕಟಿಸಿದ.. ನೇತಾಜಿ ಸುಭಾಷಚಂದ್ರ ಬೋಸರ ಅಜಾದ್ ಹಿಂದ್ ಫೌಜ್ ನ ಸೈನಿಕರಿಗೆ ಪವಿತ್ರ ಗ್ರಂಥವಾಯಿತು.. ಹೀಗೆ ಆರಂಭವಾದ ಸ್ವಾತಂತ್ರ ಸಂಗ್ರಾಮ ಅನೇಕ ಯುವಕರ ರುಧಿರಾಭಿಷೆಕದಿಂದ ೧೯೪೭ ಆಗಸ್ಟ್ ೧೫ ಸ್ವತಂತ್ರವಾಯಿತು...

ಇವತ್ತು ಮೇ ೧೦ .. ಅಂದರೆ ನಮ್ಮ ಸ್ವಾತಂತ್ರಕ್ಕೆ ಅಡಿಗಲ್ಲನಿಟ್ಟ ಆ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ ನಲ್ಲಿ ಆರಂಭವಾಗಿ ಇಂದಿಗೆ ೧೫೪ ವರ್ಷ.. ಎಲ್ಲ ನ್ಯೂಸ್ ಚಾನೆಲ್ ಗಳು, ಮಾಧ್ಯಮಗಳು ಇದನ್ನು ಮರೆತರೂ, ಕಡೆ ಪಕ್ಷ ನಾವಾದರೂ ಆ ಭೀಕರ ಸಂಗ್ರಾಮವನ್ನು ಮತ್ತು ಅದರಲ್ಲಿ ಮಡಿದು ಹುತಾತ್ಮರಾದ ಹೋರಾಟಗಾರರನ್ನು ಒಮ್ಮೆ ನೆನೆಯೋಣ...
ಆ ಎಲ್ಲ ಸ್ವಾತಂತ್ರ್ಯ ಯೋಧರಿಗೆ ನನ್ನ ಭಾವಪೂರ್ಣ ಅಶ್ರುತರ್ಪಣ......

Monday 7 May 2012

"ಅಶ್ಫಾಕುಲ್ಲಾ ಖಾನ್" -- ದೇಶಭಕ್ತಿಯ ಮೂರ್ತರೂಪ..





ಆಗಸ್ಟ್ 9 - 1925.. ಅವತ್ತಿನ ರಾತ್ರಿ ಭಾರತದ ಕ್ರಾಂತಿಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ದಾಖಲಾದ ದಿನ.. ಇನ್ನೂ ಮೀಸೆ ಚಿಗುರದ ನವತರುಣರು ಆಂಗ್ಲಶಾಹಿಯೆದುರಿಗೆ ತೊಡೆತಟ್ಟಿ ನಿಂತ ದಿನ ಅದು.. ಅದೇ "ಕಾಕೋರಿ" ಪ್ರಕರಣ..

ಆ ಹೊತ್ತಿಗಾಗಲೇ, ಅಮೇರಿಕಾದ "ಗದರ್" ಪಾರ್ಟಿಯ ಪ್ರಖರತೆ ಕಮ್ಮಿಯಾಗಿತ್ತು. ಭಾರತದಲ್ಲಿ, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಗದರ್ ಪಾರ್ಟಿಯ ಹಳೆಯ ಕೆಲವು ನಾಯಕರು ಸೇರಿ "ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್" ಎಂಬ ಕ್ರಾಂತಿಸಮಿತಿಯನ್ನು ಶುರು ಮಾಡಿದ್ರು. ಗದರ್ ಪಾರ್ಟಿಯ ಪತನದ ನಂತರ  ಕ್ರಾಂತಿ ತಣ್ಣಗಾಗಿದೆ ಅಂತ, ಆಂಗ್ಲರು ಈ  HRA ಅನ್ನು  ಉಪೇಕ್ಷಿಸಿದ್ದರು.. ಅವರ ಆ ಅಲಕ್ಸ್ಯವೇ ಕ್ರಾಂತಿಕಾರಿಗಳಿಗೆ ವಾರವಾಯಿತು.. 

ರಾಮಪ್ರಸಾದ್ ಮತ್ತು ಅಶ್ಫಾಕ್ ಇಬ್ರೂ ಜೀವಕ್ಕೆ ಜೀವ ಕೊಡೊ ಗೆಳೆಯರು.. ಅವರ ಸ್ನೇಹದ ನಡುವೆ ಧರ್ಮ ಯಾವತ್ತೂ ಅಡ್ಡಿ ಬರ್ಲಿಲ್ಲ.. ಹಾಗೆ ನೋಡಿದರೆ, ರಾಮ್, ಪಕ್ಕಾ ಅರ್ಯಸಮಾಜದ ಹಿಂದೂವಾದಿ. ಆದ್ರೆ ಅವನು ಅಶ್ಫಾಕ್ ನನ್ನು ಅಪಾರವಾಗಿ ಗೌರವಿಸುತ್ತಿದ್ದ. ಹಾಗೆಯೇ ಅಶ್ಫಾಕ್ ಕೂಡ ಯಾವಾಗಲೂ "ನನ್ನ ರಾಮ" ಅಂತಾನೆ ಜಪಿಸುತ್ತಿದ್ದ.. ಅಶ್ಫಾಕ್  ಉತ್ತರಪ್ರದೇಶದ ಷಹಜಹಾನ್ ಪುರದವನು. ಅಶ್ಫಾಕ್ ಒಬ್ಬ ಮಹಾನ್ ಉರ್ದು ಕವಿ ಕೂಡ ಆಗಿದ್ದ.. "ಹಸ್ರತ್" ಎಂಬ ಕಾವ್ಯನಾಮದಲ್ಲಿ ಅತ್ಯಂತ ಉದ್ಬೋಧಕ ದೇಶಭಕ್ತಿ ಗೀತೆಗಳನ್ನು ಬರೆದ ಸಾಹಿತಿ ಅವನು.. ಅದೇ ಅಶ್ಫಾಕ್ ಬಿಸ್ಮಿಲ್ಲನ ಸಹವಾಸಕ್ಕೆ ಬಂದೊಡನೆ, ಅವನ ಪಟ್ಟಶಿಷ್ಯನಾಗಿ ದೇಶಕ್ಕೆ ಅರ್ಪಿಸಿಕೊಂಡಿದ್ದ.. 

ಶಾಂತವಾಗಿದ್ದ ಕ್ರಾಂತಿಯನ್ನು ಮತ್ತೆ ಭುಗಿಲೆಬ್ಬಿಸಬೇಕೆಂದು ಶತಾಯಗತಾಯ ರಾಮ್ ಮತ್ತು ಅವನ ಗೆಳೆಯರು ಪ್ರಯತ್ನಿಸುತ್ತಿದ್ರು. ಆ ಕ್ರಾಂತಿಕಾರಿಗಳು ನಡೆಸಿದ ಬದುಕು ಘೋರ. ತಿನ್ನಲು ಆಹಾರವಿಲ್ಲದೇ, ನೀರು ಕುಡಿದೇ ದಿನತಳ್ಳುತ್ತಿದ್ರು. ಉಡಲು ಬಟ್ಟೆಯೂ ಇಲ್ಲದೆ, ಬರೀ ಲಂಗೋಟಿಯಲ್ಲಿಯೇ ದಿನ ಕಳೆದಿದ್ದುಂಟು. ಆದರೂ ಅವರಲ್ಲಿನ ದೇಶಪ್ರೇಮ ಮಾತ್ರ ಹಿಮಾಲಯದಷ್ಟು ಎತ್ತರ, ಸೂರ್ಯನಷ್ಟು ಪ್ರಖರ..
ಆಗಲೇ ಇನ್ನೊಂದು ಕ್ರಾಂತಿಕಾರಿ ಸಂಘಟನೆ, ಜರ್ಮನಿಯಿಂದ ಶಸ್ತ್ರಗಳನ್ನು ತರಿಸುತ್ತಿದ್ದರೆಂಬ ಮಾಹಿತಿ ಬಿಸ್ಮಿಲ್ಲನಿಗೆ ಸಿಕ್ತು. ಕೂಡಲೇ ಆ ಕ್ರಾಂತಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡ. ಆದರೆ ಶಸ್ತ್ರ ಕೊಳ್ಳಲು ಹಣವೆಲ್ಲಿ..?? ಎಲ್ಲರೂ ತಮ್ಮ ಮನೆಗಳಿಂದ ಹಣ ತಂದುಕೊಟ್ಟರು, ಅಲ್ಲಲ್ಲಿ ಆಂಗ್ಲ ಅಧಿಕಾರಿಗಳ ಮನೆ ದರೋಡೆಯನ್ನೂ ಮಾಡಿದರು. ಆದರೂ ಹಣ ಸಾಕಾಗಲಿಲ್ಲ. ಆಗ ಬಿಸ್ಮಿಲ್ ಹೆಣೆದ ತಂತ್ರವೇ, "ಕಾಕೋರಿ" ಪ್ರಕರಣ..

ಷಹಜಹಾನ್ ಪುರದಿಂದ, ಲಕ್ನೋವರೆಗೆ ಹೊರಡುತ್ತಿದ್ದ ರೈಲಿನಲ್ಲಿ, ಪ್ರತಿನಿತ್ಯ  ಬ್ರಿಟಿಷರು ತಾವು, ಬಡಭಾರತೀಯರನ್ನು  ಹೆದರಿಸಿ ವಸೂಲಿ ಮಾಡಿದ ಹಣವನ್ನು ಸಾಗಿಸುತ್ತಿದ್ದರು. ಸುಮಾರು ಹತ್ತು ಸಾವಿರಕ್ಕೂ ಮೀರಿದ ಹಣ ದಿನಾ ಆಂಗ್ಲರ ಪಾಲಾಗುತ್ತಿತ್ತು. ಅದೇ ದುಡ್ಡನ್ನು ದರೋಡೆ ಮಾಡಲು ಬಿಸ್ಮಿಲ್ ಉದ್ಯುಕ್ತನಾಗಿದ್ದ..
ಆದರೆ ಅಶ್ಫಾಕ್ ಗೆ ಇದು ಇಷ್ಟವಿರಲಿಲ್ಲ. ಅದು ಭಿನ್ನಾಭಿಪ್ರಾಯ ಅಂತಲ್ಲ. ಇನ್ನೂ ಸಂಘಟನೆಯನ್ನು ಬಲಿಷ್ಠಗೊಳಿಸದೆ ಇಂತಹ ದೊಡ್ಡಸಾಹಸಕ್ಕೆ ಕೈಹಾಕುವುದು ಸರಿಯಲ್ಲ ಅನ್ನೋದು ಅವನ ಭಾವನೆಯಾಗಿತ್ತು. ಆದರೆ ಅಶ್ಫಾಕ್ ತನ್ನ ನಾಯಕ ಬಿಸ್ಮಿಲ್ಲನ ಒಂದೇ ಮಾತಿಗೆ, ಸಮ್ಮತಿಸಿ ಅವನ ಬಲಗೈಯಾಗಿ ನಿಂತ. ಅಂತೂ ಕೊನೆಗೆ ರಾಮಪ್ರಸಾದ್,ಅಶ್ಫಾಕ್, ಶಚಿಂದ್ರನಾಥ್ ಬಕ್ಷಿ, ರಾಜೇಂದ್ರ ಲಾಹಿರಿ, ಥಾಕೂರ್ ರೋಶನ್ ಸಿಂಹ, ಮುಕುಂದೀಲಾಲ್, ಮನ್ಮಥನಾಥ್ ಗುಪ್ತ, ಮತ್ತು ಆಜಾದ್, ಇವರೆಲ್ಲರನ್ನು ಒಳಗೊಂಡ ಒಂದು ತಂಡ ತಯಾರಾಯಿತು.

ಲಕ್ನೋದ ಹತ್ತಿರ  'ಕಾಕೋರಿ' ಎಂಬ ಒಂದು ಸ್ಟೇಷನ್. ಅದು ನಿರ್ಜನ ಪ್ರದೇಶ. ಸುತ್ತಲೂ ಮರ-ಗಿಡ ಪೊದೆಗಳು ಯಥೇಷ್ಟವಾಗಿ ಬೆಳೆದಿದ್ದರಿಂದ ಬಿಸ್ಮಿಲ್ ಆ ಪ್ರದೇಶವನ್ನು ತನ್ನ ಕಾರ್ಯಾಚರಣೆಗೆ ಆಯ್ದುಕೊಂಡ. 
ಆಗಸ್ಟ್ 8 ರಂದು, ಎಲ್ಲರೂ ತಮ್ಮ ರಹಸ್ಯ ಸ್ಥಳಗಳಿಂದ ಕಾಕೋರಿ ರೈಲುನಿಲ್ದಾಣ ತಲುಪಿದರು. ಅವರು ದರೋಡೆ ಮಾಡಬೇಕಿದ್ದ "ಏಯ್ಟ್ ಡೌನ್" ರೈಲು ಕೂಡಲೇ ಬಂದೇಬಿಟ್ಟಿತು. ನೋಡನೋಡುತ್ತಲೇ ಲಕ್ನೋಗೆ ಹೊರಟೇ ಹೋಯಿತು. ಅವತ್ತು ಕ್ರಾಂತಿಕಾರಿಗಳು 10 ನಿಮಿಷ ತಡವಾಗಿ ಬಂದಿದ್ದರಿಂದ ಈ ಪ್ರಮಾದವಾಗಿತ್ತು. ನಿರಾಶೆಯಿಂದ ಹಿಂತಿರುಗಿದ ಅವರು, ಮರುದಿನಕ್ಕೆ ಹೊಸಯೋಜನೆಯನ್ನು ಮಾಡಿದರು.

ಅವತ್ತು ಆಗಸ್ಟ್ 9. ಈ ಬಾರಿ ಎಲ್ಲರೂ, ಲಕ್ನೋ ತಲುಪಿ, ಅಲ್ಲಿಂದಲೇ ಆ ರೈಲನ್ನು ಹತ್ತಿ ಕುಳಿತರು. ಕಾಕೊರಿಯ ನಿಲ್ದಾಣ ಬರುತ್ತಲೇ, ಪೂರ್ವನಿರ್ಧಾರದಂತೆ ಶಚಿಂದ್ರ ರೈಲಿನ ಸರಪಳಿ ಎಳೆದ. ಹೊರಗಡೆ ದಟ್ಟ ಕತ್ತಲು. ಎಲ್ಲರೂ ಏನಾಗುತ್ತಿದೆ ಅಂದುಕೊಳ್ಳುವಷ್ಟರಲ್ಲೇ, ಬಿಸ್ಮಿಲ್ಲನ ಸೂಚನೆಯಂತೆ ಎಲ್ಲ ಕ್ರಾಂತಿಕಾರಿಗಳೂ ಕೆಳಗಿಳಿದು, ಗಾರ್ಡ್ ಡಬ್ಬಿಯೊಳಗೆ ನುಗ್ಗಿದರು. ಅಲ್ಲಿದ್ದ ಹಣದ ಸಂದೂಕನ್ನು ಕೆಳಗಿಳಿಸಿ, ತಾವು ತಂದಿದ್ದ ದೊಡ್ಡ ಸುತ್ತಿಗೆ-ಹಾರಿಗಳಿಂದ ಒಡೆಯಲು ಶುರುಮಾಡಿದರು. ಆದರೆ ಸಂದೂಕು ತುಂಬಾ ಗಟ್ಟಿಯಾಗಿತ್ತು. ಆಗ ಅಶ್ಫಾಕ್ ಕೂಡಲೇ ತನ್ನ ಪಿಸ್ತೂಲನ್ನು ಇನ್ನೊಬ್ಬನಿಗೆ ಕೊಟ್ಟು, ಸುತ್ತಿಗೆಯಿಂದ ಹೊಡೆಯಲು ಆರಂಭಿಸಿದ. ನಿರಂತರ ಹೊಡೆತಗಳು.. ಕ್ರಮೇಣ ಅಶ್ಫಾಕ್ ನ ಹೊಡೆತಕ್ಕೆ ಸಂದೂಕು ಬಾಯಿಬಿಟ್ಟಿತು. ಅದರಲ್ಲಿದ್ದ ಹಣದ ಚೀಲಗಳನ್ನು ತೆಗೆದುಕೊಂಡವರೇ ಅಲ್ಲಿಂದ ಪರಾರಿಯಾಗಿಬಿಟ್ಟರು. ಅಲ್ಲಿಗೆ ಬಿಸ್ಮಿಲ್ಲನ ಉಪಾಯ ಫಲಿಸಿತ್ತು. ಆಂಗ್ಲರು ಉಪೇಕ್ಷೆ ಮಾಡಿದ್ದ ಅದೇ ಯುವಕರು, ಒಂದೇ ರಾತ್ರಿ ಬ್ರಿಟಿಶ್ ಪ್ರಭುತ್ವ ಥರಗುಟ್ಟುವ ಸಾಹಸ ಮಾಡಿಬಿಟ್ಟಿದ್ದರು. 1857 ರ ಗರ್ಜನೆ ಮತ್ತೂಮ್ಮೆ ಮೊಳಗಿದಂತಾಗಿತ್ತು..

ಆದರೆ ಸರ್ಕಾರ ಎಚ್ಚೆತ್ತು, ತ್ವರಿತಗತಿಯಲ್ಲಿ ಹುಡುಕಾಟ ನಡೆಸಿತು.. ಮತ್ತೊಮ್ಮೆ ದೇಶದ್ರೋಹಿಗಳ ಕುಯುಕ್ತಿಗಳು ತಾಂಡವವಾಡಿದವು. ಬಿಸ್ಸ್ಮಿಲ್ ಕೂಡಲೇ ಸಿಕ್ಕಿಬಿದ್ದ. ಉಳಿದ ಕೆಲವರು ಕಾಶಿಗೆ ಓಡಿಹೋದರು. ಆದರೆ ಕಾಶಿಯ ಪೊಲೀಸರಿಗೆ ಮೊದಲಿಂದಲೂ ಇವರ ಬಗ್ಗೆ ಅನುಮಾನ ಇದ್ದಿದ್ದರಿಂದ ವಿಚಾರಣೆ ನಡೆಸಿದರು. ಮನ್ಮಥನಾಥ್ ಗುಪ್ತ, ಸುರೇಶ ಭಟ್ಟಾಚಾರ್ಯ ಬಂಧನಕ್ಕೊಳಗಾದರು. ಮನ್ಮಥನಾಥನಿಗೆ 12 ವರ್ಷ ಶಿಕ್ಷೆ ಆಯಿತು. ರಾಜೇಂದ್ರ ಲಾಹಿರಿ, ಬಾಂಬ್ ತರಬೇತಿಗಾಗಿ ಕಲ್ಕತ್ತೆಗೆ ಹೋಗಿದ್ದರಿಂದ ಅವನ ಸುಳಿವು ಸಿಗಲಿಲ್ಲ..

ಇತ್ತ ಅಶ್ಫಾಕ್ ದಿಲ್ಲಿಯಲ್ಲಿ ತಲೆಮರೆಸಿಕೊಂಡಿದ್ದಾಗ, ಮಿತ್ರದ್ರೋಹಿಯಿಂದ ಬಂಧನಕ್ಕೆ ಒಳಗಾಗಿ, ಲಕ್ನೋ ಸೆರೆಮನೆಗೆ ಬಂದಿದ್ದ. ಬ್ರಿಟಿಷರ ಎಲ್ಲ ಹಿಂಸೆಗಳನ್ನೂ ನಗುತ್ತಲೇ ಸಹಿಸಿಕೊಂಡಿದ್ದ.. ಅವನ ಮತ್ತು ಬಿಸ್ಮಿಲ್ಲನ ಸ್ನೇಹ ಎಷ್ಟಿತ್ತೆಂದರೆ, ಕೊನೆಗೆ ಸಾವಿನಲ್ಲಿಯೂ ಅವರಿಬ್ರೂ ಒಂದಾದರು..
ಇಬ್ಬರೂ ಬೇರೆ ಬೇರೆ ಜೈಲಿನಲ್ಲಿದ್ರೂ, ಡಿಸೆಂಬರ್ 19 ರಂದು ಇಬ್ಬರನ್ನೂ ನೇಣಿಗೆ ಹಾಕಲಾಯಿತು.. ಭಾರತಮಾತೆಯ ಪಾದಗಳಲ್ಲಿ ಇವರೂ ಹೂವಾಗಿ ಅರ್ಪಿಸಿಕೊಂಡಿದ್ದರು..

ಅಶ್ಫಾಕ್ ನ ಚಿಂತನೆಗಳು ಇವತ್ತಿಗೂ ಸ್ಫೂರ್ತಿದಾಯಕ..ಅವನ ಕೆಲವು ಹೇಳಿಕೆಗಳು ನಿಜಕ್ಕೂ ಪ್ರೇರಣಾದಾಯಿ.
-> "ದೇಶಭಕ್ತಿ ತನ್ನ ಜೊತೆಗೆ ಎಲ್ಲ ರೀತಿಯ ವಿಪತ್ತು-ದುಃಖಗಳನ್ನು ಇಟ್ಟುಕೊಂಡಿರುತ್ತೆ. ಆದರೆ ಆ ದೇಶಭಕ್ತಿಯ ಮಾರ್ಗವನ್ನು ಅನುಸರಿಸುವ ಕ್ರಾಂತಿಕಾರಿ ಮಾತ್ರ ಅವೆಲ್ಲವನ್ನೂ ಸುಲಭವಾಗಿ ಸ್ವೀಕರಿಸಲು ಸಾಧ್ಯ.. ಕೇವಲ ನನ್ನ ದೇಶದ ಮೇಲಿನ ಪ್ರೀತಿಯಿಂದಲೇ ನಾನು ಇಷ್ಟೆಲ್ಲಾ ಕಷ್ಟಗಳನ್ನು ಸಂತೋಷದಿಂದ ಅನುಭವಿಸುತ್ತಿದ್ದೇನೆ. ನನ್ನ ಒಂದೇ ಒಂದು ಕನಸೆಂದರೆ, ನನ್ನ ದೇಶ ಬಿಡುಗಡೆಯಾಗುವವರೆಗೂ ನನ್ನ ಮುಂದಿನ ಯುವಕರು ಇದೇ ರೀತಿ ಹೋರಾಟ ಮುಂದುವರೆಸಿ ದೇಶಕ್ಕಾಗಿ ಜೀವ ಮುಡಿಪಿಡಲಿ ಎಂದು."...!!!

ಅಶ್ಫಾಕ್ ನ ದೇಶಪ್ರೇಮ ನಮ್ಮೆಲ್ಲ ಯುವಕರಿಗೆ ಆದರ್ಶವಾಗಲಿ...
ವಂದೇ ಮಾತರಂ..



Friday 6 April 2012

ಏಕಪಾತ್ರಾಭಿನಯಕ್ಕೆ ಪಾತ್ರ ಹುಡುಕುತ್ತಿದ್ದಾಗ ಸಿಕ್ಕ ಸೇನಾನಿ..!!!!!

ಪ್ರತಿವರ್ಷ ನಮ್ಮ ಕಾಲೇಜಿನಲ್ಲಿ ನಡೆಯುವ ಅಂತರ್ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧಾಹಬ್ಬ "ದವನ"ದಲ್ಲಿ "ಏಕಪಾತ್ರಾಭಿನಯ"ವೂ ಒಂದು ಸ್ಪರ್ಧೆ.. ಈ ವರ್ಷ ಯಾರ ಅಭಿನಯ ಮಾಡಲಿ ಎಂದು ಯೋಚಿಸುತ್ತಿದ್ದೆ.. ಅಭಿನಯವಂತೂ ಇದ್ದಿದ್ದೇ. ಆದಷ್ಟು ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಪಾತ್ರ ಆಯ್ದುಕೊಂಡರೆ, ಬಹಳಷ್ಟು ಜನಕ್ಕೆ ಆ ಚರಿತ್ರೆಯನ್ನು ತಲುಪಿಸಿದಂತಾಗುತ್ತದೆ, ಅದರಲ್ಲೂ ಕರ್ನಾಟಕದವನೇ ಆದರೆ, ಪಾತ್ರದ ಸಂಭಾಷಣೆ ಬರೆಯುವುದೂ ನನಗೆ ಸುಲಭವಾಗುತ್ತದೆ ಎಂದು ಭಾವಿಸಿ, ಅಂಥಾ ಚಾರಿತ್ರಿಕವ್ಯಕ್ತಿಯ ಹುಡುಕಾಟದಲ್ಲಿ ಇದ್ದಾಗ, ಥಟ್ಟನೆ ಒಬ್ಬನ ನೆನಪಾಯಿತು..
ಎಂಟನೆ ತರಗತಿಯಲ್ಲಿದ್ದಾಗ ಅವನ ಬಗೆಗಿನ ಪುಸ್ತಕ ಓದಿದ್ದಷ್ಟೇ ನೆನಪು.. ಆದರೆ, ಅವನ ಉಜ್ವಲ ದೇಶಭಕ್ತಿ ಇವತ್ತಿಗೂ ಅವನ ಚಿತ್ರಣವನ್ನು ನನ್ನ ಮನಸ್ಸಿನಲ್ಲಿ ಹಸಿರಾಗಿಸಿದೆ..




"ಸುರಪುರ"-ಗದಗ ಜಿಲ್ಲೆಯ ಊರು. "ಬೇಡ"ನಾಯಕರು ಅದನ್ನು ಆಳುತ್ತಿದ್ದರು. ವಿಜಯನಗರದ ರಾಜರುಗಳಿಂದ ಪ್ರಭಾವಿತರಾಗಿದ್ದ ನಾಯಕರು, ಸಹಜವಾಗಿಯೇ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಧೈರ್ಯ-ಸಾಹಸಗಳಿಗೆ ಹೆಸರಾದ ವಂಶ ಅದು.. ಇಂಥ ಪರಂಪರೆಯಲ್ಲಿ ಬಂದವನೇ ಈ ಲೇಖನದ ಮೂಲಸ್ರೋತ "ವೆಂಕಟಪ್ಪ ನಾಯಕ"...!!


ವೈಸರಾಯ್ ಲಾರ್ಡ್ ಡಾಲ್ಹೌಸೀ ಆಡಳಿತ ನಡೆಸುತ್ತಿದ್ದ ಕಾಲ ಅದು. ವೆಂಕಟಪ್ಪ ಸಣ್ಣ ಬಾಲಕನಾಗಿದ್ದಾಗಲೇ ಅವನ ತಂದೆ, "ಕೃಷ್ಣಪ್ಪ ನಾಯಕ" ತೀರಿಹೋಗಿದ್ದರು. ಹೀಗಾಗಿ, ವೆಂಕಟಪ್ಪನನ್ನು ಬೆಳೆಸುವ ಜವಾಬ್ದಾರಿ ಅವನ ತಾಯಿ 'ಈಶ್ವರಮ್ಮ"ನ ಮೇಲೆ ಬಂತು. ಜೊತೆಗೆ, ಅವನ ಮಾವ 'ಪಿದ್ದನಾಯಕ' ಸುರಪುರದ ಚುಕ್ಕಾಣಿ ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದ್ದ.. ಇಂಥಾ ಸಂದರ್ಭಗಳಿಗೆ ಕಾಯುತ್ತಿದ್ದ ಬ್ರಿಟಿಶ್ ಸರ್ಕಾರ, ಸುರಪುರದ ಆಡಳಿತದಲ್ಲಿ ತನ್ನ ಕೈವಾಡ ತೋರಿಸಲು ಪ್ರಾರಂಭಿಸಿತು..


ಬಾಲಕನಾಗಿದ್ದ ವೆಂಕಟಪ್ಪನನ್ನು ಅವನ ಮಾವ ಪಿದ್ದನಾಯಕನಿಂದ ರಕ್ಷಣೆ ಮಾಡುವ ನೆಪಹೂಡಿ, ಬ್ರಿಟಿಶ್ ಸರ್ಕಾರ, "ಮೆದೊಸ್ ಟೇಲರ್' ಎಂಬ ಅಧಿಕಾರಿಯನ್ನು ನೇಮಿಸಿತು.. ವಾಸ್ತವವಾಗಿ 'ಟೇಲರ್' ತುಂಬಾ ಸಜ್ಜನ ವ್ಯಕ್ತಿಯಾಗಿದ್ದ. ತುಂಬಾ ಅಕ್ಕರೆಯಿಂದ ವೆಂಕಟಪ್ಪನನ್ನು ಬೆಳೆಸಿದ. ವೆಂಕಟಪ್ಪ ಕೂಡ 'ಟೇಲರ್' ಮೇಲೆ ಬಹಳ ಅಭಿಮಾನವನ್ನು ಬೆಳೆಸಿಕೊಂಡಿದ್ದ, ಟೇಲರ್ ನನ್ನೇ 'ಅಪ್ಪಾ' ಅಂತಲೇ ಕೆರೆಯುತ್ತಿದ್ದ. ಟೇಲರ್, ವೆಂಕಟಪ್ಪನಿಗೆ ಎಲ್ಲಾ ಥರದ ಶಿಕ್ಷಣವನ್ನೂ ನೀಡಿದ..


ಕಾಲಾನುಕ್ರಮೇಣ, ವೆಂಕಟಪ್ಪ ಪ್ರೌಢಾವಸ್ಥೆಗೆ ಬರುತ್ತಿದ್ದಂತೆ, ಅವನನ್ನೇ ಸುರಪುರದ ರಾಜನನ್ನಾಗಿ ಮಾಡಲಾಯಿತು. ಆದರೆ ಜೊತೆಗೆ ಒಂದು ಷರತ್ತನ್ನೂ ವಿಧಿಸಲಾಯಿತು. ವೆಂಕಟಪ್ಪ ರಾಜನಾದರೂ, ಒಬ್ಬ ಬ್ರಿಟಿಶ್ ಅಧಿಕಾರಿಯನ್ನು, ಸಲಹೆಗಾರನನ್ನಾಗಿ ನೇಮಿಸಿ, ಸಕಲ ನಿಯಂತ್ರಣಶಕ್ತಿಗಳನ್ನೂ ನೀಡಿ, ಜೊತೆಗೆ  ೨೦,೦೦೦ ರೂಪಾಯಿಗಳ ಸಂಬಳವನ್ನೂ ನಿಗದಿಪಡಿಸಬೇಕು ಎಂದು ಬ್ರಿಟಿಶ್ ಸರ್ಕಾರ ಆದೇಶ ನೀಡಿತು. ಬ್ರಿಟಿಷರ ಅನಗತ್ಯ ಮೂಗುತೂರಿಸುವಿಕೆಯಿಂದ ರೋಸಿಹೋಗಿದ್ದ ವೆಂಕಟಪ್ಪ, ಇಂಥಾ ಆದೇಶ ದಿಂದ ಮತ್ತಷ್ಟು ಕುಪಿತನಾಗಿ, ಆ ರೀತಿಯ ಸಲಹೆಗಾರನ ನೇಮಕಾತಿ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ..  ಹಾಗೆಯೇ ಬ್ರಿಟಿಷರು 'ಪಿದ್ದನಾಯಕ'ನಿಗೆ ಜಾಗೀರಾಗಿ ಕೊಟ್ಟಿದ್ದ ಜಮೀನನ್ನು ವಾಪಸ್ ಪಡೆದುಕೊಂಡ. ಇಲ್ಲಿಂದ ಆರಂಭವಾಯಿತು ಬ್ರಿಟಿಷರ ಮತ್ತು ವೆಂಕಟಪ್ಪನ ನಡುವಿನ ವೈಮನಸ್ಯ..!!!!




೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಿನಗಳವು..ಪವಿತ್ರ ಭಾರತದಿಂದ ಆಂಗ್ಲಪ್ರಭುತ್ವವನ್ನು ಉಚ್ಚಾಟನೆ ಮಾಡುವ ಸಂಕಲ್ಪದೊಂದಿಗೆ, ದೇಶದೆಲ್ಲೆಡೆ ಬ್ರಿಟಿಶ್-ವಿರೋಧಿ ಹೋರಾಟಗಳು ನಡೆಯುತ್ತಿದ್ದವು.. ಬ್ರಿಟಿಷರ ಕುಟಿಲತೆಗಳನ್ನು, ಅಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಟಪ್ಪ ನಾಯಕನಿಗೂ, ಆ ಕಾಲಘಟ್ಟದ ಉಳಿದ ರಾಜರುಗಳಂತೆ, ಬ್ರಿಟಿಷರನ್ನು ಹೊರಗೋಡಿಸಿ, ಸಶಕ್ತನಾಡನ್ನು ನಿರ್ಮಿಸುವ ಹಂಬಲವಿತ್ತು.. ಆ ನಿಟ್ಟಿನಲ್ಲಿ ವೆಂಕಟಪ್ಪ ತನ್ನ ಕಾರ್ಯಾಚರಣೆಯನ್ನೂ ಪ್ರಾರಂಭಿಸಿದ್ದ.!!!


ವೆಂಕಟಪ್ಪ, ನಾನಸಾಹಿಬ್ ಪೆಶ್ವೇಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದ.. ಜೊತೆಗೆ ತನ್ನದೇ ಆದ, ಸಾವಿರಾರು ಸೈನಿಕರ ದೊಡ್ಡ ಸೈನ್ಯವನ್ನೇ ನಿರ್ಮಿಸಿ, ಅನವರತ ತರಬೇತಿಯನ್ನು ನೀಡಿದ. ೧೮೫೮ ಆಗಸ್ಟ್ ೮ ರಂದು ಬ್ರಿಟಿಷರ ವಿರುದ್ಧ ಸಿಡಿದೇಳಲು ಎಲ್ಲ ತಯಾರಿಯನ್ನು ನಡೆಸಿದ್ದ. ಜೊತೆಗೆ, ಬೆಳಗಾವಿ, ಕೊಲ್ಹಾಪುರ, ಧಾರವಾಡದಲ್ಲಿದ್ದ ಬ್ರಿಟಿಷರ ರೆಜಿಮೆಂಟಿನ ಸೈನಿಕರನ್ನೂ ಸಂಪರ್ಕಿಸಿ ದಂಗೆ ಏಳಲು ಸೂಚಿಸಿದ್ದ..



ಇವೆಲ್ಲದರ ಮಧ್ಯೆ, ಬ್ರಿಟಿಷರಿಗೂ ವೆಂಕಟಪ್ಪನ ಈ ತಯಾರಿಯ ವಾಸನೆ ಬಡಿದಿತ್ತು. ಅವನ ಹಿಂದೆ ಸದಾ ಗೂಧಚಾರರನ್ನು ಬಿಟ್ಟು ವರದಿಗಳನ್ನು ಕಲೆಹಾಕುತ್ತಿದ್ದರು. ಅಷ್ಟರಲ್ಲೇ 'ಮಹಿಪಾಲ್ ಸಿಂಗ್' ಎಂಬ ಸೈನಿಕನೊಬ್ಬ, ಬ್ರಿಟಿಷರ ಸೆರೆ ಸಿಕ್ಕ.. ಪ್ರಾಣಭಯಕ್ಕೆ, ವೆಂಕಟಪ್ಪನ ಎಲ್ಲ ಉಪಾಯಗಳನ್ನು, ರಣತಂತ್ರಗಳನ್ನೂ ಬ್ರಿಟಿಷರಿಗೆ ತಿಳಿಸಿಬಿಟ್ಟ.!!!! ತಕ್ಷಣ ಕಾರ್ಯೋನ್ಮುಖರಾದ ಬ್ರಿಟಿಷರು, ಸುರಪುರದ ಮೇಲೆ ದಾಳಿ ಮಾಡಲು ನಿರ್ಧರಿಸಿದರು..


೧೮೫೮ ಫೆಬ್ರವರಿ ೭ ರ, ಬೆಳಗಾಗುವುದರೊಳಗೆ, ಸುರಪುರದ ಭದ್ರ ಕೋಟೆಯ ಸುತ್ತ, ಕ್ಯಾಪ್ಟನ್.ಕಾಮ್ಪ್ ಬೆಲ್ ನ ನೇತೃತ್ವದಲ್ಲಿ, ದೊಡ್ಡ ಪಡೆ ಬಂದು ನಿಂತಿತು.. ಯುದ್ಧಕ್ಕೆ ಸದಾ ಸನ್ನದ್ಧರಾಗಿದ್ದ ಸುರಪುರದ ಸೈನಿಕರೂ ಅಷ್ಟೇ ಪ್ರಬಲ ಶಕ್ತಿಯೊಂದಿಗೆ ಹೋರಾಟ ನಡೆಸಿದರು.. ವೀರಾವೇಶದಿಂದ ಆಕ್ರಮಣ ಮಾಡಿದ, ವೆಂಕಟಪ್ಪನ ಸುಸಜ್ಜಿತ ಯೋಧರು, ದುಷ್ಟ ಆಂಗ್ಲರನ್ನು ಸದೆಬಡಿದರು. ಅಲ್ಲಿನ ಪ್ರತಿಯೊಬ್ಬರಲ್ಲೂ ಮಹಾಕಾಳಿ ಆವರಿಸಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ನಾಡನ್ನು ಬಂಧಮುಕ್ತಗೊಳಿಸಬೇಕೆಂಬ ಹಠ, ರಕ್ತದ ಕಣಕಣದಲ್ಲೂ ತುಂಬಿತ್ತು..!!!


ಆದರೆ, ಬ್ರಿಟಿಷರ ಪಡೆಗೆ ಹೋಲಿಸಿದರೆ, ಸುರಪುರದ ಸೈನ್ಯ ಅಷ್ಟೊಂದು ಪ್ರಖರವಾಗಿರಲಿಲ್ಲ. ಆಧುನಿಕ ಶಸ್ತ್ರಗಳೂ ಅವರ ಬಳಿ ಇರಲಿಲ್ಲ.. ಇದರ ಮಧ್ಯೆ,  ಬ್ರಿಟಿಷರಿಂದ ದುಡ್ಡು ಪಡೆದ  'ಭೀಮರಾಯ' ಎಂಬ  ಆಂಗ್ಲರ ಗೂಢಚಾರಿ , 'ವೆಂಕಟಪ್ಪ'ನಿಗೆ ಸುರಪುರದಿಂದ ಓಡಿಹೋಗಿ ಹೈದರಾಬಾದಿನಲ್ಲಿ ತಲೆಮರೆಸಿಕೊಳ್ಳಲು ಸಲಹೆ ನೀಡಿದ. ಹೈದರಾಬಾದಿಗೆ ಹೋದಾಕ್ಷಣ, ನಿಜಾಮನ ಸಹಾಯದಿಂದ ವೆಂಕಟಪ್ಪನನ್ನು ಹಿಡಿಯಬೇಕೆಂಬ ಪೂರ್ವಯೋಜಿತ ಉಪಾಯದಂತೆ ಆತನನ್ನು ಕಳಿಸಲಾಯಿತು. ಇದರ ಸುಳಿವೇ ಇಲ್ಲದ ವೆಂಕಟಪ್ಪ ಹೈದರಾಬಾದಿಗೆ ಹೋದ..!!!! ವೆಂಕಟಪ್ಪ ಸುರಪುರ ಬಿಟ್ಟಾಕ್ಷಣ, ಇತ್ತ ಸುರಪುರದ ಕೋಟೆಯ ಬಾಗಿಲನ್ನು ದ್ರೋಹಿ ಭೀಮರಾಯ ತೆರೆದುಬಿಟ್ಟ. ಯಾವುದೇ ಅಡೆತಡೆಯಿಲ್ಲದೆ ಬ್ರಿಟಿಶ್ ಸೈನ್ಯ ಸುರಪುರದ ಅಭೇದ್ಯ ಕೋಟೆಯನ್ನು ವಶಪಡಿಸಿಕೊಂಡಿತು..!!



ಇತ್ತ ನಿಜಾಮನೂ ಬ್ರಿಟಿಷರ ಜೊತೆ ಕೈಜೋಡಿಸಿ, ವೆಂಕಟಪ್ಪನನ್ನು ಹಿಡಿಯಲು ಸೈನ್ಯವನ್ನು ಇಡೀ ಹೈದರಾಬಾದಿನ ತುಂಬೆಲ್ಲ ಕಳಿಸಿದ.. ಅನೇಕ ದಿನಗಳ ಹುಡುಕಾಟದಲ್ಲಿ, ಕೊನೆಗೆ ವೆಂಕಟಪ್ಪ ಬಂಧಿಯಾದ.. ಸೆರೆಸಿಕ್ಕ ಅವನನ್ನು ಸಿಕಂದರಾಬಾದಿನ ಜೈಲಿನಲ್ಲಿಡಲಾಯಿತು. ವಿಚಾರಣೆಯ ನಾಟಕ ನಡೆಸಿ, ಆಂಗ್ಲಪ್ರಭುತ್ವದ ವಿರುದ್ಧ ಬಂಡೆದ್ದ ಕಾರಣಕ್ಕೆ 'ಗಲ್ಲುಶಿಕ್ಷೆ' ವಿಧಿಸಲಾಯಿತು.. ಆದರೆ, ವೆಂಕಟಪ್ಪನನ್ನು ಸಾಕಿ ಬೆಳೆಸಿದ್ದ ಟೇಲರ್ ಗೆ ಇದನ್ನು ಸಹಿಸಲಾಗಲಿಲ್ಲ. ತುಂಬಾ ನೊಂದಿದ್ದ ಟೇಲರ್, ಹೇಗಾದರೂ ಮಾಡಿ ಈ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿ ವೆಂಕಟಪ್ಪನನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿ, ಅದಕ್ಕಾಗಿ ಮಾತುಕತೆಯನ್ನೂ ಮೇಲಿನ ಅಧಿಕಾರಿಗಳ ಜೊತೆಗೆ ನಡೆಸಿದ್ದ. ಆನಂತರ ವೆಂಕಟಪ್ಪನನ್ನು ಭೇಟಿ ಮಾಡಲು ಜೈಲಿಗೆ ಬಂದ.. 


[ಈ ಸಂದರ್ಭವನ್ನೇ ನನ್ನ ಏಕಪಾತ್ರಾಭಿನಯಕ್ಕೆ ಆಯ್ದುಕೊಂಡು, ಸಂಭಾಷಣೆಯನ್ನೂ ಬರೆದಿದ್ದೆ. ಅದರ ಒಂದೆರಡು ತುಣುಕುಗಳು ಇಲ್ಲಿವೆ.]


ವೆಂಕಟಪ್ಪ:- "ಬನ್ನಿ ಟೇಲರ್ ಸಾಹೇಬರೇ,!! ಬನ್ನಿ.. ನೀವೇ ಅಕ್ಕರೆಯಿಂದ ಸಾಕಿ ಬೆಳೆಸಿದ ಈ ವೆಂಕಟಪ್ಪ, ಈಗ ಕಬ್ಬಿಣದ ಕೋಳಗಳಲ್ಲಿ ಹೇಗೆ ಬಂಧಿಯಾಗಿದ್ದಾನೆ ಅಂತ ನೋಡೋದಿಕ್ಕೆ ಬಂದ್ರೇನು.?!
ನಿಮ್ಮ ಬರ್ಬರ ಬ್ರಿಟಿಶ್ ಸರ್ಕಾರದ ಕುಟಿಲತೆಗಳ ಕಬಂಧಬಾಹುಗಳಿಂದ ನನ್ನ ತಾಯ್ನಾಡು ಮಮ್ಮಲ ಮರುಗುತ್ತಿರುವಾಗ, ನಾನು ಸುಖದ ಸುಪ್ಪತ್ತಿಗೆಯಲ್ಲಿ ಮಲಗಲು ಸಾಧ್ಯವೇ.? ಈ ನಾಯಕನಿಗೆ ಅದು ಸಾಧ್ಯವಿಲ್ಲ.. ನಾಡು-ನುಡಿಗೆ ನಿರಂತರ ರುಧಿರಧಾರೆಯನ್ನು ಅರ್ಪಿಸಿದ ನನ್ನ ಪೂರ್ವಜರಿಗೆ ನಾನು ದ್ರೋಹ ಬಗೆಯಲಾರೆ.. ಈ ನಾಡಿಂದ ಈ ಸರ್ಕಾರವನ್ನು ಉಚ್ಚಾಟಿಸುವವರೆಗೂ ನಾನು ಹೋರಾಡುತ್ತಲೇ ಇರುತ್ತೇನೆ..!!
ಅಲ್ಲ, ಟೇಲರ್ ಸಾಹೇಬರೇ, ನನ್ನ ಮರಣದ ಶಿಕ್ಷೆಯನ್ನು ಕಡಿಮೆಗೊಳಿಸಲು ನೀವು ಪ್ರಯತ್ನಿಸುತ್ತಿದ್ದೀರಂತೆ.!! ನಂಗೊತ್ತು, ನನ್ನ ಬಗ್ಗೆ ನಿಮಗೆ ಅಪಾರ ಪ್ರೀತಿಯಿದೆ. ಸಾಕಿದ ಮಮತೆಯಿದೆ. ಆದರೆ, ನಾನು ಹೇಡಿಯಲ್ಲ.. ನೆನಪಿರಲಿ.. ಈ ನಾಯಕ, ನಾಡಿಗಾಗಿ ಪ್ರಾಣಕೊಡಲು ಯಾವತ್ತೂ ಸಿದ್ಧ. ಅತ್ಯಂತ ಸಂತೋಷದಿಂದ ಆ ನೇಣನ್ನು ಅಪ್ಪಿಕೊಳುತ್ತೇನೆ. ನನ್ನ ಪ್ರಾಣಭಿಕ್ಷೆಯನ್ನು ದಯವಿಟ್ಟು ಆ ಆಂಗ್ಲಕುನ್ನಿಗಳ ಎದುರು ಕೇಳಬೇಡಿ.. ದೇಶಕ್ಕಾಗಿ ಜೀವನೀಡುವ ಸೌಭಾಗ್ಯವನ್ನು ನನ್ನಿಂದ ಕಿತ್ತುಕೊಳಬೇಡಿ. ಈಗ ನೀವು ನನ್ನನ್ನು ಬಿಡಿಸಿದರೂ, ನಾನು ಮಾತ್ರ  ಸುಮ್ಮನೆ ಕೂರುವವನಲ್ಲ..ಮತ್ತೆ ಸಿಡಿದೆದ್ದು ಬ್ರಿಟಿಷರನ್ನು ಹೊಡೆದೋಡಿಸುವೆ.. ರಾಷ್ಟ್ರದ ಸ್ವಾತಂತ್ರ್ಯವನ್ನೇ ಜೀವನದ ಧ್ಯೇಯವನ್ನಾಗಿಸಿದ ಈ ವೆಂಕಟಪ್ಪ ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧನಿದ್ದಾನೆ ಅನ್ನೋದನ್ನ ನೆನಪಿಟ್ಟುಕೊಳ್ಳಿ.. ನನ್ನಂತಹ ಅಸಂಖ್ಯ ದೇಶಭಕ್ತರು ಹುಟ್ಟಿಬರಲಿದ್ದಾರೆ. ಅವರೆಲ್ಲರ ಆಕ್ರೋಶದ ಕಿಡಿಯಲ್ಲಿ ಈ ಬ್ರಿಟಿಶ್ ಸರ್ಕಾರ ಸುಟ್ಟು ಭಸ್ಮವಾಗುವುದಂತೂ ನಿಶ್ಚಿತ.. ಆ ಕಾಲ ಸನ್ನಿಹಿತವಾಗಿದೆ.. ಸಶಕ್ತ, ಸುಭಿಕ್ಷ ನಾಡಿನ ಕನಸಿನಲ್ಲೇ ನಾನಿದ್ದೇನೆ.. 
ಸದಾ ತಾಯಿ ಭಾರತಿಯ ನಗುವನ್ನೇ ಹಂಬಲಿಸುವ ಯುವಕರು ಇರೋತನಕ, ಭಾರತವನ್ನು ನಾಶಮಾಡಲು ಸಾಧ್ಯವಿಲ್ಲ.. ಈ ಮಾತನ್ನು ನಿಮ್ಮ ಅಧಿಕಾರಿಗಳಿಗೆ ಹೇಳಿ. ಭಾರತಾಂಬೆ ಬಂಜೆಯಲ್ಲ. ಸಿಂಹಗಳನ್ನೇ ಹೆರುವ ತಾಯಿ ಆಕೆ.. ಆಕೆಯ ಬಿಡುಗಡೆಯೇ ಭಾರತೀಯರ ಗುರಿ.
ಹರಹರ ಮಹಾದೇವ..!!!!!!!"................





ಇಷ್ಟೆಲ್ಲಾ ಸಂಧಾನದ ನಂತರವೂ, ವೆಂಕಟಪ್ಪನಿಗೆ ಇಷ್ಟವಿಲ್ಲದಿದ್ದರೂ, ಅಂತೂ ಕೊನೆಗೆ, ಟೇಲರ್ ನ ನಿರಂತರ ಮಧ್ಯಸ್ಥಿಕೆಯಿಂದ, ವೆಂಕಟಪ್ಪನಿಗೆ ವಿಧಿಸಲಾದ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಕಡಿತಗೊಲಿಸಲಾಯಿತು., ಆನಂತರ ಅದು ಇನ್ನೂ ಕಡಿಮೆಯಾಗಿ, ನಾಲ್ಕು ವರ್ಷಗಳ ಸೆರೆಮನೆವಾಸವನ್ನು ನೀಡಲಾಯಿತು.. ಇದರಿಂದ, ದೇಶಕ್ಕಾಗಿ ಪ್ರಾಣ ಕೊಡುವ ಸೌಭಾಗ್ಯ ಹೋಯಿತಲ್ಲ ಅಂತ ವೆಂಕಟಪ್ಪ ದುಃಖಿಯಾದರೆ, ಇತ್ತ ಸುರಪುರವನ್ನು ಕೊಳ್ಳೆಹೊಡೆಯಬೇಕೆಂದು ಹವಣಿಸುತ್ತಿದ್ದ ನಿಜಾಮನಿಗೂ ಈ ತೀರ್ಪು ಬೇಸರ ತಂದಿತ್ತು..!!


ಆದರೂ, ಬ್ರಿಟಿಷರಿಗೆ ಇನ್ನೂ ಸಣ್ಣ ಭಯ ಇದ್ದೇ ಇತ್ತು. ವೆಂಕಟಪ್ಪ, ಬಿಡುಗಡೆಯಾಗಿ ಬಂದ ಮೇಲೆ, ಮತ್ತೆ ಸೈನ್ಯ ಕಟ್ಟೇ ಕಟ್ಟುತ್ತಾನೆ. ಆಗ ಸಂದರ್ಭ ಇನ್ನೂ ಭಯಾನಕವಾಗಬಹುದೆಂದು ಅಂದಾಜಿಸಿ, ಬ್ರಿಟಿಷರು ನಿಜಾಮನ ಜೊತೆಗೂಡಿ, ಹೇಗಾದರೂ ಆ ವೆಂಕಟಪ್ಪನನ್ನು ಮುಗಿಸಲು ಸಂಚು ರೂಪಿಸತೊಡಗಿದರು..
ವೆಂಕಟಪ್ಪನ ಸಾಕುತಂದೆ 'ಟೇಲರ್' ಸುರಪುರವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋದಾಕ್ಷಣ, ವೆಂಕಟಪ್ಪನನ್ನು ಸಾಯಿಸಲು ಎಲ್ಲರೂ ಮುಗಿಬಿದ್ದರು..
ವೆಂಕಟಪ್ಪನನ್ನು ಕರ್ನೂಲಿನ ಬಂಧೀಖಾನೆಗೆ ಸಾಗಿಸುವ ವೇಳೆ, ದಾರಿಮಧ್ಯದಲ್ಲೇ, ಅವನನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು.. ಅಪ್ರತಿಮ ಸಾಹಸಿ, ನೈಜ ರಾಷ್ಟ್ರಪ್ರೇಮಿ ಹೀಗೆ ಅನಾಥವಾಗಿ ಹೆಣವಾಗಿ ಬಿದ್ದಿದ್ದ.. ಜನತೆಗೆ ಅನುಮಾನ ಬರಬಾರದೆಂದು, "ವೆಂಕಟಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಅಂತ ಸುಳ್ಳು ಸುದ್ದಿಯನ್ನು ಹಬ್ಬಿಸಲಾಯಿತು.. ಆದರೆ ಸುರಪುರದ ಜನತೆಗಂತೂ, ಇದು ಸಹ್ಯವಿರಲಿಲ್ಲ. ಬ್ರಿಟಿಷರೆ ಅವನನ್ನು ಕೊಂದಿದ್ದಾರೆ ಅನ್ನೋದನ್ನೂ ಊಹೆ ಮಾಡದಷ್ಟು ದಡ್ದರೆನೂ ಅವರಿರಲಿಲ್ಲ..!!!!

ಇದಾದ ಮೇಲೆ, ಮೊದಲೇ ಮಾಡಿಕೊಂಡ ಒಪ್ಪಂದದಂತೆ, ಬ್ರಿಟಿಷರು ನಿಜಾಮನಿಗೆ ಒಂದಿಷ್ಟು ಹಣವನ್ನೂ ಮತ್ತು ಸುರಪುರದ ಭಾಗವನ್ನೂ ನೀಡಿಬಿಟ್ಟರು.. 
ಅಪರಿಮಿತ ಕಾಲಾವಧಿಯಿಂದ, ಧೀರ'ನಾಯಕರ' ಆಳ್ವಿಕೆಯಲ್ಲಿ ಸುಭದ್ರವಾಗಿದ್ದ 'ಸುರಪುರ', ವೆಂಕಟಪ್ಪನ ಮರಣದ ನಂತರ ನಿಜಾಮನ ಆಳ್ವಿಕೆಯ ಭಾಗವಾಯಿತು..

ಇತಿಹಾಸದ ಪುಸ್ತಕಗಳಲ್ಲಿ, ಸುರಪುರ ವೆಂಕಟಪ್ಪ ನಾಯಕನ ಕಥೆ, ಮರೆಯಾಗಿದೆಯಾದರೂ, ಆ ಪ್ರಾಂತದ ಜಾನಪದ ಹಾಡುಗಳಲ್ಲಿ, ಇಂದಿಗೂ ವೆಂಕಟಪ್ಪ ಜೀವಂತವಾಗಿದ್ದಾನೆ.. ಅವನ ಶೌರ್ಯ-ಸಾಹಸ-ದೇಶಭಕ್ತಿಯನ್ನು ಇವತ್ತಿಗೂ ಜನರ ಕಂಠ ಹಾಡಿ ಹೊಗಳುತ್ತಿದೆ.. 
ಸುರಪುರದ ವೆಂಕಟಪ್ಪನ ತರಹದ ರಾಷ್ಟ್ರಪ್ರೇಮಿಗಳು ನಮಗೆ ಆದರ್ಶವಾಗಲಿ.. ರಾಷ್ಟ್ರೀಯತೆಯ ಅಧಃಪತನದಲ್ಲಿರುವ ನಮಗೆ, ವೆಂಕಟಪ್ಪನ ದೇಶಭಕ್ತಿ ಮಾರ್ಗದರ್ಶಿಯಾಗಲಿ..

[ ಅಂದಹಾಗೆ, ಕೆಲವು ಕಾರಣಾಂತರಗಳಿಂದ, ಕಾಲೇಜಿನಲ್ಲಿ,  'ಏಕಪಾತ್ರಾಭಿನಯದ' ಸ್ಪರ್ಧೆಯನ್ನು ಕೈಬಿಡಲಾಯಿತು. ಹೀಗಾಗಿ, ಅಲ್ಲಿ ಅಭಿನಯದ ಮೂಲಕ ಈ ನಾಯಕನನ್ನು ಪರಿಚಯಿಸುವ ಅವಕಾಶ ಸಿಗಲಿಲ್ಲ.. ಸ್ಪರ್ಧೆಯನ್ನು ಕೈಬಿಟ್ಟಿದ್ದಕ್ಕೆ ಬೇಸರವಿದ್ದರೂ, ಒಬ್ಬ ಸ್ವಾತಂತ್ರ್ಯ ಹೋರಾಟಗಾರನ ಪರಿಚಯ ಆಯಿತು ಅನ್ನೋದೇ ನನಗೆ ಹೆಚ್ಚಿನ ಸಂತೋಷ..]


ವೆಂಕಟಪ್ಪ ನಾಯಕನ ಊಹಾತ್ಮಕ ಚಿತ್ರ.( ಸ್ವರಚಿತ..!!!!!!!!! )
                     
ವಂದೇ ಮಾತರಂ....!! 










Sunday 26 February 2012

"ಸ್ವಾತಂತ್ರ್ಯವೀರ"ನ ವ್ಯಕ್ತಿತ್ವ ಅನಾವರಣ..!!

" ಭಗತ್ ಸಿಂಗ್, ರಾಜಗುರು,ಆಜಾದ್ ಮುಂತಾದ ಕ್ರಾಂತಿಕಾರಗಳ ಹೆಸರುಗಳನ್ನು ಕೇಳಿದಾಗಲೆಲ್ಲ ನಾವು ಆದರದಿಂದ ತಲೆಬಾಗುತ್ತೇವೆ.ಆದರೆ, ಇಂತಹ ನೂರಾರು ಕ್ರಾಂತಿಕಾರಗಳನ್ನ ನಿರ್ಮಿಸಿದ 'ಸಾವರ್ಕರ'ರನ್ನು ಸ್ಮರಿಸುವಾಗ ಸಂಕೋಚಕ್ಕೆ ಒಳಗಾಗುವುದು ಬಹಳ ದೌರ್ಭಾಗ್ಯದ ಸಂಗತಿ. ವೀರ ಸಾವರ್ಕರರ ಬಗ್ಗೆ ಅನೇಕ ಭ್ರಮೆಗಳನ್ನು ಹಬ್ಬಿಸಿರುವುದೇ ಇದಕ್ಕೆ ಕಾರಣ.."


ಮಾಜಿ ಕೇಂದ್ರಮಂತ್ರಿ ಹಾಗು ಕಾಂಗ್ರೆಸ್ ನಾಯಕ  'ವಸಂತ ಸಾಠೆ' ಯವರ ಈ ಮಾತು ಯಾವಾಗಲೂ ನನ್ನನ್ನು ಕಾಡಿವೆ.. ಇಲ್ಲಸಲ್ಲದ, ಮಿಥ್ಯಾ ಆರೋಪಗಳನ್ನೇ ನಿಜವೆಂದು ನಂಬಿ, ಒಬ್ಬ ರಾಷ್ಟ್ರೀಯ ಪುರುಷನನ್ನು ಹಿಂಬದಿಗೆ ಸರಿಸಿ, ಅವರ ತೇಜೋವಧೆಯನ್ನೇ ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯೇ..
ಕೇವಲ ಸಾವರ್ಕರರ ಮೇಲಿನ ವೃಥಾ ಅಭಿಮಾನದಿಂದ ಈ ಲೇಖನ ಹೊರಟಿಲ್ಲ.. ಬದಲಾಗಿ ಸಾವರ್ಕರರ ನಿಜಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಷ್ಟೇ..


                                                                             
ಸಾವರ್ಕರ್-ದೇಶಭಕ್ತಿ-ಸ್ವಾತಂತ್ರ್ಯ ಹೋರಾಟ..
ಸಾವರ್ಕರಜೀಯವರ ದೇಶಪ್ರೇಮ ವಿವಾದಾತೀತ.. ಬಾಲ್ಯದಿಂದಲೂ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಬದುಕು ಅದು. ಚಿಕ್ಕಂದಿನಲ್ಲೇ 'ಮಿತ್ರಮೇಳ'ವನ್ನು ಸ್ಥಾಪಿಸಿ ಗೆಳೆಯರಿಗೆ ರಾಷ್ಟ್ರೀಯತೆಯ ಪಾಠ ಕಲಿಸುತ್ತಿದ್ದವರು 
ಅವರು. ಆನಂತರ "ಅಭಿನವ ಭಾರತ"ವನ್ನು ಸ್ಥಾಪಿಸಿ ದೊಡ್ಡ ಕ್ರಾಂತಿಯನ್ನೇ ಹುಟ್ಟುಹಾಕಿದ್ದು ಇತಿಹಾಸ..
ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ’ಸಿಪಾಯಿ ದಂಗೆ’ ಎಂದು ಹೀಗಳೆಯುತ್ತಿದ್ದವರಿಗೆ, ಅದು ಬರೀ ಜಗಳವಲ್ಲ, ಸ್ವಾತಂತ್ರ್ಯದ ಅಡಿಗಲ್ಲು ಎಂಬುದನ್ನು ಪ್ರಮಾಣ ಸಹಿತವಾಗಿ ನಿರೂಪಿಸಿದ್ದರು. ಅವರ ಆ ಪುಸ್ತಕವೇ, ಪ್ರಕಟಣೆಗೂ ಮುನ್ನವೇ ವಿಶ್ವಾದ್ಯಂತ ನಿಷೇಧಕ್ಕೊಳಗಾಯಿತು.. ಆದರೂ ಆ ಪುಸ್ತಕ ರಹಸ್ಯವಾಗಿ ಭಾರತವನ್ನು ಸೇರಿದ್ದಷ್ಟೇ ಅಲ್ಲ, ಬದಲಾಗಿ ವಿಶ್ವದ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಿತಗೊಂಡಿತು..


ಲಂಡನ್ನಿಗೆ ಬ್ಯಾರಿಸ್ಟರ್ ಪದವಿ ತರಲು ಹೋಗಿದ್ದ ಸಾವರ್ಕರ್, ಮರಳಿ ಬಂದದ್ದು ಕೈತುಂಬ ಕೋಳಗಳನ್ನು ತೊಡಿಸಿಕೊಂಡು..!!
ಅಲ್ಲಿಯೇ, ’ಸಾಗರೋತ್ತರ ಅಭಿನವ ಭಾರತ’ದ ಶಾಖೆಯೊಂದನ್ನು ಸ್ಥಾಪಿಸಿದ್ದರು. ಪಂಡಿತ್ ಶ್ಯಾಮಜಿ ಕ್ರಿಷ್ಣವರ್ಮಾರವರು ಕಟ್ಟಿಸಿದ್ದ ’ಭಾರತ ಭವನ’ದಲ್ಲಿ ಪ್ರತಿನಿತ್ಯ ಸಾವರ್ಕರರ ಅಗ್ನಿಜ್ವಾಲೆಯ ಉಪನ್ಯಾಸಗಳು ನಡಿತಿದ್ವು..ಅದರಿಂದ ಪ್ರೇರಿತರಾಗಿ ಸ್ವಾತಂತ್ರ್ಯಸಂಗ್ರಾಮಕ್ಕೆ ಧುಮುಕಿದ ತರುಣರು ಅಸಂಖ್ಯ.
ಮದನ್ ಲಾಲ್ ಧಿಂಗ್ರ, ವಿ.ವಿ.ಎಸ್.ಅಯ್ಯರ್, ಮೇಡಂ ಕಾಮಾ ಎಲ್ಲರೂ ಸಾವರ್ಕರರ ಗರಡಿಯಲ್ಲಿ ಪಳಗಿದವರೇ..
ಬ್ರಿಟಿಶ್ ಸರ್ಕಾರದ ವಿರುದ್ಧ ಕೆಲಸಗಳನ್ನು ಮಾಡುತ್ತಿದ್ದ ಆರೋಪದ ಮೇಲೆ ಆಂಗ್ಲರು ಅವರನ್ನು ಬಂಧಿಸಿ ಭಾರತಕ್ಕೆ ಕಳಿಸಲು ತಯಾರು ಮಾಡಿದರು.. ಮಾರ್ಗಮಧ್ಯೆ ಹಡಗಿನಿಂದಲೇ ಹಾರಿ, ಮಹಾ ಸಮುದ್ರವನ್ನೇ ಈಜಿ, ಫ಼್ರಾನ್ಸ್ ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ, ದುರ್ದೈವದಿಂದ ಸಾಧ್ಯವಾಗಲಿಲ್ಲ.



ಭಾರತದಲ್ಲಿ ವಿಚಾರಣೆ ನಡೆದ ಬಳಿಕ ಬರೋಬ್ಬರಿ 50 ವರ್ಷಗಳ ಅಂಡಮಾನಿನ ಕರಿನೀರಿನ ಶಿಕ್ಷೆ ವಿಧಿಸಲಾಯಿತು.. ಅದನ್ನೂ ನಿರಮ್ಮಳವಾಗಿ ಸ್ವೀಕರಿಸಿದ ಸಾವರ್ಕರ್ ಆ ಅಂಡಮಾನಿನಲ್ಲೂ ರಾಷ್ಟ್ರೀಯತೆಯ ಕಂಪನ್ನು ಪಸರಿಸಿದ ವಾಯು..
ತೆಂಗಿನ ನಾರು ಸುಲಿಯುವ, ಗಾನದ ಎಣ್ಣೆ ತೆಗೆಯುವ, ಒಂಟಿಕೋಣೆಯಲ್ಲಿನ ನರಕಯಾತನೆ ಅನುಭವಿಸಿದರೂ, ಬಿಡುವಾದಾಗಲೆಲ್ಲ ಅಲ್ಲಿಯ ಜನರಿಗೆ ದೇಶದ ಪಾಠ ಹೇಳಿಕೊಡುತ್ತಿದ್ದ ಅದ್ಭುತ ವ್ಯಕ್ತಿ..


ಅಂಡಮಾನಿನ ಕೈದಿಗಳಿಗೆ ಉಳಿದವರಂತೆ ಓದಲು, ಬರೆಯಲೂ ಅವಕಾಶವಿರಲಿಲ್ಲ.. ಆದರೆ ಸಾವರ್ಕರ್ ಮಾತ್ರ ಸುಮ್ಮನೆ ಕೂಡುವವರಲ್ಲ. ಹೇಗೋ ಒಂದು ಮೊಳೆಯನ್ನು ಸಂಪಾದಿಸಿ ಅದರಿಂದಲೇ ಜೈಲಿನ ಗೋಡೆಗಳ ಮೇಲೆಲ್ಲಾ ದೇಶಭಕ್ತಿಯ ಕವನಗಳನ್ನು ಕೆತ್ತಿ, ಬೇರೆಯವರೂ ಅದನ್ನು ಓದಿ ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಿದ್ದ ಚಾಣಾಕ್ಷರು. ಒಟ್ಟು ಹತ್ತುಸಾವಿರ ಸಾಲುಗಳ ಕಾವ್ಯವನ್ನು ಆ ಜೈಲಿನಲ್ಲೇ ರಚಿಸಿ, ಬಿಡುಗಡೆಯಾದ ಮೇಲೆ "ಕಮಲಾ" ಎಂಬ ಹೆಸರಿನಲ್ಲಿ ಪ್ರಕಟಿಸಿದರು..


                   



ಸಾವರ್ಕರ್ ಮತ್ತು ಹಿಂದುತ್ವ..!!

ಸಾವರ್ಕರ್ ಹಿಂದುತ್ವವಾದಿಗಳು ಅನ್ನೋದು ಇತಿಹಾಸವಿದಿತವೆ.. ಆದರೆ ಅದರ ಜೊತೆಗೆ ಅವರು ಅನ್ಯಧರ್ಮಗಳ ಕಟ್ಟಾ ದ್ವೇಷಿಗಳು ಅನ್ನೋ ಆರೋಪವನ್ನ ವಿನಾಕಾರಣ ಮಾಡಲಾಗುತ್ತೆ.
ಸಾವರ್ಕರ್ ಎಂದೂ ಸುಖಾಸುಮ್ಮನೆ ಧರ್ಮಗಳನ್ನ ಹೀಗಳೆದವರಲ್ಲ.. ಗಾಂಧೀಜಿಗೂ ಮುಂಚೆಯೇ "ಹಿಂದೂ-ಮುಸ್ಲಿಂ" ಏಕತೆ ಆಗಬೇಕು ಆನೋದನ್ನ ಮನಗಂಡಿದ್ದವರು. ಅವರ "ಪ್ರಥಮ ಸ್ವಾತಂತ್ರ್ಯ ಸಂಗ್ರಾಮ"ದ ಪುಸ್ತಕ ಓದಿದಾಗಲೇ ಅದರ ಅರಿವಾಗುತ್ತೆ.. ಅಂದು, ನಾನಾ ಸಾಹಿಬ್ ಪೇಶ್ವೆ ಮತ್ತು ಸಹಚರರು, ಹಾಗೂ ಮುಘಲ್ ದೊರೆ 'ಬಹಾದ್ದೂರ್ ಷಾ' ಅದೆಂತಹ ಐಕ್ಯತೆಯನ್ನು ಬೆಳೆಸಿ ಒಟ್ಟುಗೂಡಿ ಆಂಗ್ಲರ ವಿರುದ್ಧ ಬಂಡೆದ್ದ ಘಟನೆಯನ್ನು ಹೇಳುವಾಗಲೇ ಅವರ ಆಂತರ್ಯ ಅರ್ಥವಾಗುತ್ತೆ..


ಆದರೆ, ಆ ಐಕ್ಯತೆಗಾಗಿ ನಮ್ಮತನವನ್ನೆಲ್ಲ ಬಲಿಕೊಡಲು ಸಾವರ್ಕರ್ ಎಂದೂ ಸಿದ್ಧರಿರಲಿಲ್ಲ..
'ಮುಸ್ಲಿಂ ಲೀಗ್' ಅನ್ನು ಸಾವರ್ಕರ್ ವಿರೋಧಿಸಿದ್ದು ಅದಕ್ಕೇ.. ಮುಸ್ಲಿಂ ಲೀಗ್ ಯಾವತ್ತೂ ಭಾರತದ ಮುಸ್ಲಿಮರ ಪ್ರತೀಕವಾಗಿರಲಿಲ್ಲ.. ತಮ್ಮ ತಮ್ಮ ಸ್ವಾರ್ಥ-ಅಧಿಕಾರಗಳಿಗಾಗಿ ಹಂಬಲಿಸುತ್ತಿದ್ದ ಕೆಲವೇ ಕೆಲವು ನಾಯಕರ ಗೂಡು ಅದು..  ದೇಶ ಒಡೆಯಲೆಂದೇ ಹುಟ್ಟಿದ್ದ ಆ ಸಂಘಟನೆಗೆ ಗಾಂಧೀಜಿ ಎಲ್ಲ ಸವಲತ್ತುಗಳನ್ನು ಕೊಡಲಾರಂಭಿಸಿದರು. ಆದರೆ ಮುಸ್ಲಿಂ ಲೀಗ್ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು??????.. "ಕ್ವಿಟ್ ಇಂಡಿಯಾ" ಚಳುವಳಿಗೆ ಸ್ವತಃ ಲೀಗ್ ವಿರೋಧ ವ್ಯಕ್ತಪಡಿಸಿತ್ತು..
ಇಷ್ಟಾದರೂ ಅಂಥಾ ದೇಶದ್ರೋಹಿಗಳನ್ನು ನೆಹರು ಅಂತಹ ದ್ವಿಮುಖಿಗಳು ಬೆಂಬಲಿಸಿದ್ದರು..
ಆದರೆ ಒಬ್ಬ ಸಾವರ್ಕರ್ ಮಾತ್ರ ಸ್ಪಷ್ಟವಾಗಿ ಹೇಳಿದ್ದರು.. "ನೀವು ಬರುವುದಾದರೆ ನಿಮ್ಮ ಜೊತೆಗೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ವಿರೋಧಿಸಿದರೆ ನಿಮ್ಮನ್ನು ಮೆಟ್ಟಿ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಇರುತ್ತೇವೆ" ಅಂತ..


ರಾಷ್ಟ್ರವನ್ನು ದುರ್ಬಲಗೊಳಿಸುವ ಎಲ್ಲಾ ಕಾರ್ಯಗಳನ್ನು ಅವರು ವಿರೋಧಿಸಿತ್ತಿದ್ದರು.. ಹೀಗಾಗಿಯೇ ಪುನಃ "ಶುದ್ಧಿ" ಚಳುವಳಿಯನ್ನ ಅವರು ಆರಂಭಿಸಿದ್ದು.. 
ಮತಾಂತರಕ್ಕೆ 'ಹಿಂದೂ' ಧರ್ಮದ ದೋಷಗಳು ಎಷ್ಟು ಕಾರಣವೋ, ಅಷ್ಟೇ ಬಲವಂತ, ಹಿಂಸೆಯೂ ಕಾರಣ ಅನ್ನೋದನ್ನ ಅವರು ಅಂಡಮಾನಿನಲ್ಲಿ ಸ್ವತಃ ಕಂಡಿದ್ದರು.. 
ಅಲ್ಲಿನ ಪಠಾಣರು ಬಲವಂತವಾಗಿ ಹಿಂದೂಗಳನ್ನ ಮತಾಂತರ ಮಾಡುತ್ತಿದ್ದರೂ ಜೈಲಿನ ಅಧಿಕಾರಿ 'ಮತಾಂತರಕ್ಕೆ ನಮ್ಮ ಸರ್ಕಾರದಲ್ಲಿ ಅವಕಾಶವಿದೆ' ಅಂತ ಹೇಳಿ ಸುಮ್ಮನಾಗಿದ್ದ.. ಹಾಗೆ ಹೇಳಿದ ಮರುದಿನವೇ, ಸಾವರ್ಕರ್ ಮತಾಂತರಗೊಂಡಿದ್ದ ಒಬ್ಬನನ್ನು ಕರೆದು ತಂದು, ಅವನಿಗೆ ತುಳಸಿಯ ನೀರನ್ನು ಕುಡಿಸಿ, ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ತಂದರು..  ಈ ಕಾರ್ಯವನ್ನು ಪ್ರಶ್ನೆ ಮಾಡಿದ ಜೈಲಿನ ಅಧಿಕಾರಿಗೆ, ಸಾವರ್ಕರ್ ನಿಧಾನವಾಗಿಯೇ "ನೀವೇ ಹೇಳಿದ್ದಿರಿ, ನಿಮ್ಮಲ್ಲಿ ಮತಾಂತರಕ್ಕೆ ಅವಕಾಶವಿದೆ ಅಂತ. ಅವರು ಮುಸ್ಲಿಮನಾಗಿ ಮತಾಂತರ ಮಾಡಿದ್ದರು. ನಾನು ಮತ್ತೆ ಹಿಂದೂವಾಗಿ ಮತಾಂತರ ಮಾಡಿದ್ದೇನೆ. ಅದು ತಪ್ಪಲ್ಲ ಅಂದ್ರೆ, ಇದೂ ತಪ್ಪಲ್ಲ." ಎಂದು ಹೇಳಿದಾಗ ಆ ಆಧಿಕಾರಿ ನಿರುತ್ತರನಾಗಿದ್ದ.

                                 


ಸಾವರ್ಕರ್ ಮತ್ತು ಭಾರತ..!!
ಸಾವರ್ಕರ ಕನಸಿನ ಭಾರತ ವಿಶಿಷ್ಠವೇ ಆಗಿತ್ತು.. ಸಾವರ್ಕರರ ಭಾರತದಲ್ಲಿ ಪ್ರತಿಯೂಬ್ಬರಿಗೂ ಸಮಾನ ಹಕ್ಕು ಕರ್ತವ್ಯಗಳಿದ್ದವು.ಆದರೆ ದೇಶದೊಳಗೆ ಮತ್ತೊಂದು ದೇಶ ನಿರ್ಮಿಸುವ ಹಕ್ಕು ಯಾರಿಗೂ ಇರಲಿಲ್ಲ..


ಸಾವರ್ಕರ್ ಬಹುಮುಂಚೆಯೆ ಸಮಾಜಸುಧಾರಣೆಯ ಮಹತ್ವವನ್ನು ಅರಿತವರು. ಅದಕ್ಕೆಂದೇ ರತ್ನಾಗಿರಿಯಲ್ಲಿ "ಪತಿತಪಾವನ" ಮಂದಿರ ನಿರ್ಮಿಸಿದರು. ಅಲ್ಲಿ ಹಿಂದುಳಿದವರೇ ಪೂಜಾರಿಗಳು. ಅವರೇ ತೀರ್ಥ-ಪ್ರಸಾದ ವಿತರಕರು..ಅದಕ್ಕೆ ಚಕಾರ ಎತ್ತಿದವರೆಲ್ಲಾ ಸಾವರ್ಕರರ ತರ್ಕಬದ್ಧ ವಿಚಾರಗಳ ಎದುರು ಸೋತು, ಸಾವರ್ಕರರನ್ನೇ ಹಿಂಬಾಲಿಸಿದರು.

ಸಾವರ್ಕರರನ್ನ ನಾವು ನೆನಪಿಸಿಕೊಳ್ಳಬೇಕಾದದ್ದು ಅವರ ಸೈನ್ಯಕೀಕರಣವನ್ನ. ಎಷ್ಟೇ ಜನ ವಿರೋಧಿಸಿದರೂ ಸಾವರ್ಕರ್ ಮಾತ್ರ ಹಿಂದೂಗಳಿಗೆ ಸೈನ್ಯ ಸೇರಲು ಕರೆ ನೀಡಿದ್ದರು. ಅದರಿಂದ ಪ್ರೇರಿತರಾದ ಅನೇಕರು ಸೈನ್ಯ ಸೇರಿಯೇ ಬಿಟ್ಟರು.. ಅವರ ಆ ದೂರದೃಷ್ಟಿಯ ಪರಿಣಾಮವಾಗಿಯೇ ಇವತ್ತು ಹೈದರಾಬಾದ್ ಪ್ರಾಂತ, ಕಾಶ್ಮೀರಗಳು ಭಾರತದ ಭೂಪಟದಲ್ಲಿವೆ.. ಆದರೂ ಸಾವರ್ಕರರ ಎಣಿಕೆಯಂತೆ ಆ ಕಾರ್ಯ ಪೂರ್ಣವಾಗಿರಲಿಲ್ಲ..
ಚೈನಾ ಯುದ್ಧದಲ್ಲಿ  ಬೇಜವಾಬ್ದಾರಿಯಿಂದ  ಭಾರತ ಸೋತಾಗ ಆಗಿನ ಸೈನ್ಯಾಧಿಕಾರಿ ಕಾರಿಯಪ್ಪನವರು ಹೇಳಿದ್ದು ಅದನ್ನೇ.."ಒಂದು ವೇಳೆ ಭಾರತವು ಸಾವರ್ಕರರ ಸೈನ್ಯಕೀಕರಣದ ನೀತಿಯನ್ನು ಸ್ವೀಕರಿಸಿ ಅದಕ್ಕನುರೂಪವಾಗಿ ಸಿದ್ಧವಾಗಿದ್ದರೆ ಇಂದಿನ ಅಪ್ರಿಯ ಸ್ಥಿತಿಗೆ ಬರುತ್ತಿರಲಿಲ್ಲ.." ಅಂತ..!!

                            


ಸಾವರ್ಕರ್ ಮತ್ತು ಗಾಂಧೀಹತ್ಯೆ 
ಸಾವರ್ಕರ್ ಗಾಂಧೆಹತ್ಯೆಯ ರೂವಾರಿ ಎಂಬೀ ವಾದ, ಗಾಂಧೀಜಿ ಕೊಲೆಯಾದಾಗಿನಿಂದ ಇವತ್ತಿಗೂ ಜೀವಂತವಾಗಿ ಇದೆ.


"ಗಾಂಧೀ ಹತ್ಯೆಯಲ್ಲಿ,ಸಾವರ್ಕರರ ಪಾತ್ರವೇನೂ ಇಲ್ಲ. ಅದಕ್ಕೆ ಯಾವುದೇ ಸಾಕ್ಷ್ಯಗಳೂ ಇಲ್ಲ.ಅದೊಂದು ಹುರುಳಿಲ್ಲದ ಆರೋಪ.ಅವರನ್ನು ಬಿಟ್ಟುಬಿಡಿ"- ಅಂತ ಅಂದಿನ ಕಾನೂನು ಸಚಿವರಾಗಿದ್ದ 'ಶ್ರೀಯುತ ಅಂಬೇಡ್ಕರ'ರು ಸಾರಿ ಸಾರಿ ಹೇಳಿದರೂ, ಪ್ರಧಾನಿ ನೆಹರು ಮಾತ್ರ ಕಿವುಡರಾಗಿದ್ದರು..


ಸಾವರ್ಕರರನ್ನು ಅವಮಾನಿಸಲು ತನಗೆ ಸಿಕ್ಕ ಈ ಅವಕಾಶವನ್ನು, ಆ 'ಗುಲಾಬಿಯ ಚಾಚಾ' ಹೇಗೆ ತಾನೇ ಬಿಡಲು ಸಾಧ್ಯವಿತ್ತು.??!!... ಜೈಲಿನಲ್ಲಿಯೂ ಫ್ಯಾನು, ಸೋಫಾಗಳ ಸುಖದಲ್ಲಿ ದಿನ ಕಳೆಯುತ್ತಿದ್ದ ಆ 'ಗುಲಾಬಿ'ಗೆ, ಅಂಡಮಾನಿನ ಭೀಕರ ಮೃತ್ಯುಕೂಪವನ್ನು ಜಯಿಸಿ ಬಂದ  'ವೀರ'ನ ಬಗ್ಗೆ ತಿಳಿದಿರಬೇಕಿತ್ತು ಅನ್ನೋದೇ ನಮ್ಮ ಮೂರ್ಖತನ..!!!
ಸ್ವಾತಂತ್ರಕ್ಕೂ ಮುಂಚೆ,  ದೇಶಕ್ಕಾಗಿ ಕೋರ್ಟಿನ ಕಟಕಟೆ ಹತ್ತಿದ್ದ ಸಾವರ್ಕರರನ್ನು,  ಸ್ವಾತಂತ್ರ್ಯ ಬಂದ ಮೇಲೂ,ಸುಳ್ಳು ಆರೋಪದೊಂದಿಗೆ, ಕಡೆಗೂ ಕೋರ್ಟಿಗೆ, ಜೈಲಿಗೆ ಅಲೆದಾಡಿಸಿದರು.. ಆದರೆ ನ್ಯಾಯಾಲಯ ಅಂತ ಒಂದಿದೆಯಲಾ.. ಅದಂತೂ ಸ್ಪಷ್ಟವಾಗಿ ಸಾವರ್ಕರರನ್ನು ನಿರ್ದೋಷಿ ಅಂತ ಕೂಗಿ ಹೇಳಿತು..


1949 ಫೆಬ್ರವರಿ 10 ರಂದು, ನ್ಯಾಯಾಧೀಶರಾದ ಆತ್ಮಾಚರಣರು ತಮ್ಮ ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ.
"There is no reason to support that Vinayak Damodar Savarkar had any hand in what took place at Delhi on 20-1-1948 and 30-1-1938"..
ತೀರ್ಪಿನ ಕಡೆಯಲ್ಲಿ ಮತ್ತೊಮ್ಮೆ ಈ ಅಂಶವನ್ನು ಸ್ಪಷ್ಟಪಡಿಸುತ್ತಾ ಹೀಗೆ ಹೇಳಲಾಗಿದೆ..
"Vinayak Damodar Savarkar is found not guilty on the offences as specified in the charge and is acquitted there under he is in custody and can be released forthwith"..
ಇಷ್ಟು ಸ್ಪಷ್ಟವಾದ ನಿರ್ಣಯವಾಗಿದ್ದರೂ, ಕಂಡೂ ಕುರುಡರಂತೆ ಕೆಲವರು ವರ್ತಿಸುತ್ತಿದ್ದಾರೆ ಅಂದ್ರೆ, ಅವರ ಬಗ್ಗೆ ಒಂದು ಸಣ್ಣ ಮರುಕವನ್ನಷ್ಟೇ ಪಡಬಹುದು..!!!!!!!!!




ಸಾವರ್ಕರರ ಬೆಗ್ಗೆ ಅಪಾರ ಅಭಿಮಾನ ಮೂಡುವುದೇ ಈ ಎಲ್ಲ ಕಾರಣಕ್ಕಾಗಿ.. ಅವರದು ಹತ್ತು ಹಲವು ಮುಖ. ಸದಾ 'ರಾಷ್ಟ್ರ'ದಲ್ಲೇ 'ಧ್ಯಾನಾ'ಸಕ್ತ ಮನಸ್ಸು ಅವರದು..ಆದರೆ ಅವರ ಜೀವನದ ಒಂದಿಂಚನ್ನೂ ಓದದ, ಓದಿದರೂ ಅರ್ಥೈಸಿಕೊಳ್ಳಲಾಗದವರು ಕೇವಲ  ಆರೋಪಗಳನ್ನು ಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ..ಆದರೆ, ಬದುಕಿಡೀ ದೇಶಕ್ಕಾಗಿ ಜೀವವನ್ನು ಬಲಿಕೊಟ್ಟ ಅವರಿಗೆ, ಒಂದು ಸಣ್ಣ ಕೃತಜ್ಞತೆಯನ್ನೂ ಹೇಳಲು ಹಿಂಜರಿಯುವಂತಾಯಿತಲ್ಲಾ..! ಅದೇ ಬೇಸರ..!!



ಸಾವರ್ಕರ್ಜೀ ನೀವು ಸದಾ ನಮ್ಮ ಮನದಲ್ಲಿದ್ದೀರಿ..
ನಿಮ್ಮ ತಾರ್ಕಿಕ, ರಾಷ್ಟ್ರೀಯ ವಿಚಾರಗಳು ಎಂದಿಗೂ ನಮಗೆ ಸ್ಫೂರ್ತಿ..
ಸಶಕ್ತ ಭಾರತಕ್ಕಾಗಿ ನಿಮ್ಮ ವಿಚಾರಧಾರೆ ನಮಗೆ ಬೇಕಾಗಿದೆ.. 
ನಿಮ್ಮ ಅದ್ಭುತ ವ್ಯಕ್ತಿತ್ವದ ಒಂದಂಶವನ್ನು ನಮಗೂ ಹರಸಿ..


ವಂದೇ ಮಾತರಂ...........!!!!!






Friday 17 February 2012

ಸಶಸ್ತ್ರಕ್ರಾಂತಿಯ ಪೀಠಿಕೆ - ಬರೆದಿತ್ತವನು ಫಡ್ಕೆ...!!!!!!

ಆಗ ತಾನೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಭೀಕರತೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಬ್ರಿಟಿಷರಿಗೆ, ಅದರಷ್ಟೇ ಪ್ರಖರ ಭಯವನ್ನು ಒಬ್ಬನೇ ವ್ಯಕ್ತಿ ಮತ್ತೊಮ್ಮೆ ಹುಟ್ಟಿಸಿದ್ದ..


                                                 


ಅವನ ಹೆಸರು "ವಾಸುದೇವ ಬಲವಂತ ಫಡ್ಕೆ". ಮಹಾರಾಷ್ಟ್ರದ ಶಿರ್ಧೋನ್ ನಲ್ಲಿ ಜನನ. 1857 ಸಂಗ್ರಾಮ ನಡೆದಾಗ, ಆತ ಹೈಸ್ಕೂಲ್ ಓದುತ್ತಿದ್ದ. ಅದರಿಂದ ಪ್ರೇರಿತಗೊಂಡ ಫಡ್ಕೆ ಅರ್ಧಕ್ಕೆ ಶಾಲೆಗೆ ನಮಸ್ಕಾರ ಹೇಳಿದ.
1860 ರಲ್ಲಿಯೇ ಅವನ ಮದುವೆಯೂ ಆಯಿತು. ಇಷ್ಟ ಇಲ್ಲದಿದ್ದರೂ ಸಂಸಾರದ  ನಿರ್ವಹಣೆಗೆ  ಒಂದು ವೈದ್ಯಕೀಯ ಕಾಲೇಜಿನಲ್ಲಿ ನೌಕರಿ ಸೇರಿದ.
ಅದೊಮ್ಮೆ ಅವನ ತಾಯಿ ತೀರಾ ಅಸ್ವಸ್ಥರಾದ ಸಂದೇಶ ಬಂತು. ಕೂಡಲೇ ರಜೆಗೆ ಅರ್ಜಿ ಹಾಕಿದರೂ ಅನುಮತಿ ಸಿಗಲಿಲ್ಲ. ಆದರೂ ಲೆಕ್ಕಿಸದೆ ಊರಿಗೆ ಹೋದಾಗ ಅವನ ತಾಯಿ ಅದಾಗಲೇ ಸ್ವರ್ಗಸ್ಥರಾಗಿದ್ದರು. ಇದರಿಂದ ಆಕ್ರೋಶಗೊಂಡ ಫಡ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದ..


ನಿಜವಾಗಿ ಇತಿಹಾಸ ಗಮನಿಸೋದಾದ್ರೆ, ಈ "ಸ್ವದೇಶೀ" ಚಳುವಳಿಯನ್ನು ಮನೆಮನೆಗೂ ಕೊಂಡೊಯ್ದ ಮೊದಲಿಗ ಅಂದ್ರೆ ಈ ಫಡ್ಕೇನೆ.. ಜಸ್ಟಿಸ್ ಮಹದೇವ್ ಗೋವಿಂದ್ ರಾನಡೆಯವರ ಸ್ವದೇಶೀ ವಿಚಾರಗಳಿಂದ ಸ್ಫೂರ್ತಿ ಪಡೆದ ಫಡ್ಕೆ, ಗಲ್ಲಿ ಗಲ್ಲಿಗಳಿಗೂ ಹೋಗಿ, ಸ್ವದೆಶಿತನದ ಮಹತ್ವದ ಬಗ್ಗೆ ಉಪನ್ಯಾಸ ನೀಡುತ್ತಿದ್ದ.
ಆದರೆ, ಜನರಲ್ಲಿ ಅಂತಸ್ಸತ್ವ ಕಳೆದುಹೋಗಿತ್ತು. ಕೇವಲ ಭಾಷಣಗಳಿಂದ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬೇಗನೆ ಅರ್ಥವಾಯಿತು. ಅಲ್ಲದೆ ಯುವಕರಿಗೆ ರಾಷ್ಟ್ರೀಯ ಶಿಕ್ಷಣ ಅವಶ್ಯಕ ಎಂಬ ದೃಷ್ಟಿಯಲ್ಲಿ ಶಿಕ್ಷಣ ಸಂಸ್ಥೆಯನ್ನೂ ತೆರೆದ.
ಇದರ ಮಧ್ಯೆಯೇ, ಮಹಾರಾಷ್ಟ್ರದಲ್ಲಿ ಭೀಕರ ಕ್ಷಾಮ ತಲೆದೋರಿತು.ಜನ ಒಪ್ಪತ್ತು ತುತ್ತಿಗೂ ಗತಿಯಿಲ್ಲದೆ ಪರದಾಡುವಂತಾಯಿತು. ಆದ್ರೆ ಕ್ರೂರ ಬ್ರಿಟಿಶ್ ಸರ್ಕಾರ ಮಾತ್ರ, ಎಂದಿನಂತೆ ತೆರಿಗೆಯ ವಸೂಲಿಯನ್ನು ಮುಂದುವರೆಸಿತು.ಬ್ರಿಟಿಷರ ಈ ನೀಚಕೃತ್ಯಗಳಿಂದ ಕುಪಿತನಾದ ಫಡ್ಕೆ ಮುಂದೆ ಇಟ್ಟ ಹೆಜ್ಜೆಯೇ ಇತಿಹಾಸ..


ಮಹಾರಾಷ್ಟ್ರದ ಗುಡ್ಡಗಾಡಿನಲ್ಲಿ "ರಾಮೋಷಿ" ಎಂಬ ಜನಾಂಗ ವಾಸವಾಗಿತ್ತು. ಕಾಡಿನ ರಕ್ಷಣೆಯೇ ಅವರ ಕಾಯಕ.. ಆದರೆ ಆಂಗ್ಲರು ಕಾಡನ್ನು ನಾಶಗೊಳಿಸಿದಾಗ, ಸಹಜವಾಗಿಯೇ ಆ ಜನರಲ್ಲಿ ಬ್ರಿಟಿಷರ ವಿರುದ್ಧ ಒಂದು ದ್ವೇಷ ಮನೆಮಾಡ್ತು. ಫಡ್ಕೆಗೆ ಬೇಕಾಗಿದ್ದೂ ಇದೆ. ಅದೇ ರಾಮೋಷಿ ಜನರನ್ನು ಗುಮ್ಪುಮಾಡಿ, ಅವರೆಲ್ಲರಿಗೂ ಶಸ್ತ್ರಗಳ ತರಬೇತಿ ಕೊಟ್ಟ. ಗೆರಿಲ್ಲಾ ಯುದ್ಧತಂತ್ರಗಳನ್ನು ಕಲಿಸಿದ. ಅಲ್ಲೊಂದು ದೊಡ್ಡ ಸೈನ್ಯವೇ ತಯಾರುಗೊಂಡಿತ್ತು..ಕೊನೆಗೆ 23 ಫೆಬ್ರುವರಿ 1879 ರಲ್ಲಿ, 'ಧಮರಿ' ಗ್ರಾಮದಲ್ಲಿ ತನ್ನ ಬಂಡಾಯದ ಬಾವುಟವನ್ನು ಏರಿಸಿಯೇ ಬಿಟ್ಟ..!!!
ಮೊದಮೊದಲಿಗೆ, ಫಡ್ಕೆ ನಡೆಸಿದ್ದು, ಆಂಗ್ಲರನ್ನು ಓಲೈಸುತ್ತಿದ್ದ ಶ್ರೀಮಂತರ ಮನೆಗಳ ಮೇಲೆ ದಾಳಿ. ಅಲ್ಲಿ ಸಿಕ್ಕ ಹಣವನ್ನು, ಶಸ್ತ್ರಗಳನ್ನೂ ಸಂಘಟನೆಯ ಬಲವರ್ಧನೆಗೆ ಬಳಸುತ್ತಿದ್ದ.. ಹೀಗೆ ಮುಂದಿನ 4-5 ವರ್ಷಗಳ ವರೆಗೂ ಆಂಗ್ಲರ ವಿರುದ್ಧದ ಹೋರಾಟಗಳು ನಿರಂತರ ನಡೆದವು. ಫಡ್ಕೆ ಆಂಗ್ಲರಿಗೆ ಅಕ್ಷರಶಃ "ಸಿಂಹಸ್ವಪ್ನ"ವಾಗಿದ್ದ..


ಬ್ರಿಟಿಶ್ ಸರ್ಕಾರ, ಮೇಜರ್ ಡೆನಿಯಲ್ ನ ಮುಂದಾಳತ್ವದಲ್ಲಿ ಒಂದು ಪಡೆ ರಚನೆ ಮಾಡಿತು.. ಅದರ ವಾಸನೆ ಬಡಿದ ಕೂಡಲೇ, ಫಡ್ಕೆ ಭೂಗತನಾದ. ಬ್ರಿಟಿಷರ ಎಲ್ಲ ಪ್ರಯತ್ನ ವ್ಯರ್ಥವಾಯಿತು..ಆದರೆ ದೇಶದ ದೌರ್ಭಾಗ್ಯವೆಂಬಂತೆ, ಅದೊಮ್ಮೆ ಅತೀವ ಜ್ವರದಿಂದ ಬಳಲಿ, ಕದಲಗಿ  ಎಂಬಲ್ಲಿ ಮರೆಸಿಕೊಂಡಿದ್ದಾಗ, ಬ್ರಿಟಿಷರ ಸೆರೆಯಾದ. ಅಲ್ಲಿಂದ ಆತನ ಬದುಕು ಯಾತನಾಮಯ..!!!


ನೆಪಕ್ಕೆಂದು ವಿಚಾರಣೆ ನಡೆಸಿದ ಕೋರ್ಟ್, ಆಂಗ್ಲರ ವಿರುದ್ಧ ಬಂಡೆದ್ದ ಕಾರಣಕ್ಕೆ ಶಿಕ್ಷೆ ವಿಧಿಸಲಾಯಿತು. ಅದೂ ಎಲ್ಲಿಗೆ, ದೂರದ ಅರಬ್ ನ ಎಡನ್ನಿನ ಸೆರೆಮನೆ..!!!!
ಭಾರತದ ಯಾವುದೋ ಸೆರೆಮನೆಯಲ್ಲಿ ಇಡಬಹುದಾಗಿತ್ತಾದರೂ, ಅವನನ್ನು ಎಡನ್ನಿಗೆ ಸಾಗುಹಾಕಲಾಯಿತು..ಯಾಕಂದ್ರೆ ಆಂಗ್ಲರಿಗೂ ಗೊತ್ತಾಗಿತ್ತು. ಈ ಭೂಪ, ದೇಶದ ಯಾವ ಮೂಲೆಯಲ್ಲಿದ್ದರೂ ಮತ್ತೆ ಭುಗಿಲೆದ್ದು ಬರುವ ಜ್ವಾಲಾಮುಖಿ ಅಂತ..


ಫಡ್ಕೆ ಅತೀಭಾವುಕನಾಗಿ, ತನ್ನ ತಾಯ್ನಾಡನ್ನು ತೊರೆದು ಹೊರಟ. ಅದೊಂದು ಮೃತ್ಯುಕೂಪ. ತಿನ್ನಲು ಅರೆಬೆಂದ ಆಹಾರ., ಕುಡಿಯಲು ಹೊಲಸು ನೀರು, ಅದೂ ಚರ್ಮದ ಚೀಲದಲ್ಲಿ..!!
ದಿನನಿತ್ಯದ ಕಷ್ಟಗಳಿಂದ ಫಡ್ಕೆ ನೊಂದಿದ್ದರೂ, ಅವನ ದೇಶಭಕ್ತಿಗೆ ಕಿಂಚಿತ್ತೂ ಧಕ್ಕೆ ಆಗಿರಲಿಲ್ಲ. ತನ್ನ ದೇಶಕ್ಕೆ ಮತ್ತೆ ಹೋಗಬೇಕೆಂಬ ವಾಂಛೆ ಸದಾ ಅವನಲ್ಲಿತ್ತು. ಭಾರತವನ್ನು ಸ್ವಾತಂತ್ರಗೊಳಿಸಬೇಕು ಅನ್ನೋದೊಂದೇ ಅವನಲ್ಲಿದ್ದ ತುಡಿತ.. ಹೇಗಾದರೂ ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ಯಾವಾಗಲೂ ಚಿಂತಿಸುತ್ತಿದ್ದ..ಹಾಗೆ ಯೋಚಿಸಿ ಒಮ್ಮೆ, ಜೈಲಿನ ಬಾಗಿಲನ್ನೇ ಮುರಿದು, ಅದನೆ ಏಣಿಯಂತೆ ಏರಿ, ಜೈಲಿನಿಂದ ತಪ್ಪಿಸಿಕೊಂಡುಬಿಟ್ಟ. ಆದರೆ ಹೋಗೋದಾದ್ರೂ ಎಲ್ಲಿಗೆ.? ಸುತ್ತಲೂ ಮರುಳುಗಾಡು. ಜನ-ಭಾಷೆ-ದಾರಿ ಯಾವುದೂ ಗೊತ್ತಿಲ್ಲ.. ಆದರೂ ನಿರಂತರ ಓಡಿದ. ಕೊನೆಗೆ ಸುಸ್ತಾಗಿ ಮೂರ್ಚೆತಪ್ಪಿ ಬಿದ್ದ.. ಅಲ್ಲಿನ ಕೆಲವರು ಅವನನ್ನು ಹಿಡಿದು ಮತ್ತೆ ಆಂಗ್ಲರಿಗೆ ಒಪ್ಪಿಸಿದರು.
ಅಂದಿನಿದ ಅವನ ಮೇಲಿನ ನಿಗಾ ತೀವ್ರವಾಯಿತು.ಇನ್ನೂ ಹೆಚ್ಚಿನ ಕ್ರೂರತನವನ್ನು ತೋರಿಸಲಾರಮ್ಭಿಸಿದರು.


ಭಾರತಮಾತೆಗಾಗಿ, ಅವಳ ಸ್ವಾತಂತ್ರಕ್ಕಾಗಿ ಇದೆಲ್ಲವೂ ಕರ್ತವ್ಯವೇ ಎಂದು ಎಲ್ಲವನ್ನೂ ಸಹಿಸಿಕೊಂಡ..
ಆದರೆ, ಅಷ್ಟರಲ್ಲೇ ಅವನಿಗೆ ಕ್ಷಯ ರೋಗ ತಗುಲಿತು. ಆ ರೋಗದ ನಿರಂತರ ನರುಳುವಿಕೆಯಲ್ಲೇ ಫಡ್ಕೆ 17 ಫೆಬ್ರುವರಿ 1883 ರಂದು ಹುತಾತ್ಮನಾದ.. ಅವನು ಸಾಯುವಾಗಲೂ ಅವನ ಕೈಯಲ್ಲೊಂದು ಗಂಟಿತ್ತು. ಅದರಲ್ಲಿ "ಪುಣ್ಯ ಭಾರತ"ದ ಮಣ್ಣು ಇತ್ತು..(ಭಾರತದಿಂದ ಹೊರಡುವಾಗ ಅದನ್ನ ತುಂಬಿಕೊಂಡು ಬಂದಿದ್ದ ಆ ಭೂಪ..)!!!


ತಮ್ಮದೆಲ್ಲವನ್ನೂ ನಾಡಿಗೆ ಅರ್ಪಿಸಿದ ಇಂತಹ ಮಹಾನೀಯರಿಂದಲೇ, ಇವತ್ತು ನಾವು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ.. ಆದರೆ ಆ ಸ್ವಾತಂತ್ರ್ಯದ ಅಮಲಿನಲ್ಲಿ, ಅದಕ್ಕಾಗಿ ಶ್ರಮಿಸಿದವರನ್ನು ಮರೆತಿರುವುದು ಮಾತ್ರ ದೌರ್ಭಾಗ್ಯ..!!!


ವಾಸುದೇವ ಬಲವಂತ ಫಡ್ಕೆಯ ಹೌತಾತ್ಮ್ಯದಿನವಾದ ಇಂದು, ಅವನ ದಿವ್ಯಚೇತನಕ್ಕೆ ವಂದಿಸುತ್ತಾ, ಇನ್ನಷ್ಟು ಅಂತಹ ಸಿಂಹಗಳು ಭಾರತಗರ್ಭದಲ್ಲಿ ಜನ್ಮಿಸಲಿ ಎಂಬ ಹಾರೈಕೆಯೊಂದಿಗೆ..
ವಂದೇ ಮಾತರಂ...!!!!!!!

Wednesday 1 February 2012

ನಾನೊಬ್ಬನೆ ಬದಲಾದರೆ....

ನಾನೊಬ್ಬನೆ ಬದಲಾದರೆ, ದೇಶವು ಬದಲಾಗದು.
ಎನ್ನುವ ಭ್ರಮೆಯ ಬಿಡದೆ, ದೇಶಕೆ ಒಳಿತಾಗದು..

ಸಾವಿರಾರು ಮೈಲಿಗಳ ದೂರದ ಪ್ರಯಾಣಕ್ಕೆ,
ಪ್ರಾರಂಭವು ಒಂದು ಪುಟ್ಟ ಹೆಜ್ಜೆಯೇ ಅಲ್ಲವೇ ?
ಆ ಹೆಜ್ಜೆಯನಿಡಲೂ ಆಲಸ್ಯವ ತೋರಿದರೆ 
ದಿಗಂತದ ಗುರಿಯೆಡೆಗೆ ತಲುಪುವುದು ಸಾಧ್ಯವೇ?

ವಿಸ್ತಾರದ ಸಾಗರವೂ ಇತ್ತು ಮೊದಲು ಬಿಂದು,
ಒಂದು ಕಾಳಿನಿಂದ ಬೆಳೆಯ ರಾಶಿಯಾಯಿತಿಂದು.
ಗಣಿತದೆಲ್ಲ ಎಣಿಕೆಗಳಿಗೆ ಆರಂಭವೇ ಒಂದು,
ಒಂದರಿಂದಲೇ ಅನಂತ, ಸತ್ಯವಿದೆಂದೆಂದೂ..

ಬಯಲಿನಲಿ ರಭಸದಿ, ಪ್ರವಹಿಸುವ ನದಿಗಳು,
ಗಿರಿ ಒಡಲಲಿ ಜನಿಸುತಲೇ, ಭೋರ್ಗರೆಯುವುವೇ
ಗಗನವನೆ ಮುಟ್ಟುವಂತೆ ಕಟ್ಟಿರುವ ಸೌಧಗಳು,
ಅಡಿಗಲ್ಲನೆ ಇಡದೆ, ಸುಸ್ಥಿರದಿ ನಿಲ್ಲುವುವೇ..???

ಸತ್ಕಾರ್ಯದ ಆರಂಭವು ಇರುವುದೆಂದೂ ಕ್ಷೀಣ,
ಮುನ್ನಡೆಯುತ ಆಗುವುದು ಬೃಹತ್ಕಾರ್ಯ ಕ್ರಮೇಣ..
ಒಬ್ಬನೇ ಇದ್ದರೂ ಏನು? ಮನದೊಳಿರೆ ಸಚ್ಚಲ,
ಭಾರತದುನ್ನತಿಯಾಗುವುದು.. ಅತಿ ನಿಶ್ಚಲ.....

Tuesday 24 January 2012

ಭವ್ಯಭಾರತೀ..

( ಭಾಮಿನಿ ಷಟ್ಪದಿಯಲ್ಲಿ ವಿರಚಿತ, ಭಾರತಾಂಬೆಯ ವರ್ಣನಾ ಸ್ತುತಿ..)

                          
 
ಸುತ್ತ ಸಾಗರದೊತ್ತಲೆಯ ಮುಗಿ-
ಲೆತ್ತರಗ ಭೋರ್ಗರೆವ ನದಿ ಫಲ
ಹೊತ್ತ ತರುಗಳ ಮುತ್ತು ರತ್ನವ ಬಿತ್ತಿ ಬೆಳೆದಿಹರ..
ಉತ್ತಮತ್ವದಿ ನಿತ್ಯ ರಾಜಿಪ
ಹೆತ್ತ ಭಾರತತಾಯಿಯಂಘ್ರಿಗೆ
ಮತ್ತೆ ಮತ್ತೆ ನಮಸ್ಕರಿಸಿ ಸಂಪ್ರಾರ್ಥಿಸುವೆ ಶುಭಕೆ...||೧||
 
ಆರ್ಷಚರಣಾರಾಮ ಗೋಪೀ
ಹರ್ಷಕನ ಲೀಲಾಲಹರಿಯಾ
ಕರ್ಷಿಸುವ ಮಹಿಮಾಮಹೀಪತಿವೃಂದ ತೇಜವನು..
ವರ್ಷಿಸುತಲಿರೆ ನಾಕಲೋಕವು
ಈರ್ಷಿಸುವ ತೆರದಲಿಹ ದೇವಮ-
ಹರ್ಷಿಗಣಸನ್ನಮಿತ ಭಾರತದೇವಿಗಾನಮಿಪೆ...||೨||
 
ನೇತ್ರವಹ್ನಿಯ ರೂಪೆರಡುದಶ
ಪುತ್ರಿ ದಕ್ಷನ ತಾಳ್ದ ನವಕೃತಿ
ಮಿತ್ರಪಾದ್ಯಧಿದೇವತಾ ಬಹುಪುಣ್ಯಪೂರುಷರ..
ಸತ್ರಯಾಗತಪೋಬಲದಿ ಸುಪ
ವಿತ್ರಭೂತಳಸಂಖ್ಯ ದಿವ್ಯ
ಕ್ಷೇತ್ರಧಾಮ ಪುನೀತಭಾರತದೇವಿಗಾನಮಿಪೆ...||೩||
 
ಸಾಲುಗೂಡುತ ಮಾರುತಗಳನು
ಕೂಲಿಸುವ ಹಿಮವಿಂಧ್ಯಸಹ್ಯಸು
ಶೈಲದಾವಳಿ ಬಗೆಯ ಖಗಮೃಗಸಂಗವಿಂಬಿಟ್ಟು..
ಹಾಲುನೊರೆಜಲಪಾತ ಝರಿಯನು
ಗಾಲ ಹಸಿರಿನ ವಸ್ತ್ರಧರ ವನ
ಮಾಲೆಯಿಂ ಭ್ರಾಜಿಸುವ ಭಾರತದೇವಿಗಾನಮಿಪೆ...||೪||
 
ದೇವನದಿ ಯಮುನಾ ಸರಸ್ವತಿ
ಪಾವನಾ ಕಾವೇರಿ ಕೃಷ್ಣೆಯ
ರಾವಗಂ ಮೈದುಂಬಿ ನರ್ತಿಸಿ ನಾಡಮೈದೊಳೆದು
ಹೂವುಕೇಸರಘನವ ಚಿಗುರಿಸಿ
ಜೀವಸಂಕುಲಗಳನು ಪೋಷಿಸಿ
ಕಾವ ಧುನಿತೀರ್ಥಗಳ ಭಾರತದೇವಿಗಾನಮಿಪೆ...||೫||
 
ವ್ಯಾಸಮುಖಸುಜ್ಞನಿಧಿ ಕಾಳಿಯ
ದಾಸಬಾಣಪ್ರಭೃತಿ ಪದದು
ಲ್ಲಾಸ ಪಂಪಾದಿಕವಿವಾಣೀಸ್ರೋತವುಗಮಿಸಿಹ..
ಲೇಸುಧರ್ಮಪ್ರಚುರಗೊಳಿಸಿದ
ಸಾಸಿರ ಮತಾಚಾರ್ಯಗುರುವಾ-
ಗ್ಭಾಸದಿಂ ಶೋಭಿಸಿಹ  ಭಾರತದೇವಿಗಾನಮಿಪೆ...||೬||
 
ವೇದಗೀತೊಂಕಾರದಿಂದ
ಪ್ರಾದಿಗೊಂಡತಿವಿಸ್ತರಿಪ ಸಂ
ವಾದಿಮುಖ್ಯಸ್ವರದಿ ನೈಕಧ ರಾಗರಾಗಿಗಳ..
ನಾದಭಾವದಲಯಕೆ ಭಂಗಿಯ
ಭೇದ ಮುದ್ರಿಪ ಕೋವಿದರ ಮನ
ಮೋದನಾಟ್ಯಪ್ರಥಿತ ಭಾರತದೇವಿಗಾನಮಿಪೆ...||೭|| 
 

ಕಲ್ಲಿನಲಿ ಕಾವ್ಯಗಳ ಮೂರ್ತಿಸಿ
ಪಲ್ಲವಿಸಿ ಗುಡಿಗೋಪುರಗಳತಿ
ಮಲ್ಲರಾಜರ ವಿಜಯಚಿಹ್ನೆಯ ಶಿಲ್ಪ ರಚಿಸಿಹರ..
ಫುಲ್ಲವರ್ಣದ ಕುಂಚದಲಿ ಸವಿ
ಫುಲ್ಲರೂಪದಚಿತ್ರಗಳ ಪರಿ-
ಫುಲ್ಲಿಸಿದ ಕಲೆಗಾರಭಾರತದೇವಿಗಾನಮಿಪೆ...||೮||

ಪ್ರಾಂತದೇಶಕೆ ಭಿನ್ನತೆಯ ಸಿರಿ
ವಂತ ಭಾಷಾಪ್ರಕರಯುಕ್ತ ನಿ
ತಾಂತ ಶಿಷ್ಟಾಚರಣಶೀಲ ಸುಸಂಸ್ಕೃತರು ಬೆರೆತ..
ಶಾಂತಿ ನಾಡಿನ ಕದಡಿದಧಮರ
ನಂತಿಸಲು ಮೊಳಗಿದ ಯುವಜನ
ಕ್ರಾಂತಿಗಳ ವಿಕ್ರಾಂತಭಾರತದೇವಿಗಾನಮಿಪೆ...||೯||  
 
ಲೋಕಮಾತೆಯೆ ಕಮಲೆ ವೀಣೆಯ 
ಝೇಂಕರಿಪ ವಾಗ್ದೇವಿ ದುರ್ಗೆಯೆ
ಪಂಕಜಾನನೆ ವಿಮಲೆ ಸರ್ವಪ್ರೇರಕಳೆ ಒಲಿದು..
ಶ್ರೀಕರಳೆ ನಿಜಕರದೊಳೆನ್ನ
ಸ್ವೀಕರಿಸು ಮಜ್ಜನನಿ ಭಾರತಿ
ಯೇಕಮಾತ್ರಭಿಲಾಷೆಯಿದುವೀ 'ಭಾರತೀಯ'ನಿಗೆ...||೧೦||

Thursday 19 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 3


ಜೂನ್ 28-1930.ಚಿತ್ತಗಾಂಗ್ ನ ಜನತೆಗೆ ಆಘಾತಕಾರಿ ವಿಷಯವೊಂದು ತಿಳಿಯಿತು.ಕ್ರಾಂತಿಯ ನಾಯಕರಲ್ಲಿ ಒಬ್ಬನಾದ "ಅನಂತ ಸಿಂಹ" ಆಂಗ್ಲರಿಗೆ ಶರಣಾದ ಸುದ್ದಿ ಅದು.ವಿಷಯ ತಿಳಿದಾಕ್ಷಣ ಎಲ್ಲರಿಗೂ ದಿಗ್ಭ್ರಮೆ.ಯಾರೊಬ್ಬರೂ ಇದನ್ನು ನಂಬಲು ತಯಾರಿರಲಿಲ್ಲ.

ಜೊತೆಗೆ ಜನರಲ್ಲಿ ಅನೇಕ ಗಾಳಿಸುದ್ದಿಗಳೂ ಹರಿದಾಡಲಾರಂಭಿಸಿದವು."ಇದು ಬ್ರಿಟಿಶರೇ ಹಬ್ಬಿಸಿರುವ ಸುಳ್ಳು ಸುದ್ದಿ ಇರಬೇಕು. ಯಾಕಂದ್ರೆ ಬಂಧನಕ್ಕೆ ಉಳಿದಿರೋದು ಅನಂತ ಒಬ್ಬನೆ.ಈಗ ಅವನನ್ನೂ ಹಿಡಿದು ಬಾಯಿ ಬಿಡಿಸುತ್ತಿದ್ದೇವೆ ಅಂತ ಸುದ್ದಿ ಹಬ್ಬಿಸಿದರೆ, ಉಳಿದ ಕ್ರಾಂತಿಕಾರಿಗಳು ಅನಂತನನ್ನು ಕೊಲ್ಲಬಹುದು ಅನ್ನೋ ಉದ್ದೆಶದಿಂದ ಈ ಸುದ್ದಿ ಎದ್ದಿರಬಹುದು." ಅಂತ ಕೆಲವು ಜನ ಅಂದುಕೊಂಡ್ರು.. "ಇಲ್ಲ, ಇದು ಸೂರ್ಯಸೇನನೇ ರೂಪಿಸಿರುವ ಯೊಜನೆ ಇರಬೇಕು. ಉಳಿದ ಯುವಕರಿಗೆ ಜೈಲಿನಲ್ಲಿ ಹಿಂಸೆ ಕೊಡದಿರಲು ಅನಂತ ಈ ನಿರ್ಧಾರ ತೊಗೊಂಡಿರಬಹುದು." ಅಂತ ಇನ್ನೂ ಕೆಲವರು ಭಾವಿಸಿದರು..ಆದರೆ, ಅನಂತ ಬ್ರಿಟಿಶರಿಂದ ಬಂಧಿತನಾಗಿದ್ದಂತೂ ನಿಜವೇ ಆಗಿತ್ತು..

ಅನಂತ ಸಿಂಹ
                                

ಅನಂತ ಒಬ್ಬ ಮಹಾನ್ ಯೋದ್ಧಾ.. ಇಡೀ ಚಿತ್ತಗಾಂಗ್ ನ ಕ್ರಾಂತಿಯಲ್ಲಿ ಮೊದಲಿಂದಲೂ ಯೋಜನೆಯಲ್ಲಿ ಇದ್ದವನು ಇವನು..ಪ್ಲಾನಿನ ಪ್ರಕಾರ, ಒಟ್ಟು ಎರಡು ಶಸ್ತ್ರಾಗಾರಗಳ ಮೇಲೆ ಆಕ್ರಮಣ ಆಗಬೇಕಿತ್ತು. ಒಂದು ಪೋಲಿಸ್ ಶಸ್ತ್ರಾಗಾರ. ಮತ್ತೊಂದು ಅರೆಸೈನ್ಯದ ತುಕಡಿಯ ಶಸ್ತ್ರಾಗಾರ. ಇವೆರಡರಲ್ಲಿ ಪೋಲಿಸ್ ಶಸ್ತ್ರಾಗಾರವನ್ನು ಆಕ್ರಮಿಸುವ ಹೊಣೆ ಗಣೇಶ್ ಘೋಷ್ ಮತ್ತು ಅನಂತ ಸಿಂಹನ ಹೆಗಲೇರಿತ್ತು.

ದಾಳಿಯೇನೋ ಸುಸೂತ್ರವಾಗಿ ನಡೆಯಿತು. ಒಟ್ಟು ೧೪ ಪಿಸ್ತೊಲ್ ಮತ್ತು ಹತ್ತಾರು ಬನ್ದೂಕುಗಳನ್ನು ಸಂಗ್ರಹಿಸುವಲ್ಲಿ ಅನಂತ ಯಶಸ್ವಿಯಾಗಿದ್ದ,. ಆದರೆ ದಾಳಿಯ ಮಧ್ಯದಲ್ಲಿ "ಹಿಮಾಂಶು ದತ್ತ" ಎಂಬ ಹುಡುಗನ ಬಟ್ಟೆಗೆ ಬೆಂಕಿ ತಗುಲಿಬಿಟ್ಟಿತು.. ಧಗೆಯಲ್ಲಿ ಒದ್ದಾಡುತ್ತಿದ್ದ ಅವನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಅನಂತನ ಜವಾಬ್ದಾರಿಯಾಯಿತು.. ಹಾಗೆ ಕರೆದೊಯ್ಯುವಾಗ, ಪ್ರಯಾಣದ ಮಧ್ಯದಲ್ಲಿ ಬ್ರಿಟಿಶರು ಕ್ರಾಂತಿಕಾರಿಗಳನ್ನು ಸುತ್ತುವರೆದರು. ಉಪಾಯದಿಂದ ಅನಂತ, ಬಳಲಿದ್ದ ಹಿಮಾಂಶುವನ್ನು ವ್ಯಕ್ತಿಯೊಬ್ಬರ ವಶಕ್ಕೆ ಸುರಕ್ಷಿತವಾಗಿ ಒಪ್ಪಿಸಿ, ತಾನು ತಪ್ಪಿಸಿಕೊಂಡುಬಿಟ್ಟ..ಆಮೇಲೆ, ಅದೆಷ್ಟೋ ದಿನಗಳ ನಂತರ, ಬಂದೀಖಾನೆಯಲ್ಲಿ ಆಂಗ್ಲರು ತನ್ನ ಯುವ ಸ್ನೇಹಿತರಿಗೆ ಕೊಡುತ್ತಿದ್ದ ಹಿಂಸೆಯನ್ನು ಕೇಳಿ ತಾನು ಶರಣಾಗಬೇಕೆಂದು ಅನ್ನಿಸಿ  ಶರಣಾಗಿಬಿಟ್ಟ.ಅನಂತನ ಶರಣಾಗತಿ ನಿಜಕ್ಕೂ ಸೂರ್ಯಸೇನನ ಒಂದು ಯೋಜನೆಯೇ ಆಗಿತ್ತು. ಈಗಾಗಲೇ ಬಂಧಿತರಾಗಿ ಜೈಲಿನಲ್ಲಿ ಹಿಂಸೆ ಅನುಭವಿಸುತ್ತಿದ್ದ ಯುವಕರಿಗೆ ಮತ್ತೆ ಜೀವನೋತ್ಸಾಹ ತುಂಬಿಸಲು ಅನಂತ ತಾನೇ ಬಂಧಿತನಾದ..

ವಿಚಾರಣೆಯ ವೇಳೆ, ಅನಂತನಿಗೆ ಇನ್ನಿಲ್ಲದಂತೆ ಹಿಂಸೆ ನೀಡಲಾಯಿತು. ದೇಶಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಆತ, ಎಲ್ಲವನ್ನೂ ರಾಷ್ಟ್ರಕ್ಕಾಗಿ ಸಹಿಸಿಕೊಂಡ. ಕಡೆಗೆ ಅನಂತನಿಗೆ 'ಕರಿನೀರಿನ' ಶಿಕ್ಷೆ ವಿಧಿಸಿ, ಅಂಡಮಾನಿಗೆ ಅಟ್ಟಲಾಯಿತು..ಇವನ ಸಹನಾಯಕನಾಗಿದ್ದ ಗಣೇಶ್ ಘೋಷ್ ನೂ ಬಂಧಿತನಾಗಿ ಅಂಡಮಾನಿನ ಶಿಕ್ಷೆಗೆ ಗುರಿಯಾದ..ಅನಂತ್ ಸಿಂಹ, ಸ್ವಾತಂತ್ರ್ಯಾನಂತರ ೧೯೭೯ ರಲ್ಲಿ ಜನವರಿ ೨೫ ರಂದು ಇಹಲೋಕ ತ್ಯಜಿಸಿದ.. ಹಾಗೆಯೇ ಗಣೇಶ್ ಘೋಶನು ೧೯೯೪ ಅಕ್ಟೋಬರ್ ೧೬ ರಂದು ನಿಧನನಾದನು..

ಇತ್ತ ಲೊಕನಾಥ ಬಲ್ ಕೂಡ ತಲೆಮರೆಸಿಕೊಂಡಿದ್ದ. ಜಲಾಲಬಾದ್ ಗುಡ್ಡದಲ್ಲಿ ನಡೆದ ಹೊರಾಟದಲ್ಲಿ ತನ್ನ ಕಣ್ಣೆದುರೇ, ತನ್ನ ತಮ್ಮ ಹರಿಗೋಪಾಲ್ ಬಲ್(ಟೇಗ್ರ) ಆಂಗ್ಲರ ಗುಂಡಿಗೆ ಬಲಿಯಾದದ್ದನ್ನು ನೋಡಿ ತುಂಬಾ ದುಃಖಿತನಾಗಿದ್ದ.ಬ್ರಿಟಿಶರ ಕೈಗೆ ಸಿಗದಿರಲು, ಫ್ರೆಂಚರ ತಾಣವಾದ "ಚಂದ್ರನಗರ"ದಲ್ಲಿ ರಹಸ್ಯವಾಗಿ ಅಡಗಿಕೊಂಡಿದ್ದ.. ಆದರೆ ಅಲ್ಲಿಗೂ ಆಂಗ್ಲರ ಪಡೆ ದೌಡಾಯಿಸಿತು. ಮತ್ತೊಂದು ಗುಂಡಿನ ಚಕಮಕಿ ಕ್ರಾಂತಿಕಾರಿಗಳ  ಹಾಗೂ ಬ್ರಿಟಿಶರ ನಡುವೆ ನಡೆಯಿತು.. ಆ ಹೋರಾಟದಲ್ಲಿ ಲೊಕನಾಥನ ಸಹಚರ "ಜಿಬನ್ ಘೋಶಾಲ್" ಹುತಾತ್ಮನಾದ. ಲೊಕನಾಥ್ ಕಡೆಗೂ ಆಂಗ್ಲರ ಸೆರೆಯಾದ..ಅವನ ವಿಚಾರಣೆಯೂ ನಡೆದು, ಅವನಿಗೂ ಭಯಾನಕ "ಕರಿನೀರಿನ" ಶಿಕ್ಷೆ ವಿಧಿಸಲಾಯಿತು..!!!

ಕಲ್ಪನಾ ದತ್ತ, ಪ್ಲಾನಿನ ಪ್ರಕಾರ ಪ್ರೀತಿಲತಾಳ ಜೊತೆಗೆ "ಯುರೋಪಿಯನ್ ಕ್ಲಬ್" ಮೆಲೆ ದಾಳಿ ಮಾಡಬೇಕಿತ್ತು.ಆದರೆ ಹೋರಾಟಕ್ಕೂ ಒಂದು ವಾರದ ಮೊದಲೇ ಸ್ಟೇಶನ್ ಒಂದರಲ್ಲಿ ಬ್ರಿಟಿಷರು ಆಕೆಯನ್ನು ಬಂಧಿಸಿದರು..ಹೇಗೋ ಜಾಮೀನಿನ ಮೇಲೆ ಹೊರಬಂದ ನಂತರ, ಭೂಗತಳಾದಳು..ಆನಂತರ, ಅದೊಮ್ಮೆ ಕಲ್ಪನಾ ಮತ್ತು ಸೂರ್ಯಸೇನ್ ಅವಿತಿಟ್ಟುಕೊಂಡಿದ್ದ ಮನೆಯ ಮೇಲೆ ಬ್ರಿಟಿಷರು ದಾಳಿ ಮಾಡಿದರು.ಆ ಹೋರಾಟದಲ್ಲಿ ಸೂರ್ಯಸೇನ್ ಬಂಧಿತನಾದ. ಕಲ್ಪನಾ ಮತ್ತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು..ಬಂಧಿತನಾದ ಸೂರ್ಯಸೇನ್ ಗಲ್ಲಿಗೇರಿದ್ದುಇತಿಹಾಸವಿದಿತ..ಬಹು ದಿನಗಳ ನಂತರ, ಮತ್ತೆ ಕಲ್ಪನಾ ಬಂಧಿತಳಾಗಿ, ಅವಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು..!!!!

ಇವೆಲ್ಲದರ ಮಧ್ಯೆ ಹರಿಪಾದ ಎಲ್ಲೋ ಅಡಗಿದ್ದ.ಬಹುಶಃ ಆ ಭಾರತಮಾತೆ ಇನ್ನೂ ಒಂದು ಕಾರ್ಯಕ್ಕಾಗಿ ಕಾಯುತ್ತಿದ್ದಳೇನೋ..!!ಜಲಾಲಬಾದ್ ಗುಡ್ಡದಲ್ಲಿ ನಡೆದ ಹೋರಾಟದಲ್ಲಿ, ತನ್ನ ಸ್ನೇಹಿತರೆಲ್ಲ ಗುಂಡೇಟಿಗೆ ಬಲಿಯಾದದ್ದನ್ನ ನೋಡಿದ್ದ ಹರಿಪಾದನಿಗೆ, ಬ್ರಿಟಿಷರ ಬಗ್ಗೆ ಇನ್ನಷ್ಟು ಕೋಪ ಉಕ್ಕಿತ್ತು.ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಅಷ್ಟೇ..
ಅಲ್ಲೊಬ್ಬ ಬ್ರಿಟಿಶ್ ಅಧಿಕಾರಿ, ಈ ಎಲ್ಲ ಸಾವಿಗೆ ಕಾರಣನಾದವನು, ಚಿತ್ತಗಾಂಗ್ ನಲ್ಲೇ ಹಾಯಾಗಿ ಇದ್ದ.ಬಂಧಿತರಾದ ಉಳಿದ ಕ್ರಾಂತಿಕಾರಿಗಳನ್ನ ವಿಚಾರಣೆಯ ವೇಳೆ ಹಿಂಸಿಸುತ್ತಿದ್ದ. ಅವನಿಗೆ ಫುಟ್ಬಾಲ್ ಆಟವೆಂದರೆ ಪ್ರಾಣ.ಸದಾ ಮೈದಾನದಲ್ಲಿ ನಡೆಯುತ್ತಿದ್ದ ಆಟವನ್ನು ನೋಡುತ್ತಾ ಕೂರುತ್ತಿದ್ದ.ಅದನ್ನೇ ಹರಿಪಾದ ವಧಾಸ್ಥಳವನ್ನಾಗಿಸಿಕೊಂಡಿದ್ದ.ಅದೊಮ್ಮೆ, ಫುಟ್ಬಾಲ್ ಆಟದ ವೀಕ್ಷಣೆಯಲ್ಲಿ, ಆ ಅಧಿಕಾರಿ ಮಗ್ನನಾಗಿದ್ದಾಗ, ಹೊಂಚು ಹಾಕಿ ಕುಳಿತಿದ್ದ ಹರಿಪಾದ, ನೇರ ಅವನ ಹತ್ರ ಬಂದವನೇ, ಸೊಂಟದಲ್ಲಿದ್ದ ಪಿಸ್ತೋಲ್ ಹೊರತೆಗೆದು ಗುಂಡು ಹಾರಿಸಿಯೇ ಬಿಟ್ಟ. ನೋಡುನೋಡುತ್ತಲೇ ಬ್ರಿಟಿಶ್ ಅಧಿಕಾರಿ ಕೊನೆಯುಸಿರೆಳೆದ. ತನ್ನ ಸಹಚರರಿಗೆ ನೋವುಣಿಸಿದ್ದ ಆ ಆಂಗ್ಲರಿಗೆ ಚಿಕ್ಕ ಬಾಲಕ, ಚುರುಕು ಮುಟ್ಟಿಸಿದ್ದ.ಆನಂತರ, ಅವನನ್ನು ಬಂಧಿಸಿ, ನೆಪಕ್ಕೆಂದು ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಿದರು.ಆ ವಿದ್ಯಾರ್ಥಿ 'ಹರಿಪಾದ ಮಹಾಜನ್' ನೇಣಿಗೇರಿದಾಗ ಅವನಿಗೆ ಕೇವಲ 14 ವರ್ಷ.!!!!

ಅಂತೂ ಕೊನೆಗೆ, ಸೂರ್ಯಸೇನ್ ಎಂಬ ಮಹಾನ್ ಸಂಘಟಕ, ಕ್ರಾಂತಿಕಾರಿ, ಅಪ್ಪಟ ದೇಶಾಭಿಮಾನಿ ಹಚ್ಚಿದ ಆ ಕಿಚ್ಚು, ಯಶಸ್ವಿಯಾಯಿತಾದರೂ, ಕ್ರಾಂತಿಕಾರಿಗಳ ಬಂಧನದಿಂದ ಮಂಕು ಕವಿದಿದ್ದು ದಿಟ.ಆದರೂ, ಆ ಕಿಚ್ಚನ್ನು ಮನದೊಳಗೆ ಉರಿಸಿಕೊಂಡಿದ್ದ ಯುವಕರು ಮತ್ತೆ ಮತ್ತೆ ಮೇಲೆದ್ದು ಬ್ರಿಟಿಷರನ್ನು ನಿರಂತರ ಹಣ್ಣಾಗಿಸಿ, ತಾಯಿ ಭಾರತಿಯ ದಾಸ್ಯವನ್ನು ಕಳಚುವಲ್ಲಿ ವಿಜಯ ಸಾಧಿಸಿದರು..!!!!

ಉಳಿದೆಲ್ಲ ಹೋರಾಟ,ಸತ್ಯಾಗ್ರಹಗಳ ಜೊತೆಗೆ ಚಿತ್ತಗಾಂಗ್ ನ ಈ ಕ್ರಾಂತಿಯನ್ನೂ ನಮ್ಮ ಪುಸ್ತಕದಲ್ಲಿ ಹೇಳಬೇಕಿತ್ತು.!! ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೂ ಸಿಡಿದೆದ್ದು, ಬ್ರಿಟಿಶ್ ಪ್ರಭುತ್ವದ ವಿರುದ್ಧ ಮಾಡಿದ ಹೋರಾಟವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೂ ಹೇಳಬೇಕಿತ್ತು..!!ವಯಸ್ಸು ಚಿಕ್ಕದಿದ್ದರೂ ಆಂಗ್ಲರ ಬಂದೂಕಿಗೆ ಎದೆ ಸೆಟೆಸಿ ನಿಂತ ವೀರರ ಧೈರ್ಯ ಸಾಹಸವನ್ನು ನಮ್ಮ ಯುವಕರಿಗೂ ಹೇಳಬೇಕಿತ್ತು..!! ಹ್ಯಾರಿಪಾಟರ್, ಸ್ಪೈಡರ್ ಮ್ಯಾನ್ ನಂತಹ ಕಾಲ್ಪನಿಕ 'ಹೀರೋ'ಗಳ ಕಥೆ ಹೇಳೋದಕ್ಕಿಂತ ಮೊದಲು, ದೇಶಕ್ಕಾಗಿ ಪ್ರಾಣತೆತ್ತ ಈ ನಿಜವಾದ 'ಹೀರೋ'ಗಳ ಕಥೆಯನ್ನ ನಮ್ಮ ಮಕ್ಕಳಿಗೆ ಹೇಳಬೇಕಿತ್ತು..!!!ಆದರೆ ಅದೇಕೋ ನಮ್ಮ ದಿವ್ಯ ನಿರ್ಲಕ್ಷ್ಯದಿಂದ, ಅವರೆಲ್ಲ ತೆರೆಯಲ್ಲಿ ಮರೆಯಾದರು..

ಕಡೆ ಪಕ್ಷ,ಅವರು ತಮ್ಮ ರಕ್ತತೈಲವನ್ನೆರೆದು ಹಚ್ಚಿದ ಈ ಸ್ವಾತಂತ್ರ್ಯಜ್ಯೋತಿಯನ್ನು ಆರದಂತೆ, ನಂದಾದೀಪವಾಗಿಸಲಾದರೂ ಅವರ ಸ್ಮರಣೆ ನಾವು ಮಾಡಲೇಬೇಕಲ್ಲವೇ..?!!!! 
 ವಂದೇ ಮಾತರಂ..



[ ಈ ಲೇಖನದ ಮೊದಲೆರಡು ಭಾಗಗಳು 
ಭಾಗ-೧ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೧
ಭಾಗ-೨ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೨
]


Friday 13 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 2

ಚಿತ್ತಗಾಂಗ್ ನಲ್ಲಿ ಕ್ರಾಂತಿ ಯಶಸ್ವಿಯಾಗಿ  ನಡೆದು, ಕೊನೆಗೆ ಅದರ ಸಂಪೂರ್ಣ ರೂವಾರಿ ಸೂರ್ಯಸೇನ್ ಹುತಾತ್ಮನಾಗಿಹೋದ.
ಅದರ ಮಧ್ಯದ ಘಟನೆಗಳು ನಿಜಕ್ಕೂ ರೋಮಾಂಚಕಾರಿ ಮತ್ತು ಕುತೂಹಲಕಾರಿ..
ಇತಿಹಾಸದ ಗರ್ಭದಲ್ಲಿ ಅಡಗಿಹೋದ ಆ ಅದ್ಭುತ ಘಟನಾವಳಿಗಳನ್ನ ನಿಮ್ಮೊಡನೆ ಹಂಚಿಕೊಳ್ಳಲೇಬೇಕೆಂದು ಇನ್ನೆರಡು ಭಾಗಗಳಲ್ಲಿ  ಇಲ್ಲಿ ಹೊರತರುತ್ತಿದ್ದೇನೆ.
 
ಚಿತ್ತಗಾಂಗ್
                                    
ಚಿತ್ತಗಾಂಗ್ ನ ಹೋರಾಟ ನಡೆದದ್ದು ಎಪ್ರಿಲ್ 18 1930. ಪ್ಲಾನಿನಂತೆ ಎಲ್ಲ ಕೆಲಸಗಳು ಮುಗಿದ ಮೇಲೆ, ಕ್ರಾಂತಿಕಾರಿಗಳು ಜಲಾಲಬಾದ್ ಗುಡ್ಡದ ಮೇಲೆ ಅಡಗಿಕೊಂಡಿದ್ದ್ರು.
ಅದಾದ 4  ದಿನಗಳ ನಂತರ, ಅಂದ್ರೆ 22 ಏಪ್ರಿಲ್ 1930 , ಆ ಕ್ರಾಂತಿಕಾರಿಗಳ ಪಾಲಿಗೆ ಘೋರವಾಗಿತ್ತು.. ಕೆಲವು ತನಿಖೆಯ ಮೂಲಕ ಪೊಲೀಸರು ಕ್ರಾಂತಿಕಾರಿಗಳ ಇರುವಿಕೆಯನ್ನು ಪತ್ತೆ ಹಚ್ಚಿದ್ದರು. ಹೀಗಾಗಿ 80 ಸಶಸ್ತ್ರ ಪಡೆಯೊಂದಿಗೆ ಬ್ರಿಟಿಶ್ ಸೈನ್ಯ ಆ ಜಲಾಲಬಾದ್ ಗುಡ್ಡವನ್ನು ಸುತ್ತುವರೆಯಿತು.
4 ದಿನಗಳಿಂದ ಸರಿಯಾದ ಆಹಾರ ಇಲ್ಲದೆ,ನಿದ್ರೆ ಇಲ್ಲದೆ ದಣಿದು ಹೋಗಿದ್ದ ಆ ಯುವಕರಿಗೆ ಇದು ಮತ್ತೊಂದು ಸವಾಲಾಗಿ ಪರಿಣಮಿಸಿತ್ತು.. ದಣಿವಾಗಿದ್ದು ದೇಹಕ್ಕೆ, ದೇಶಭಕ್ತಿಗೆ ಅಲ್ವಲಾ..!!!!

ಸೇನಾಪತಿ ಲೋಕನಾಥ್ ಬಲ್ ನ ಆಜ್ನೆಯನ್ನನುಸರಿಸಿ ಎಲ್ಲ ವಿದ್ಯಾರ್ಥಿಗಳು ಯುದ್ಧಕ್ಕೆ ಸನ್ನದ್ಧರಾದರು.ಆ ಯುವಕರ ಹೆಸರು ಹೀಗಿವೆ..
೧)ಸುರೇಶ ದೇವ್           ೨)ವಿನೋದ್ ಚೌಧರಿ        ೩)ಜಿತೇಂದ್ರ ದಾಸ್ಗುಪ್ತ       ೪)ಶಂಭು ದಸ್ತಿದಾರ್
೫)ಕೃಷ್ಣ ಚೌಧರಿ             ೬)ಸರೋಜ ಗುಹ            ೭)ಮಲಿನ್ ಘೋಷ್          ೮)ಕಾಳಿಡೇ
೯)ಮಧುಸೂದನ್ ದತ್ತ    ೧೦)ನಾಣಿ ದೇವ್            ೧೧)ಖಿರೋದ್ ಬ್ಯಾನರ್ಜೀ   ೧೨)ಹಿಮೇಂದು ದಸ್ತಿದಾರ್
೧೩)ಕಾಳಿ ಚಕ್ರವರ್ತಿ      ೧೪)ಅರ್ಧೆಂದು ದಸ್ತಿದಾರ್   ೧೫)ರಣಧೀರ್ ದಾಸ್ಗುಪ್ತ     ೧೬)ಶ್ಯಾಮರಾಂ ದಾಸ್
೧೭)ಮೋತಿ ಕನುನ್ಗೋ   ೧೮)ವಿಧು ಭಟ್ಟಾಚಾರ್ಯ    ೧೯)ನಾರಾಯಣ್ ಸೇನ್     ೨೦)ಪುಲಿನ್ ವಿಕಾಸ್ ಘೋಷ್
೨೧)ಮಹೇಂದ್ರ ಚೌಧರಿ    ೨೨)ನಿರ್ಮಲ ಲಾಲ         ೨೩)ವೀರೇಂದ್ರ ಡೇ          ೨೪)ವಿಜಯ್ ಸೇನ್
೨೫)ನಿತ್ಯಪಾದ ಘೋಷ್   ೨೬)ಅಶ್ವಿನಿ ಚೌಧರಿ         ೨೭)ವನವಿಹಾರಿ ದತ್ತ         ೨೮)ಶಶಾಂಕ್ ದತ್ತ
೨೯)ಸುಬೋದ್ಹ್ ಪಾಲ್     ೩೦)ಫಣೀಂದ್ರ ನಂದಿ       ೩೧)ಹರಿಪಾದ ಮಹಾಜನ್    ೩೨)ಬಾಬುತೊಶ್ ಭಟ್ಟಾಚಾರ್ಯ
೩೩)ಸುಧಾಂಶು ಬೋಸ್   ೩೪)ಸುಬೋದ್ಹ್ ಚೌಧರಿ    ೩೫)ಬ್ರಿಗೇಡಿಯರ್ ತ್ರಿಪುರ ಸೇನ್
೩೬)ಮನೋರಂಜನ್ ಸೇನ್     ೩೭)ದೇವಪ್ರಸಾದ್ ಗುಪ್ತಾ   ೩೮)ಹರಿ ಬಲ್ (ಟೇಗ್ರ)
೩೯)ರಜತ್ ಸೇನ್   ೪೦)ಸ್ವದೇಶ್ ರೋಯ್    ೪೧)ವಿನೋದ್ ಬಿಹಾರಿ ದತ್ತ

ಈ ಎಲ್ಲ ಯುವಕರ ಹತ್ರ ಇದ್ದಿದ್ದು "ಮಸ್ಕೆತ್ರಿ" ರೈಫಲ್ ಗಳು..ಇವು ಸ್ವಲ್ಪ ಹಳೆ ಕಾಲದವು..
ಬ್ರಿಟಿಷರು ಗುಡ್ಡವನ್ನು ಸಮೀಪಿಸುತ್ತಿದ್ದಂತೆ, ಲೋಕನಾಥ್ ಆದೇಶ ನೀಡಿದ. ಕೂಡಲೇ ಯುವಕರ ಬಂದೂಕಿನಿಂದ ಗುಂಡುಗಳು ಹೊರಬಂದವು. ಬ್ರಿಟಿಷರಿಗೆ ದಿಗ್ಭ್ರಮೆಯಾಯಿತು.. ಅಲ್ಲಿನ ಯುವಕರ ರೌದ್ರರೂಪ ಆಗತಾನೆ ಅರ್ಥವಾಗಿತ್ತು ಅವರಿಗೆ.
ಬ್ರಿಟಿಷರೂ ಅತ್ಯಾಧುನಿಕ ವಿಕರ್ ಮಷಿನ್ ಗನ್ ಗಳಿಂದ ದಾಳಿ ನಡೆಸಿದರು..
 
"ಮಸ್ಕೆತ್ರಿ" ರೈಫಲ್
                                    
ವಿಕರ್ ಮಷಿನ್ ಗನ್
                              
ಆ ಹೋರಾಟದಲ್ಲಿ ಗುಂಡೊಂದು ಟೇಗ್ರಾನಿಗೆ ಬಡಿಯಿತು..ಬರೀ 14 ವರ್ಷದ ಆ ಪುಟ್ಟಪೋರ ಆ ಸಾವಿನಲ್ಲೂ ನಗುತ್ತ ಸಹಚರರಿಗೆ " ನಾನಿನ್ನು ಹೊರಟಿದ್ದೇನೆ.ನೀವು ನಿಲ್ಲಿಸಬೇಡಿ.ದಾಳಿ ಮುಂದುವರೆಯಲಿ" ಎನ್ನುತ್ತಲೇ ಹುತಾತ್ಮನಾದ..ಹೀಗೇ ಒಬ್ಬರ ಹಿಂದೊಬ್ಬರು ಅಸುನೀಗುತ್ತಾ ಹೋದರು.ಅಂಬಿಕಾ ಚಕ್ರವರ್ತಿಗೂ ಗುಂಡು ತಗುಲಿತು.

ಪರಿಸ್ಥಿತಿಯ ವಿಷಮತೆ ತಿಳಿದಾಕ್ಷಣ, ಸೇನಾಪತಿ ಲೋಕನಾಥ ಕೂಗಿದ, "ಗೆಳೆಯರೇ, ನಿಲ್ಲಬೇಡಿ, ಗೆಲ್ಲುವವರೆಗೂ ದಾಳಿ ಹಾಗೆ ಮುಂದುವರೆಯಲಿ" ಅಂತ. ಉತ್ತೇಜಿತಗೊಂಡ ಯುವಕರು, ದುಪ್ಪಟ್ಟು ಹುಮ್ಮಸ್ಸಿನಿಂದ ದಾಳಿ ನಡೆಸಿದರು.
ಕೊನೆಗೂ, ಪುಟ್ಟ ಬಾಲಕರು ಹಿಡಿದ ಹಳೆ ಕಾಲದ ಬಂದೂಕಿನ ಎದುರಿಗೆ, ದೊಡ್ಡ ಬ್ರಿಟಿಶ್ ಪಡೆಯ ಅತ್ಯಾಧುನಿಕ ಯಂತ್ರವೂ ಸೋಲೊಪ್ಪಿಕೊಂಡಿತು.. ಅದಾಗಲೇ ರಾತ್ರಿಯಾಗಿದ್ದರಿಂದ ಬ್ರಿಟಿಷರು ಅಲ್ಲಿರಲು ಸಾಧ್ಯವಾಗದೆ ಓಡಿ ಹೋದರು.. ಚಿತ್ತಗಾಂಗ್ ನ ಯುವಕರಿಗೆ ಮತ್ತೊಮ್ಮೆ ವಿಜಯ ಒಲಿದಿತ್ತು..

ಕೂಡಲೇ, ಕ್ರಾಂತಿಕಾರಿಗಳೂ ಬೆಟ್ಟವನ್ನು ಇಳಿದು ಬೇರೆ ಜಾಗಗಳಿಗೆ ಗುಂಪುಗುಂಪಾಗಿ ಚದುರಿಹೋದರು..
ಇಡೀ ಹೋರಾಟದಲ್ಲಿ ಒಟ್ಟು 12 ಜನ ಹುತಾತ್ಮರಾದರು. 11 ವಿದ್ಯಾರ್ಥಿಗಳು ಸ್ಥಳದಲ್ಲೇ ಅಸುನೀಗಿದರೆ, ಅರ್ಧೆಂದು ದಸ್ತಿದಾರ್ ಆಸ್ಪತ್ರೆಯಲ್ಲಿ ಮರಣಹೊಂದಿದ..
ಅಂಬಿಕಾ ಚಕ್ರವರ್ತಿಗೆ ಗುಂಡು ಬಡಿದಿದ್ದರಿಂದ ಅವನನ್ನು ಅಲ್ಲೇ ಬಿಟ್ಟು ಹೊರಟುಹೋದರು. ಆದರೆ ಅವನು ಇನ್ನೂ ಬದುಕಿದ್ದ..!!! ಹೇಗೋ ಆನಂತರ ತಲೆಮರೆಸಿಕೊಂಡ..!!!

ಇತ್ತ ಓಡಿ ಹೋದ ಯುವಕರಲ್ಲಿ ಕೆಲವರು ಬ್ರಿಟಿಷರಿಂದ ಬಂಧಿತರಾದರು.ಕೆಲವರು ತಾವು ಬ್ರಿಟಿಷರ ಕೈಗೆ ಸಿಕ್ಕು ಗುಲಾಮರಾಗಬಾರದೆಂದು ತಮಗೆ ತಾವೇ ಗುಂಡು ಹೊಡೆದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡರು.ಇನ್ನು ಕೆಲವರು ಹಾಗೆಯೇ ತಮ್ಮ ತಮ್ಮ ಊರನ್ನು ಸೇರಿಕೊಂಡುಬಿಟ್ಟರು.. ಅದೇನೇ ಇರಲಿ, ಒಟ್ಟಿನಲ್ಲಿ ಆ ಎಲ್ಲರೂ, ತಾಯಿ ಭಾರತಿಗೆ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು..!!!!!

ಸೂರ್ಯಸೇನ್, ನಿರ್ಮಲ್ ಸೇನ್ ಮತ್ತು ಪ್ರೀತಿಲತಾ ಗುಟ್ಟಾಗಿ ಒಬ್ಬ ವಿಧವೆಯ ಮನೆಯಲ್ಲಿ ಆಶ್ರಯ ಪಡೆದರು.. ಆದರೆ ಅದೂ ಹೇಗೋ ಆಂಗ್ಲರಿಗೆ ಗೊತ್ತಾಗಿ, ಕೂಡಲೇ ಬ್ರಿಟಿಷರು ಕಾರ್ಯೋನ್ಮುಖರಾದರು.. ದೊಡ್ಡ ಪಡೆಯೇ ಆ ಮನೆಯನ್ನು ಆವರಿಸಿ, ದಾಳಿ ನಡೆಸಲಾಯಿತು.. ಒಳಗಿದ್ದ ಕ್ರಾಂತಿಕಾರಿಗಳೂ ಪ್ರತಿದಾಳಿ ನಡೆಸಿದರು.ಆದರೆ, ಈ ದಾಳಿಯ ಬಗ್ಗೆ ಪೂರ್ವತಯಾರಿ ಇಲ್ಲದೆ ಇದ್ದಿದ್ದರಿಂದ ಕ್ರಾಂತಿಕಾರಿಗಳಿಗೆ ದಾಳಿ ಮಾಡೋದು ಕಷ್ಟವಾಯಿತು.. ಆ ಹೋರಾಟದಲ್ಲಿ ನಿರಂತರ ಗುಂಡಿನ ಹೊಡೆತಕ್ಕೆ ಸಿಲುಕಿ ನಿರ್ಮಲ್ ಸೇನ್ ಹುತಾತ್ಮನಾದ..
ಆದರೆ, ಸೂರ್ಯಸೇನ್ ಮತ್ತು ಪ್ರೀತಿಲತಾ ತಪ್ಪಿಸಿಕೊಂಡರು..!!

ಸೂರ್ಯಸೇನ್, ಎಷ್ಟೋ ದಿನ ಬ್ರಿಟಿಷರಿಗೆ ಸಿಂಹಸ್ವಾಪ್ನವಾಗಿಯೇ ಉಳಿದಿದ್ದ.. ಆದರೆ ದೇಶದ್ರೋಹಿಯೊಬ್ಬ ಅವನ ಇರುವಿಕೆಯ ಸುಳಿವು ಕೊಟ್ಟಕ್ಷಣ, ಬ್ರಿಟಿಷರು ಸೂರ್ಯಸೆನನನ್ನು ಬಂಧಿಸಿಬಿಟ್ಟರು..!!
ಜೊತೆಗೆ, ಒಬ್ಬ ಕ್ರಾಂತಿಕಾರಿ ಆ ದ್ರೋಹಿಯನ್ನೂ ಕೊಂದುಬಿಟ್ಟ..ಆದರೆ ಆ ಕ್ರಾಂತಿಕಾರಿ ಯಾರು ಅಂತ ಕಡೆಗೂ ಪೊಲೀಸರಿಗೆ ಗೊತ್ತಾಗ್ಲಿಲ್ಲ..ಯಾಕಂದ್ರೆ, ಕೊಲೆಯಾದ ನೇತ್ರಸೇನನ ಹೆಂಡತಿ ಸೂರ್ಯಸೆನನನ್ನು ಅಪಾರವಾಗಿ ಗೌರವಿಸುತ್ತಿದ್ದಳು.ಹೀಗಾಗಿ ತನ್ನ ಗಂಡ ದುಡ್ಡಿಗಾಗಿ ಮಾಡಿದ ನಾಡದ್ರೋಹಕ್ಕೆ ಅವಳೂ ತಪ್ತಳಾಗಿದ್ದಳು. ಪೊಲೀಸರು ಆಕೆಯನ್ನು ಎಷ್ಟೇ ಹಿಮ್ಸಿಸಿದರೂ, ತನ್ನ ಪತಿಯ ಕೊಲೆ ಮಾಡಿದವನ ಹೆಸರನ್ನ ಆಕೆ ಹೇಳಲೇ ಇಲ್ಲ.. ಇಂತಹ ಸ್ತ್ರೀಯರಿಂದಲೇ ಭಾರತ ಇನ್ನೂ ಉಸಿರಾಡುತ್ತಿದೆ..!!!!

ಮತ್ತೊಬ್ಬ ನಾಯಕ ಗಣೇಶ್ ಘೋಷ್ ನನ್ನು ಬಂಧಿಸಲಾಯಿತು.ಅವನ ವಿಚಾರಣೆಯೂ ನಡೆದು, ಅವನಿಗೆ ಅಂಡಮಾನಿನ ಭಯಾನಕ "ಕರಿನೀರಿನ"ಶಿಕ್ಷೆಗೆ ಗುರಿಮಾಡಲಾಯಿತು..

ಇಷ್ಟೆಲ್ಲದರ ನಡುವೆ, ಅನಂತ, ಲೋಕನಾಥ,ಕಲ್ಪನಾ ಏನಾದ್ರು..????
ಬಾಲಕ ಹರಿಪಾದ ಮಹಾಜನ್ ಎಲ್ಲಿ ಅಡಗಿದ್ದ..?????!!!!

[ಮುಂದಿನ ಭಾಗದಲ್ಲಿ]


[ ಉಳಿದೆರಡು ಭಾಗಗಳು,
ಭಾಗ-೧ - "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೧
ಭಾಗ-೩ -  "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೩


(ಚಿತ್ರಕೃಪೆ -- http://shantigrouprealhistory.blogspot.com )
 

Thursday 12 January 2012

ಮಿಡ್ನಾಪುರದಲ್ಲಿ ಕ್ರಾಂತಿಯ ಕಲರವ..

ಪ್ರದ್ಯೋತ ಕುಮಾರ ಭಟ್ಟಾಚಾರ್ಯ
                                  
ಬಂಗಾಳದ ತೋಟದಿಂದ, ತಾಯಿ ಭಾರತಿಗೆ ಪೂಜಿತಗೊಂಡ ಕ್ರಾಂತಿಯ ಹೂವುಗಳು ಅಸಂಖ್ಯ.
ಅಂಥಾ ಒಬ್ಬ ಯುವಕನ ಸ್ಮರಣೆ ಇದು.

ಮಿಡ್ನಾಪುರ ಅನ್ನೋದು ಬಂಗಾಳದ ಒಂದು ಜಿಲ್ಲೆ. "ಅನುಶೀಲನ ಸಮಿತಿ"ಯ ಪ್ರಭಾವದಿಂದ ಅನೇಕ ಯುವಕ ಕ್ರಾಂತಿಕಾರಿಗಳು ಅಲ್ಲಿ ಬೆಳೆದಿದ್ರು..
ಮಿಡ್ನಾಪುರದಲ್ಲಿ ಇದ್ದ ಆಂಗ್ಲ ಅಧಿಕಾರಿಗಳು ಅತಿಕ್ರೂರತನದಿಂದ ಆಳ್ವಿಕೆ ನಡೆಸ್ತಿದ್ರು.
ಅಲ್ಲಿನ ಮ್ಯಾಜಿಸ್ಟ್ರೇಟ್ ಗಳಂತೂ, ಕ್ರಾಂತಿಕಾರಿಗಳ ಮೇಲೆ ಕೇಸುಗಳನ್ನ ಹಾಕಿ, ವಿವಿಧ ಶಿಕ್ಷೆಗಳನ್ನ ವಿಧಿಸ್ತಿದ್ರು.

ಹೀಗಾಗಿಯೇ, ಮಿಡ್ನಾಪುರದ ಯುವಕರು ಆಲ್ಲಿನ ಬ್ರಿಟಿಷರಿಗೆ ಒಂದು ಬಿಸಿ ಮುಟ್ಟಿಸಿದರು. ತಮ್ಮ ಜಿಲ್ಲೆಗೆ ಒಬ್ಬ ಭಾರತೀಯನನ್ನು ಮ್ಯಾಜಿಸ್ಟ್ರೇಟ್ ಮಾಡೋ ವರೆಗೂ, ಉಳಿದ ಆಂಗ್ಲ ಮ್ಯಾಜಿಸ್ಟ್ರೇಟ್ ಗಳನ್ನ ಕೊಲ್ತಿವಿ ಅಂತ..
ಬ್ರಿಟಿಷರು ಇದನ್ನು ಅಷ್ಟೊಂದು ಪರಿಗಣಿಸಲಿಲ್ಲ.

ಆಗ ಅಲ್ಲಿಗೆ 'ಜೇಮ್ಸ್ ಪ್ಯಾಡಿ' ಅನ್ನೋನು ಮ್ಯಾಜಿಸ್ಟ್ರೇಟ್ ಆಗಿ ಬಂದ. ಪ್ರತಿಜ್ಞೆ ಮಾಡಿದ್ದ ಕ್ರಾಂತಿಕಾರಿಗಳು, ಅದೊಂದು ಸಮಾರಂಭದಲ್ಲಿ, ಅತಿಥಿಯಾಗಿ ಬಂದಿದ್ದ ಅವನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು. 
ಬ್ರಿಟಿಷರು ಕಲ್ಕತ್ತೆಯಿಂದ ವೈದ್ಯರನ್ನು ಕರೆಸಿದರು. ವೈದ್ಯರು ಪ್ಯಾಡಿ ಯಾ ದೇಹದಿಂದ ಗುಂಡುಗಳನ್ನು ಹೊರತೆಗೆದರೂ, ಅವನನ್ನು ಬದುಕಿಸಲಾಗಲಿಲ್ಲ.. ಯುವಕರ ನಿಲುವು ಸ್ಪಷ್ಟವಾಗಿತ್ತು. ಆಂಗ್ಲರು ಈಗ ಸ್ವಲ್ಪ ಚಿನ್ತಿಸಲಾರಮ್ಭಿಸಿದರು..

ಆನಂತರ 'ಡಾಗ್ಲಾಸ್' ಎಂಬ ಆಂಗ್ಲನನ್ನು ಮತ್ತೆ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಿದರು.. ಆತ ಮೊದಲಿಂದಲೂ ಹೆದರಿದ್ದ.
ಅದೊಮ್ಮೆ "ಡಿಸ್ಟ್ರಿಕ್ಟ್ ಬೋರ್ಡ್" ನ ಸಭೆ ಇತ್ತು. ಸಂಜೆಯವರೆಗೂ ಶಾಂತಿಯುತವಾಗಿಯೇ ಇತ್ತು. ಆದರೆ ಗಂಟೆ ೫ ಆಗುತ್ತಿದ್ದಂತೆ ಇಬ್ರು ಯುವಕರು, 'ಡಾಗ್ಲಾಸ್' ನ ಹತ್ರ ಬಂದ್ರು. ನೋಡುನೋಡುತ್ತಲೇ ಆ ಆಂಗ್ಲನ ಮೇಲೆ ಗುಂಡು ಹಾರಿಸಲಾಯಿತು..ಆ ಅಧಿಕಾರಿ ಧರೆಗುರುಳಿದ.
ತಕ್ಷಣ ಇಬ್ರೂ ಯುವಕರು ಓಡಿ ಹೋದರು. ಒಬ್ಬ ಅಲ್ಲೇ ಇದ್ದ ಪಾರ್ಕಿನಲ್ಲಿ ಅಡಗಿ ಕುಳಿತ. ಮತ್ತೊಬ್ಬ ಹತ್ತಿರದ ಲಾಡ್ಜ್ ಒಳಗೆ ನುಸುಳಿ ಹೋದ.

ಪಾರ್ಕಿನ ಒಳಗೆ ಬಚ್ಚಿಟ್ಟುಕೊಂಡ ಯುವಕ ಸುಲಭವಾಗಿ ಬ್ರಿಟಿಷರ ಕಣ್ಣಿಗೆ ಬಿದ್ದುಬಿಟ್ಟ. ಕೂಡಲೇ ಪಾರ್ಕಿಗೆ ಬಂದ ಬ್ರಿಟಿಶ್ ಪಡೆ ಅವನ ಮೇಲೆ ಗುಂಡಿನ ದಾಳಿ ನಡೆಸಿತು.. ಎಷ್ಟೇ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಆ ಹುಡುಗನಿಗೆ ಗುಂಡುಗಳು ತಗುಲಿದವು. ಕೆಳಗೆ ಬಿದ್ದ ಆತನನ್ನು ಆಂಗ್ಲರು ಸೆರೆ ಹಿಡಿದರು..
ಅವನ ಹೆಸರು "ಪ್ರದ್ಯೋತ ಕುಮಾರ ಭಟ್ಟಾಚಾರ್ಯ"..

ಗುಂಡಿನಿಂದ ಬಳಲಿದ್ದ 'ಡಾಗ್ಲಾಸ್' ಬದುಕಿ ಉಳಿಯಲಿಲ್ಲ.. ಇತ್ತ ಸೆರೆಮನೆಯಲ್ಲಿ 'ಪ್ರದ್ಯೋತ'ನಿಗೆ ಅವನ ಸಹಚರರ ಬಗ್ಗೆ ಸುಳಿವು ನೀಡಬೇಕೆಂದು ಚಿತ್ರ-ವಿಚಿತ್ರ ಹಿಂಸೆ ನೀಡಲಾಯಿತು. ದೇಶಕ್ಕಾಗಿ ಎಲ್ಲ ನೋವನ್ನೂ ಸಹಿಸಿಕೊಂಡನೆ ಹೊರತು, ಯಾರ ಹೆಸರನ್ನೂ ಹೇಳಲಿಲ್ಲ..!!

ಕೊನೆಗೆ ವಿಚಾರಣೆಯ ನಂತರ "ಪ್ರದ್ಯೋತ"ನಿಗೆ, ಮರಣದಂಡನೆಯ ಶಿಕ್ಷೆ ವಿಧಿಸಲಾಯಿತು. 1933 ಜನವರಿ 12 ರಂದು ಆತನನ್ನು ನೇಣಿಗೇರಿಸಿದರು..

ಆದರೂ ಆಂಗ್ಲರು ಮತ್ತೊಮ್ಮೆ "ಬರ್ಗ್' ಎಂಬ ಮತ್ತೊಬ್ಬನನ್ನು ಮಾಡಿದರು.
ತಾವೂ ಅಷ್ಟೇ ಬಲವಂತರು ಅಂತ, ಪಟ್ಟು ಹಿಡಿದ ಕ್ರಾಂತಿಕಾರಿಗಳು ಆ ಅಧಿಕಾರಿಯನ್ನೂ ಕೊಂದರು.
ಆ ಕಾರಣಕ್ಕೆ "ನಿರ್ಮಲ್ ಜೀವನ ಘೋಷ್", "ಬ್ರಿಜ್ ಕಿಶೋರ್ ಚಕ್ರವರ್ತಿ", "ರಾಮಕೃಷ್ಣ ರೈ" ಈ ಮೂವರನ್ನೂ ಗಲ್ಲಿಗೇರಿಸಲಾಯಿತು..
ಕಡೆಗೂ ಎಚ್ಚೆತ್ತ ಬ್ರಿಟಿಷರು, ಕ್ರಾಂತಿಕಾರಿಗಳ ಬೇಡಿಕೆಯಂತೆ, ಮುಂದೆ ಭಾರತೀಯನನ್ನೇ ಮಾಡಿದರು. ಅಲ್ಲಿಗೆ ಆ ಎಲ್ಲ ಹುತಾತ್ಮರ, ಕ್ರಾಂತಿಕಾರಿಗಳ ಗೆಲುವಾಗಿತ್ತು..

ಸ್ನೇಹಿತರೆ, ನಮಗೆ ಸ್ವಾತಂತ್ರ್ಯ ಪುಗಸಟ್ಟೆ ಸಿಕ್ಕಿಲ್ಲ.. ನಮ್ಮೀ ಸ್ವಾತಂತ್ರದ ಮಹಲು, ಅದೆಷ್ಟೋ ಕ್ರಾಂತಿಕಾರಿಗಳ ಬಲಿದಾನದ ಭದ್ರ ಅಡಿಪಾಯದ ಮೇಲೆ ನಿಂತಿದೆ ಅನ್ನೋದು, ಬಹಳಷ್ಟು ಮಂದಿಗೆ ಗೊತ್ತಾಗಲೇ ಇಲ್ಲ.. ಯಾಕಂದ್ರೆ, ಅಂಥಾ ಹುತಾತ್ಮರನ್ನು ಪರಿಚಯಿಸುವ ಕೆಲಸ, ಯಾವ ಶಾಲಾ ಪುಸ್ತಕಗಳೂ ಮಾಡಲೇ ಇಲ್ಲ...

ಅಣುಮಾತ್ರವೂ, ಕ್ಷಣಮಾತ್ರವೂ ತಮ್ಮ ಬದುಕಿನ ಬಗ್ಗೆ ಯೋಚಿಸದೆ, ಮಾತೃಭೂಮಿಯ ಸೇವೆಗಾಗಿ ಸಂಪೂರ್ಣವಾಗಿ ಅರ್ಪಿಸಿಕೊಂಡ ಯುವಕರೆಷ್ಟೋ.. ವಿದ್ಯಾರ್ಥಿಗಳೆಷ್ಟೋ..
ಅವರೆಲ್ಲರ ತ್ಯಾಗವನ್ನು ಮರೆತಿದ್ದರ ಪರಿಣಾಮವೇ, ಇವತ್ತಿನ ದೇಶದ ಈ ಸ್ಥಿತಿ..!!!

ಆ ಹುತಾತ್ಮ, "ಪ್ರದ್ಯೋತ"ನಿಗೊಂದು ಭಾವಪೂರ್ಣ ನಮನ..

Wednesday 11 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 1

ಸೂರ್ಯಸೇನ್ - ಮಾಸ್ಟರ್ ದಾ..
                                       
ಗಣೇಶ್ ಘೋಷ್
                                                                                
ಅಂಬಿಕಾ ಚಕ್ರವರ್ತಿ
                                                                                      
'ಚಿತ್ತಗಾಂಗ್' ಅನ್ನೋ ಹೆಸರು ಕೇಳಿದರೆ ಸಾಕು, ಸ್ವಾತಂತ್ರ್ಯ ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಮೈನವಿರೇಳುತ್ತದೆ. ಅಂಥಾ ಚಮತ್ಕಾರ ನಡೆದ ಸ್ಥಳ ಅದು. ಕ್ರಾಂತಿಕಾರಿಗಳ, ದೇಶಪ್ರೇಮಿಗಳ ಪುಣ್ಯಕ್ಷೇತ್ರವದು.ಆದರೆ, ದೇಶ ವಿಭಜನೆಯಾದ ಮೇಲೆ, ಈಗ ಈ ಜಾಗ 'ಬಾಂಗ್ಲಾದೇಶ'ದಲ್ಲಿದೆ..

 ಅವನ ಹೆಸರು 'ಸೂರ್ಯಸೇನ್'. ವೃತ್ತಿಯಿಂದ ಶಿಕ್ಷಕ.. ಎಲ್ಲ ವಿದ್ಯಾರ್ಥಿಗಳ ಪ್ರೀತಿಯ 'ಮಾಸ್ಟರ್ ದಾ'.ಹುಟ್ಟಿದ್ದು ನೌಪರ ಎಂಬ ಗ್ರಾಮದಲ್ಲಿ, 1894 ರಲ್ಲಿ...ಅದಾಗಲೇ, ಬಂಗಾಳದ ಪ್ರಸಿದ್ಧ ಸಂಘಟನೆಗಳಾದ 'ಅನುಶೀಲನ ಸಮಿತಿ' ಮತ್ತು 'ಜುಗಾಂತರ' ದಿಂದ ಪ್ರಭಾವಿತನಾಗಿದ್ದ..
 

ಭಾರತದ ಸ್ವಾತಂತ್ರ್ಯ, ಚಿತ್ತಗಾಂಗ್ ಗ್ರಾಮದಿಂದಲೇ ಪ್ರಾರಂಭವಾಗಬೇಕೆಂಬ ಮಹತ್ವಾಕಾಂಕ್ಷೆ ಹೊದಿದ್ದ.. ಅದಕ್ಕಾಗಿ ಮಾಸ್ಟರ್ ದಾ, ಸಂಘಟನೆಯನ್ನೂ ಶುರು ಮಾಡಿದ್ರು.. ಶಿಕ್ಷಕರಾಗಿದ್ದರಿಂದ ಸಂಘಟನೆ ಮಾಡೋದು ಅಷ್ಟೇನೂ ಕಷ್ಟ ಆಗ್ಲಿಲ್ಲ. ಶಾಲೆಯಲ್ಲಿನ, ಕೇವಲ 14-15 ವರ್ಷದೊಳಗಿನ ಪುಟ್ಟ ವಿದ್ಯಾರ್ಥಿಗಳೂ ಸೂರ್ಯಸೇನನ ಜೊತೆ ಸಹಕರಿಸಲು ಮುಂದೆ ಬಂದ್ರು..
ಸುಮಾರು ೬೦ ವಿದ್ಯಾರ್ಥಿಗಳ ದೊಡ್ಡ ಸೈನ್ಯವೆ ತಯಾರಾಯ್ತು.
ಗಣೇಶ್ ಘೊಶ್,ಅನಂತ ಸಿಂಹ,ನಿರ್ಮಲ್ ಸೇನ್,ಲೊಕನಾಥ ಬಲ್, ಅಂಬಿಕಾ ಚಕ್ರವರ್ತಿ, ಪ್ರೀತಿಲತಾ ವದ್ದೆದಾರ್, ಕಲ್ಪನಾ ದತ್ತ ಇವರ ಮುನ್ದಾಳತ್ವದಲ್ಲಿ ಅನೆಕ ಪಡೆಗಳನ್ನು ಸೂರ್ಯಸೇನ್ ರಚಿಸಿದ. ಹರಿಗೊಪಾಲ್ ಬಲ್(ಟೆಗ್ರ), ದೇವಪ್ರಸಾದ್ ಗುಪ್ತಾ, ಆನಂದಪ್ರಸಾದ ಗುಪ್ತಾ, ಹರಿಪಾದ ಚಕ್ರವರ್ತಿ, ಜಿಬನ್ ಘೋಶಾಲ್ ಮುಂತಾದ ಉತ್ಸಾಹಿ ತರುಣರು ಆ ಪಡೆಗಳಲ್ಲಿದ್ರು.
ಪ್ರತಿ ಪಡೆಗೂ ಒಂದೊಂದು ಕೆಲಸ ನೀಡಲಾಯಿತು.



ಕಲ್ಪನಾ ದತ್ತ
                                                                 
ಪ್ರೀತಿಲತಾ ವದ್ದೆದಾರ್
                                                                       
ಲೋಕನಾಥ್ ಬಲ್
                                                                        


ಅದು ಎಪ್ರಿಲ್ 18 - 1930. ಸೂರ್ಯಸೇನನ ಪ್ಲಾನಿನಂತೆ ಅವತ್ತು ರಾತ್ರಿ 10 ಗಂಟೆಗೆ ಸರಿಯಾಗಿ, ಒಮ್ಮೆಲೇ ಚಿತ್ತಗಾಂಗ್ ನ ಎಲ್ಲ ಆಂಗ್ಲ ಕಛೇರಿಗಳ ಮೇಲೆ ದಾಳಿ ಮಾಡಲಾಯಿತು.. 
ಪೂರ್ವ ಯೋಜಿತದಂತೆ, ಗಣೇಶ್ ಘೊಶನ ತಂಡ ಪೊಲಿಸ್ ಶಸ್ತ್ರಾಗಾರವನ್ನು ವಶಪಡಿಸಿಕೊಂಡರೆ, ಲೋಕನಾಥನ ತಂಡ 'ಅರೆಸೈನ್ಯ'ದ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿತು. ಅಂಬಿಕಾ ಚಕ್ರವರ್ತಿಯ ಜೊತೆಗಾರರು, ಚಿತ್ತಗಾಂಗ್ ಗೆ ಕೂಡುವ ಎಲ್ಲ ರೈಲ್ವೆ ಮಾರ್ಗವನ್ನು ಭಗ್ನಗೊಳಿಸಿದರು. ನಿರ್ಮಲ್ ಸೇನ್ ಟೆಲಿಗ್ರಾಫ್ ಸಂಪರ್ಕವನ್ನು ಕಡಿತಗೊಳಿಸಿದ.
ಈ ಎಲ್ಲ ಕಾರ್ಯಗಳ ನಂತರ, ಸೂರ್ಯಸೇನನ ನಾಯಕತ್ವದಲ್ಲಿ, ಪೋಲಿಸ್ ಶಸ್ತ್ರಾಗಾರದ ಮುಂದೆ ಎಲ್ಲರೂ ಸೇರಿ, ಅಲ್ಲೇ ಭಾರತದ ಬಾವುಟ ಹಾರಿಸಿ, "ವಂದೇ ಮಾತರಂ" ಹೇಳಿ, ಚಿತ್ತಗಾಂಗ್ ಸ್ವತಂತ್ರ ಎಂದು ಘೋಷಿಸಲಾಯಿತು..


ಆನಂತರ, ಚಿತ್ತಗಾಂಗ್ ನ ಪರ್ವತಶ್ರೇಣಿಗಳಲ್ಲಿ ಕ್ರಾಂತಿಕಾರಿಗಳು ಅಡಗಿಕೊಂಡರು. ಆದರೆ ಸುಳಿವನ್ನು ಹಿಡಿದು ಬೆನ್ನುಹತ್ತಿದ ಆಂಗ್ಲರು, ಇಡೀ ಆ ಪರ್ವತವನ್ನು ಸುತ್ತುವರೆದರು.
ಸುಮಾರು 80 ಬ್ರಿಟಿಶ್ ಪಡೆಗಳ ಜೊತೆಗೆ, ಆ ಪುಟ್ಟ ವಿದ್ಯಾರ್ಥಿಗಳ ಪಡೆ ಗುಂಡಿನ ದಾಳಿ ನಡೆಸಿತು.. 12 ಜನ ಆ ಹೋರಾಟದಲ್ಲಿ ಮೃತರಾದರು. ಕೆಲವರು ಕಲ್ಕತ್ತೆಗೆ ಓಡಿಹೋದರು. ಸೂರ್ಯಸೇನ್ ಮಾತ್ರ ವೇಷಮರೆಸಿಕೊಂಡಿದ್ದ..!!

ಇದಾದ ಮೇಲೆ, ಅಜ್ಞಾತ ಮನೆಯೊಂದರಲ್ಲಿ ಅಡಗಿದ್ದಾಗ, ಬ್ರಿಟಿಷರ ದಾಳಿಗೆ 'ನಿರ್ಮಲ್ ಸೇನ್' ಬಲಿಯಾದ. ನಂತರ ಪ್ರೀತಿಲತಾ, ಊರಿನ "ಯುರೋಪೆಯನ್ ಕ್ಲಬ್' ಮೇಲೆ ದಾಳಿ ನಡೆಸಿ, ದುಷ್ಟ ಆಂಗ್ಲರನ್ನು ಕೊಂದು, ತಾನೂ ಹುತಾತ್ಮಳಾದಳು..
ಆದರೂ ಕೊನೆಗೆ, 'ನೇತ್ರ ಸೇನ್' ಎಂಬ ದ್ರೋಹಿಯ ಕಾರಣದಿಂದ, ಸೂರ್ಯಸೇನ್ ಬಂಧಿತನಾಗಿಬಿಟ್ಟ.. ಆ ಸಿಟ್ಟಿಗೆ, ಉಳಿದ ಕ್ರಾಂತಿ ಯುವಕರು ಆ ಮನೆಮುರುಕನನ್ನು ಕೊಂದು, ದೇಶದ್ರೋಹಕ್ಕೆ ಸಾವೇ ಶಿಕ್ಷೆ ಅನ್ನೋದನ್ನ ತೋರಿಸಿದರು..
 

ಬಂಧಿತ ಸೂರ್ಯಸೇನನ ವಿಚಾರಣೆ ನಡೆದು, ಅವನಿಗೆ ಮತ್ತು ಜುಗಾಂತರ ಪಾರ್ಟಿಯ "ತಾರಕೆಶ್ವರ ದಸ್ತಿದಾರ್' ಇಬ್ರಿಗೂ ಗಲ್ಲು ಶಿಕ್ಷೆ ಪ್ರಕಟಿಸಲಾಯಿತು..
ಜನವರಿ 12 ರಂದು ಅವರನ್ನು ನೇಣು ಹಾಕಲಾಯಿತು..
ಆದರೆ, ಗಲ್ಲಿಗೆರಿಸುವುದಕ್ಕಿಂತ ಮುಂಚೆ, ಸೂರ್ಯಸೆನನನ್ನು ಅಮಾನುಷವಾಗಿ ಬ್ರಿಟಿಷರು ಹಿಂಸಿಸಿದರು..
ಹ್ಯಾಮರ್ ನಿಂದ ಅವನ ಹಲ್ಲುಗಳನ್ನು ಒಡೆದರು. ಕಟಿಂಗ್ ಪ್ಲೇಯರ್ ನಿಂದ ಅವನ ಉಗುರುಗಳನ್ನ ಕೀಳಲಾಯಿತು.. ತೊಡೆಯ ಸಂದಿಗಳಲ್ಲಿ ತಿವಿದರು. ಕೈಕಾಲಿನ ಕೀಲುಗಳನ್ನ ಮುರಿದರು. ಇಂಥಾ ಹಿಂಸೆಯಿಂದ ಮೂರ್ಚೆ ಹೋಗಿದ್ದ ಸೂರ್ಯಸೇನನನ್ನು ಅನಾಮತ್ತಾಗಿ ಎಳೆದುಕೊಂಡು ಬಂದು ನೇಣಿಗೇರಿಸಿದರು
.


ಸಾವಿಗೂ ಮುಂಚೆ, ಆತ ತನ್ನ ಯುವಕರಿಗೆ ಪತ್ರವೊಂದನ್ನು ಬರೆದಿದ್ದ..
" ಸಾವು ನನ್ನನ್ನು ಆಲಂಗಿಸುತ್ತಿದೆ.. ಆ ಅನಂತದೆಡೆಗೆ ನಾನು ಹೊರಟಿದ್ದೇನೆ.. ಮಾತೃಭೂಮಿಗೆ ಪ್ರಾಣ ಕೊಡುತ್ತಿರುವ ಈ ಸೌಭಾಗ್ಯದ ಸಂದರ್ಭದಲ್ಲಿ, ನಾನು ನಿಮಗೆ ನೀಡುವ ಆದೇಶ ಒಂದೇ. ಅದು ನನ್ನ ದೇಶದ "ಸ್ವರಾಜ್ಯ"ದ ಕನಸು. ಚಿತ್ತಗಾಂಗ್ ನ ಕ್ರಾಂತಿಯನ್ನು ಎಂದಿಗೂ ಮರೆಯಬೇಡಿ.. ನಿಮ್ಮ ಮನದಲ್ಲಿ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಎಲ್ಲ ವೀರರ ಹೆಸರನ್ನು ರಕ್ತದಲ್ಲಿ ಬರೆದುಕೊಳ್ಳಿರಿ.. ಮತ್ತು ಸ್ವಾತಂತ್ರ್ಯ ಸಿಗೋವರೆಗೂ ಹೋರಾಟ ನಿಲ್ಲಿಸದಿರಿ.."


ಹೋರಾಟದಲ್ಲಿ ಹುತಾತ್ಮರಾದ - ಟೆಗ್ರ( ಹರಿಗೋಪಾಲ್ ಬಲ್) ಮತ್ತು ಮೋತಿ ಕನುನ್ಗೋ.
                                                           
ಹುತಾತ್ಮರಾದ - ನರೇಶ್ ರೋಯ್, ತ್ರಿಪುರ ಸೇನ್, ವಿಧು ಭಟ್ಟಾಚಾರ್ಯ.
ಹುತಾತ್ಮರಾದ ಪ್ರಭಾಸ್ ಬಲ್, ಶಶಾಂಕ್ ದತ್ತ, ನಿರ್ಮಲ ಲಾಲಾ.
ಹುತಾತ್ಮರಾದ ಜಿತೇಂದ್ರ ದಾಸಗುಪ್ತ, ಮಧುಸೂದನ್ ದತ್ತ, ಪುಲಿನ್ ವಿಕಾಸ್ ಘೋಷ್..
                                                            
ಅವನ ಶಿಷ್ಯರೆನೋ, ಹುತಾತ್ಮರ ಹೆಸರನ್ನು ಸ್ಮರಿಸಿ, ಅದರಂತೆ ಹೋರಾಡಿ ದೇಶವನ್ನು ಬಿಡುಗಡೆಗೊಳಿಸಿದರು..
ಆದರೆ, ನಾವು ನಮ್ಮ ಹೃದಯದಾಳದಲ್ಲಿ, ಆ ತ್ಯಾಗಮಯಿಗಳ ಹೆಸರನ್ನು ಬರೆದುಕೊಳ್ಳಲೆ ಇಲ್ಲವಲ್ಲ..!!!!!!!
ಇದೇ ಚಿತ್ತಗಾಂಗ್ ಹೋರಾಟವನ್ನು ಆಧರಿಸಿ ಆಶುತೋಷ್ ಗೊವಾರಿಕರ್ ಅವ್ರ ನಿರ್ದೇಶನದಲ್ಲಿ, "ಖೇಲೇ ಹಂ ಜೀ ಜಾನ್ ಸೆ" ಎಂಬ ಅದ್ಭುತ ಚಿತ್ರ ತೆರೆಕಂಡಿತ್ತು. ಆದರೆ ಡಾನ್-2, ಬಾಡಿಗಾರ್ಡ್ ಮುಂತಾದ ಚಿತ್ರವನ್ನು ನೋಡುವ ನಮ್ಮ ಯುವಕರು ಇಂಥಾ ಅಪರೂಪದ ಚಿತ್ರವನ್ನು ಪ್ರೋತ್ಸಾಹಿಸಲಿಲ್ಲ.( ಅದೆಷ್ಟೋ ಮಂದಿಗೆ ಇಂಥಾ ಸಿನೆಮಾ ಇದೆ ಅನ್ನೋದೇ ಗೊತ್ತಿಲ್ಲ.)


ಸೂರ್ಯಸೇನನ ಹೌತಾತ್ಮ್ಯದಿನವಾದ ಇಂದು, ಆ ವೀರಚೇತನಕ್ಕೆ ಭಾವಪೂರ್ಣ ಶ್ರಧಾಂಜಲಿ..  


(ಚಿತ್ರಕೃಪೆ - http://shantigrouprealhistory.blogspot.com)
 

[ಉಳಿದೆರಡು ಭಾಗಗಳು
ಭಾಗ-೨ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೨
ಭಾಗ-೩ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೩
]