Wednesday 4 December 2013

"ಭಾರತಮಾತಾ ಅಸೋಸಿಯೇಷನ್" ಎಂಬ ಆ ಸಂಘಟನೆ,.!!!

ಅವತ್ತು ಜೂನ್ ೧೭, ೧೯೧೧. ತಮಿಳುನಾಡಿನ ತೂತುಕುಡಿಯ(ಟುಟಿಕಾರಿನ್)  ಸಬ್-ಕಲೆಕ್ಟರ್ ಆಗಿದ್ದ ರಾಬರ್ಟ್.ಆಶ್ ನ ಹಣೆಬರಹ ಅಂದು ನೆಟ್ಟಗಿರಲಿಲ್ಲ ಅನ್ಸುತ್ತೆ. ಅವನು ರೈಲಿನಲ್ಲಿ ಸಂಚರಿಸುತ್ತಿದ್ದ. ರೈಲ್ ಗಾಡಿ 'ಮನಿಯಚಿ' ನಿಲ್ದಾಣದಲ್ಲಿ ನಿಂತಿತ್ತು. ಆಶ್ ಮೊದಲನೇ ದರ್ಜೆಯ ಬೋಗಿಯಲ್ಲಿ ಕುಳಿತಿದ್ದ. ಆತ ಹಾಗೆ ತನ್ನದೇ ಲಹರಿಯಲ್ಲಿ ವಿಚಾರಮಗ್ನನಾಗಿದ್ದ. ನೋಡುನೋಡುತ್ತಲೇ  ೨೫ ರ ಹರೆಯದ ತರುಣನೊಬ್ಬ ಧಿಡೀರನೆ ಬೋಗಿಯೊಳಗೆ ನುಗ್ಗಿದ. ಏನಾಗುತ್ತಿದೆ ಎಂದು ಕಣ್ತೆರೆಯುವಷ್ಟರಲ್ಲಿ, ಆ ಯುವಕ ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಪಿಸ್ತೂಲನ್ನು ತೆಗೆದು, ಆಶ್ ಗೆ ಗುರಿಯಿಟ್ಟು ಗುಂಡು ಹೊಡೆದ. ಪಾಯಿಂಟ್-ಬ್ಲಾಂಕ್ ರೇಂಜ್ ನಲ್ಲಿ ಬಂದ ಗುಂಡು ಆಶ್ ನ ಪ್ರಾಣವನ್ನು ಥಟ್ಟನೆ ತೆಗೆಯಿತು. ಆಶ್ ಧರೆಗುರುಳಿದ.
ಇದ್ದಕ್ಕಿದ್ದಂತೆ ಸ್ಟೇಷನ್ ತುಂಬಾ ಜನರ ಕೋಲಾಹಲ. ಜನ ಅತ್ತಿತ್ತ ಚೆಲ್ಲಾಪಿಲ್ಲಿಯಾಗಿ ಓಡಾಡಲು ಶುರುಮಾಡಿದರು. ಗುಂಡು ಹೊಡೆದ ಯುವಕ ಒಂದೆರಡು ನಿಮಿಷ ಅಲ್ಲೇ ನಿಂತು, ಆಶ್ ನ ಪ್ರಾಣ ಹೋಗಿದ್ದನ್ನು ಖಾತ್ರಿ ಮಾಡಿಕೊಂಡು ನಂತರ ನಿರ್ಭೀತನಾಗಿ, ಬೋಗಿಯಿಂದ ಕೆಳಗಿಳಿದ. ಇಳಿದವನೇ ನಿಲ್ದಾಣದ ಶೌಚಾಲಯಕ್ಕೆ ಹೋಗಿ, ತನ್ನದೇ ಪಿಸ್ತೂಲಿನಿಂದ ತನ್ನ ಬಾಯಿಯಲ್ಲಿ ತಾನೇ ಗುಂಡು ಹೊಡೆದುಕೊಂಡು ಹುತಾತ್ಮನಾಗಿಯೇ ಬಿಟ್ಟ. ರಕ್ತದ ಮಡುವಿನಲ್ಲಿ ಬಿದ್ದಿದ್ದ  ಅವನ ಶವವನ್ನು ನಂತರ ಪೊಲೀಸರು ತೆಗೆದುಕೊಂಡು ಹೋಗಿ ವಿಚಾರಣೆ ನಡೆಸಲು ಪ್ರಾರಂಭಿಸಿದರು..ಅವನ ಶವದ ಜೊತೆಗೆ ಒಂದು ಪತ್ರವೂ ಪೊಲೀಸರಿಗೆ ಸಿಕ್ಕಿತು.
 "ನಮ್ಮೀ ಭಾರತ ದೇಶಕ್ಕೆ ಶತ್ರುವಾದ ಆಂಗ್ಲರನ್ನು ಹೊರಗೋಡಿಸಿ, ಮತ್ತೆ ಪವಿತ್ರ ಭಾರತವನ್ನು ಸ್ಥಾಪಿಸಲು ಪ್ರಯೊಬ್ಬ ಭಾರತೀಯನೂ ಹೋರಾಡುತ್ತಿದ್ದಾನೆ..ಅದಕ್ಕಾಗಿ ಸುಮಾರು ೩೦೦೦ ಮದ್ರಾಸಿಗರು ಶಪಥ ಮಾಡಿದ್ದಾರೆ. ಅದನ್ನು ಎಲ್ಲರಿಗೂ ತಿಳಿಸಲೆಂದೇ ನಾನು ಈ ಕಾರ್ಯವನ್ನು ಮಾಡಿದ್ದೇನೆ." ಎಂಬ ಬರಹ ಅದರಲ್ಲಿತ್ತು..!!

ಅವನ ಹೆಸರು "ವಾಂಚಿನಾಥ್ ಅಯ್ಯರ್". ತಿರುವನ್ಲ್ವೇಲಿ ಜಿಲ್ಲೆಯ ಸೆಂಗೊತ್ತೈ ಊರಿನವನು. ಆಗ ಅದು ಟ್ರಾವನ್ಕೋರ್ ಸಂಸ್ಥಾನದ ಅಡಿಯಲ್ಲಿತ್ತು.ಅವನು ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲೇ ಮುಗಿಸಿ, ಎಂ.ಎ ಪದವಿಯನ್ನು ತಿರುವನಂತಪುರದ ಕಾಲೇಜಿನಲ್ಲಿ ಪಡೆದಿದ್ದ.ಮದುವೆಯೂ ಆಗಿತ್ತು.ಸರ್ಕಾರಿ ಹುದ್ದೆಯಲ್ಲಿ ನೌಕರಿ ಮಾಡುತ್ತಿದ್ದ. ಹೀಗೆ ತನ್ನ ಬದುಕು ಸಾಗಿಸುತ್ತಿದ್ದ ಇವನ ಮೇಲೆ ಅಪಾರ ಪ್ರಭಾವ ಬೀರಿದ್ದು "ದಕ್ಷಿಣ ಭಾರತದ ಸಿಂಹ" ಎಂದು ಖ್ಯಾತಿ ಹೊಂದಿದ್ದ ಬಿಪಿನ್ ಚಂದ್ರ ಪಾಲರು. ಪಾಲರ ಅನೇಕ ಭಾಷಣಗಳನ್ನು ಕೇಳಿ ವಾಂಚಿ ಉದ್ದೀಪಿತನಾಗಿದ್ದ. ಈ ಪಾಲರ ಜೊತೆಗೆ ಇನ್ನೊಬ್ಬ ದೇಶಪ್ರೇಮಿಯೋಬ್ಬರು ಕೈಗೂಡಿಸಿದ್ದರು. ವಿ.ಓ.ಚಿದಂಬರಂ ಪಿಳ್ಳೈ. ಸಶಸ್ತ್ರ ಕ್ರಾಂತಿಯಿಂದಲೇ ಸ್ವಾತಂತ್ರ್ಯವೆಂದು ನಂಬಿದ್ದ ಪಿಳ್ಳೈ, ಶಸ್ತ್ರಗಳ ತಯಾರಿಕೆಗೆ ಸಹಾಯ ಮಾಡ್ತಿದ್ರು. ಅಲ್ಲದೆ ಬ್ರಿಟಿಷರಿಗೆ ಸೆಡ್ಡು ಹೊಡೆಯಲು ತಮ್ಮದೇ ಆದ "ಸ್ವದೇಶೀ ನೇವಿಗೇಶನ್" ಎಂಬ ಸ್ವತಂತ್ರ ಹಡಗು ಸಂಸ್ಥೆಯನ್ನೂ ಸ್ಥಾಪಿಸಿದ್ದರು.
ವಾಂಚಿನಾಥ್ ಅಯ್ಯರ್

ಪಿಳ್ಳೈ ಅವರ ಇಷ್ಟೆಲ್ಲಾ ಕಾರ್ಯಗಳನ್ನು ನೋಡಿಕೊಂಡು ಆಂಗ್ಲರಿಗೆ ಸುಮ್ಮನಿರಲಾಗಲಿಲ್ಲ. ಇವರನ್ನು ಹತ್ತಿಕ್ಕಲೆಂದೇ ಕಲೆಕ್ಟರ್ ಆಶ್ ವಿಶೇಷ ಮುತುವರ್ಜಿ ವಹಿಸಿದ್ದ. ಪಿಳ್ಳೈ ಅವರ ಮೇಲೆ ಅನೇಕ ಕೇಸ್ ಗಳನ್ನು ಹಾಕಿದ. ಅವರ ನೇವಿಗೇಶನ್ ಸಂಸ್ಥೆಯನ್ನೂ ಮುಳುಗಿಸಿಬಿಟ್ಟ.ಇದಕ್ಕಾಗಿ ತನ್ನ ಮೇಲಧಿಕಾರಿಗಳ  ಶಹಬ್ಬಾಸನ್ನೂ ಪಡೆದಿದ್ದ.ಇವೆಲ್ಲ ಕಾರಣಗಳಿಗಾಗಿ, ಆಶ್ ಅಲ್ಲಿನ ಯುವಕರ ಕೆಂಗಣ್ಣಿಗೆ ಗುರಿಯಾಗಿದ್ದ. ಪಿಳ್ಳೈ ಅಂತಹ ವ್ಯಕ್ತಿಯನ್ನು ಮುಳುಗಿಸಿದ, ಆಶ್ ನನ್ನೂ ಮುಗಿಸಬೇಕೆಂಬ ಭಾವನೆ ಎಲ್ಲರಲ್ಲೂ ಕೆಂಡದಂತೆ ಜ್ವಲಿಸುತ್ತಿತ್ತು. ಇಷ್ಟಕ್ಕೂ ಆಶ್ ಸ್ವಭಾವತಃ ಆಗಿಯೂ ಸಜ್ಜನನೇನೂ ಇರಲಿಲ್ಲ. ಕ್ಷಣಕ್ಷಣಕ್ಕೂ ಭಾರತೀಯರನ್ನು ದ್ವೇಷಿಸುತ್ತಿದ್ದ ವ್ಯಕ್ತಿ ಆತ. ಭಾರತೀಯರನ್ನು ಸದೆಬಡಿಯುವ ಯಾವ ಅವಕಾಶವನ್ನೂ ತಪ್ಪಿಸಿಕೊಂಡವನಲ್ಲ.  ಹೀಗಾಗಿ ಅವನ ಹತ್ಯೆ ಅನಿವಾರ್ಯವಾಗಿತ್ತು.!

*********************************************************************************
ನೀಲಕಂಠ ಬ್ರಹ್ಮಚಾರಿ ( ಸದ್ಗುರು ಓಂಕಾರ್)


ವಾಂಚಿ ಹುತಾತ್ಮನಾದ ಮೇಲೆ, ಅವನ ಮನೆಯನ್ನು ತಡಕಾಡಿದ ಪೊಲೀಸರಿಗೆ ಇನ್ನಷ್ಟು ಮಾಹಿತಿಗಳೂ ದೊರಕಿದವು. ಅಲ್ಲದೆ ವಾಂಚಿಯ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಅರುಮುಘಂ ಪಿಳ್ಳೈ ನನ್ನು ಬಂಧಿಸಲಾಯಿತು. ಅವನು ತನ್ನ ತಪ್ಪೊಪ್ಪಿಕೊಂಡು ಅಪ್ರೂವರ್ ಆಗಿಬಿಟ್ಟ. ಅವನ ಮೂಲಕ ಈ ಆಶ್ ನ ಕೊಲೆಯ ಸಂಪೂರ್ಣ ರೂಪುರೇಷೆ ಪೊಲೀಸರಿಗೆ ಗೊತ್ತಾಗಿಹೋಯಿತು.ಹೀಗಾಗಿ ಸಂಬಂಧಪಟ್ಟ ವ್ಯಕ್ತಿಗಳ ಶೋಧನೆಯಲ್ಲಿ ಪೊಲೀಸರು ತೊಡಗಿದರು.ಅಂತೂ ಕೊನೆಗೆ,
ಒಟ್ಟು ೧೪ ಮಂದಿಯನ್ನು ಪೊಲೀಸರು ಬಂಧಿಸಿದರು.
೧)ನೀಲಕಂಠ ಬ್ರಹ್ಮಚಾರಿ,
೨)ಶಂಕರಕೃಷ್ಣ ಅಯ್ಯರ್ (ವಾಂಚಿ ಅಯ್ಯರ್ ನ ಸಂಬಂಧಿ. ಆಶ್ ನ ಹತ್ಯೆಯಲ್ಲಿ ಇವನೂ ಭಾಗಿಯಾಗಿದ್ದ.)
೩)ಎಂ.ಚಿದಂಬರಂ ಪಿಳ್ಳೈ
೪)ಮುತ್ತುಕುಮಾರಸ್ವಾಮಿ ಪಿಳ್ಳೈ
೫)ಸುಬ್ಬಯ್ಯ ಪಿಳ್ಳೈ
೬)ಜಗನ್ನಾಥ ಅಯ್ಯಂಗಾರ್
೭)ಹರಿಹರ ಅಯ್ಯರ್
೮)ಬಾಪು ಪಿಳ್ಳೈ
೯)ದೆಶಿಕಾಚಾರಿ
೧೦)ವೆಂಬು ಪಿಳ್ಳೈ
೧೧)ಸವಡಿ ಅರುಣಾಚಲಂ ಪಿಳ್ಳೈ
೧೨)ಅಳಗಪ್ಪ ಪಿಳ್ಳೈ
೧೩)ಸುಬ್ರಹ್ಮಣ್ಯ ಅಯ್ಯರ್
೧೪)ಪಿಚುಮಣಿ ಅಯ್ಯರ್
ಈ ಎಲ್ಲರನ್ನೂ ಮದ್ರಾಸಿನ ಹೈಕೋರ್ಟ್ ಗೆ ಹಾಜರಿ ಪಡಿಸಲಾಯಿತು. ತ್ರಿಸದಸ್ಯ ಪೀಠದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲು ಪ್ರಾರಂಭವಾಯಿತು..


***********************************************************************************

ಆಶ್ ನ ಹತ್ಯೆಯ ಮೂಲ ಸೂತ್ರಧಾರನೇ 'ನೀಲಕಂಠ ಬ್ರಹ್ಮಚಾರಿ'. ನೀಲಕಂಠ ಮೊದಲಿನಿದಲೂ ರಾಷ್ಟ್ರದ ಸ್ವಾತಂತ್ರ್ಯದ ಕನಸು ಕಾಣುತ್ತಿದ್ದ ವ್ಯಕ್ತಿ. ಆಗ ದಕ್ಷಿಣದಲ್ಲಿ ಕ್ರಾಂತಿಕಾರಿಗಳಿಗೆ ಹೇಳಿ ಮಾಡಿಸಿದ ಜಾಗವೆಂದರೆ 'ಪಾಂಡಿಚೆರಿ'. ಫ್ರೆಂಚರ ತಾಣವಾಗಿದ್ದ ಇದೆ ಪಾಂಡಿಚೆರಿಯೇ ಅರವಿಂದ ಘೋಷ್, ವಿ.ವಿ.ಎಸ್.ಅಯ್ಯರ್, ಮಹಾಕವಿ ಸುಬ್ರಹ್ಮಣ್ಯ ಅಯ್ಯರ್ ಇಂತಹ ಅದ್ಭುತ ರಾಷ್ಟ್ರಪ್ರೇಮಿಗಳ ಆವಾಸವಾಗಿತ್ತು. ನೀಲಕಂಠನೋ ಇಲ್ಲೆಯೆ ಅಸ್ಶ್ರಾಯ ಪಡೆದಿದ್ದು. ಪತ್ರಿಕೋದ್ಯಮಿ ಆಗಿದ್ದ ಇವನು ಬ್ರಿಟಿಷರ ವಿರುದ್ಧ "ಸೂರ್ಯೋದಯ"ವೆಂಬ ಪತ್ರಿಕೆ ಹೊರತರುತ್ತಿದ್ದ. ಆಂಗ್ಲರ ದುಷ್ಕೃತ್ಯಗಳು, ಭಾರತದ ಸ್ವಾತಂತ್ರ್ಯ ಮುಂತಾದ ವಿಚಾರಗಳ ಬಗ್ಗೆ ಅದ್ಭುತ ಬರಹಗಳನ್ನು ಬರೆಯುತ್ತಿದ್ದ..ಇವನ ಎಲ್ಲ ಕಾರ್ಯಗಳಲ್ಲೂ ಶಂಕರಕೃಷ್ಣ ಅಯ್ಯರ್ ಮುಂದಿರುತ್ತಿದ್ದ.

ಆಶ್ ನ ಹೇಯ ಕೃತ್ಯಗಳಿಂದ ತಪ್ತನಾಗಿದ್ದ  ವಾಂಚಿಗೆ  ಹೆಗಲಾಗಿದ್ದು "ಭಾರತಮಾತಾ ಅಸೋಸಿಯೇಷನ್" ಎಂಬ ಸಂಸ್ಥೆ. ದಕ್ಷಿಣ ಭಾರತದ ಕೆಲವೇ ಕೆಲವು ಕ್ರಾಂತಿಕಾರಿ ಸಂಘಟನೆಗಳಲ್ಲಿ ಇದೂ ಒಂದು. ಅದೇ ನೀಲಕಂಠನಿಂದ  ಪ್ರಾರಂಭವಾದ ಈ ಸಂಸ್ಥೆ, ಸಶಸ್ತ್ರ ಕ್ರಾಂತಿಗಾಗಿ ಯುವಕರನ್ನು ತರಬೇತಿಗೊಳಿಸುತ್ತಿತ್ತು. ಈ ಸಂಸ್ಥೆಯ ಜೊತೆಗೂಡಿದ ವಾಂಚಿ ಹಿಂತಿರುಗಿ ನೋಡಲಿಲ್ಲ. ೧೯೧೦ ಡಿಸೆಂಬರ್ ನಲ್ಲಿ ಪ್ಯಾರಿಸ್ ನಿಂದ ಬಂದ ವಿ.ವಿ.ಎಸ್.ಅಯ್ಯರ್ ಯುವಕರಿಗೆ ಗುಂಡು ಹೊಡೆಯುವ ತರಬೇತಿ ಶುರು ಮಾಡಿದರು.. ಅಲ್ಲಿಂದ ಆಶ್ ನ ಹತ್ಯೆಯ ನಕ್ಷೆ ಸಿದ್ಧವಾಯಿತು. ವಸ್ತುತಃ ಜೂನ್ ೧೧ ರಂದೇ ಆಶ್ ನನ್ನು ಕೊಲ್ಲಬೇಕೆಂಬ ನಿರ್ಧಾರವಾಗಿತ್ತು. ಯಾಕಂದ್ರೆ ಅವತ್ತು ಇಂಗ್ಲೆಂಡ್ ನಲ್ಲಿ ಐದನೇ ಜಾರ್ಜ್ ನ ಪಟ್ಟಾಭಿಷೇಕ ನಡೆಯುತ್ತಿತ್ತು. ಅಲ್ಲಿನ ಆಂಗ್ಲರಿಗೆ ಬಿಸಿ ಮುಟ್ಟಿಸಲು ಇದೆ ಸರಿಯಾದ ದಿನವೆಂದು ಹಾಗೆ ನಿರ್ಧರಿಸಿದ್ದರು. ಆದರೆ ಅವತ್ತು ಆಶ್ ಎಲ್ಲಿಯೂ ಕಾಣಲೇ ಇಲ್ಲ. ಹೀಗಾಗಿ ಅವತ್ತು ಮೃತ್ಯುವಿನಿಂದ ತಪ್ಪಿಸಿಕೊಂಡ..
ಆದರೆ ಹಠ ಬಿಡದ ವಾಂಚಿ ಮುಂದಿನ ವಾರದಲ್ಲೇ ಅವನ ಸಂಹಾರ ಮಾಡಿ, ತಾನೂ ಹುತಾತ್ಮನಾಗಿದ್ದ.

ನ್ಯಾಯಾಲಯದಲ್ಲಿ ದೀರ್ಘ ವಿಚಾರಣೆ ನಡೆಯಿತು. ಆದರೆ ವಾಂಚಿ ಅದಾಗಲೇ ಮೃತನಾದ್ದರಿಂದ, ಹಾಜರುಪಡಿಸಿದ ೧೪ ಆರೋಪಿಗಳ ಮೇಲೆ ನೇರವಾಗಿ ಕೊಲೆಯ ಆರೋಪ ಹೊರಿಸಲು ಯಾವ ಸಾಕ್ಷ್ಯಗಳೂ ಸಿಗಲೇ ಇಲ್ಲ. ಆದರೂ, ಆಂಗ್ಲ ಪ್ರಭುತ್ವದ ವಿರುದ್ಧ ದಂಗೆದ್ದ ಕಾರಣಕ್ಕೆ ಶಿಕ್ಷೆ ವಿಧಿಸಲಾಯಿತು. ನೀಲಕಂಠನಿಗೆ ಏಳು ವರ್ಷಗಳ ಕಠಿಣ ಕಾರಾಗೃಹವಾಸ ವಿಧಿಸಿದರು..!

ಜೈಲಿನಿಂದ ಹೊರಬಂದ ನೀಲಕಂಠನ ಮನಸ್ಸು ಅಧ್ಯಾತ್ಮದತ್ತ ಹೊರಳಿತ್ತು. ಥೇಟ್ ನಮ್ಮ ಅರವಿಂದರ ಹಾಗೆ. ನೀಲಕಂಠ ಸದ್ಗುರು ಓಂಕಾರ ಎಂಬ ಹೆಸರಿನೊಂದಿಗೆ ಸನ್ಯಾಸಿಯಾದ. ಆಧ್ಯಾತ್ಮದಲ್ಲೇ ಭಾರತವನ್ನು ಅನವರತ ಧ್ಯಾನಿಸುತ್ತಿದ್ದ.!!

ಡಿಸೆಂಬರ್ ೪, ಆ ನೀಲಕಂಠ ಹುಟ್ಟಿದ ದಿನ.. ದಕ್ಷಿಣ ಭಾರತದ ಏಕೈಕ ಹುತಾತ್ಮನನ್ನು ಹುಟ್ಟುಹಾಕಿದ ಕೀರ್ತಿ ನೀಲಕಂಠನದ್ದು.ಯಾವುದೇ ಫಲಾಪೇಕ್ಷೆಯಿಲ್ಲದೆ ನಿರ್ವಾಜದಿಂದ ರಾಷ್ಟ್ರವನ್ನು ಪ್ರೀತಿಸಿದ, ಅದಕ್ಕಾಗಿ ಎಲ್ಲ ಕಷ್ಟಗಳನ್ನೂ ಸ್ವೀಕರಿಸಿದ ಇಂತಹ ವೀರರು ನಮಗೆ ಆದರ್ಶವಾಗಿರಲಿ. ಬಹುತೇಕ ಎಲ್ಲ ಪಠ್ಯಗಳಿಂದ, ಜನರ ಮಾನಸದಿಂದ ಮರೆಯಾಗಿ ಹೋದ ಇವರನ್ನು ಕಡೆಪಕ್ಷ ನಾವಾದರೂ ನೆನೆಯೋಣ..

ವಂದೇ ಮಾತರಂ..!!

1 comment:

  1. Very nice. I never knew about this. Thank you for sharing

    ReplyDelete