Friday 6 September 2013

ಗಣಾನಾಂ ತ್ವಾ ಗಣಪತಿಂ...!!!

ಇದೊಂಥರಾ ಸಮೂಹಸನ್ನಿ ಇದ್ದಂತೆ.. ಮನೆ ಎದುರಿಗೆ ಡೊಳ್ಳು ಬಾರಿಸುತ್ತಿದ್ದರೆ, ಎಲ್ಲರ ಜೊತೆಗೆ ನಮಗೂ ಕುಣಿಯುವ ಹಂಬಲವಾಗುವುದಿಲ್ಲವೇ..!.. ಹಾಗೆಯೇ ಈ ಲೇಖನವೂ.. ದಿನನಿತ್ಯ ಈ ಗಣಪತಿಯ, ಅವನ ಪುಸ್ತಕದ ಕುರಿತಾದ ಹತ್ತು ಹಲವು ಲೇಖನಗಳನ್ನು ಓದಿ, ನನ್ನದೂ ಈ ವಿಷಯದಲ್ಲಿ ಅಭಿಪ್ರಾಯಗಳೆದ್ದು ಇಲ್ಲಿ ಬರೆಯಲಾಗಿವೆ..!!

ನೈತಿಕವಾಗಿ ಹೇಳೋದಾದ್ರೆ, ಈ ವಿವಾದಿತ ಪುಸ್ತಕವನ್ನು ಓದದೆಯೇ ಅದರ ವಿಮರ್ಶೆ ಮಾಡುವುದು ಮೂರ್ಖತನವೇ ಆಗುತ್ತದೆ.. ಹೀಗಾಗಿ ನಾನು ಆ ಪುಸ್ತಕದ ವಿಷಯವಾಗಿ ಭಾವಾವೇಶದಿಂದ ಮಾತನಾಡಲಾರೆ.. ಇನ್ನು ಈ ಪುಸ್ತಕದ ನಿಷೆಧವೂ ಅಪ್ರಸ್ತುತ. ಓದಲು ಪುಸ್ತಕವೇ ಇಲ್ಲದಿದ್ದರೆ, ಅದರ ಸತ್ಯಾಸತ್ಯತೆ ತಿಳಿಯುವುದಾದರೂ ಹೇಗೆ.? 
ಹಾಗಿದ್ದರೂ ಯಾವ ಆಧಾರದಲ್ಲಿ ಈ ಲೇಖನ ಹೊರಟಿದೆ ಎಂದರೆ, ಆ ಪುಸ್ತಕವನ್ನು ಓದಿದ ಸಾಹಿತಿಗಳು ಅದರಲ್ಲೇನಿದೆ ಎಂಬ ಅಂಶಗಳನ್ನು ಹೇಳಿದ್ದಾರಲ್ಲ, ಆ ಅಂಶಗಳ ಬಗ್ಗೆ ತಾರ್ಕಿಕವಾಗಿರುವ ವಾದವಷ್ಟೇ.!





Once again ಈ ಎಲ್ಲ ಕಥಾಹಂದರಕ್ಕೆ ಮೂಲವಾಗಿರುವುದು ಆರ್ಯ-ಅನಾರ್ಯ ಸಿದ್ಧಾಂತ.. ಗಣೇಶ ಅನಾರ್ಯ(ದ್ರವಿಡ) ನಾಗಿದ್ದು ಆನಂತರ ಆರ್ಯರ ಬೇಡಿಕೆಯಂತೆ ಪೂಜಿಸಲ್ಪಡುವ ದೇವತೆಯಾದ ಎಂಬುದು ಪುಸ್ತಕದ ಆಶಯ.. ಆಶ್ಚರ್ಯ ಅಂದ್ರೆ ಇಲ್ಲಿ ಗಣೇಶನ ಜೊತೆ ಶಿವ,ಪಾರ್ವತಿ ಹೀಗೆ ಸಿಕ್ಕವರನ್ನೆಲ್ಲಾ ಅನಾರ್ಯರೆಂದು ಹೇಳಲಾಗಿದೆ. ಮೂಲವಾಗಿ, ಈ ಆರ್ಯ-ದ್ರವಿಡ ಸಿದ್ಧಾಂತವೇ ಬುಡವಿಲ್ಲದ ಗಿಡದಂತಿರುವಾಗ, ಈ ಶಿವ,ಗಣೇಶ ಅನಾರ್ಯರಾದದ್ದು ಯಾವಾಗ.?

ಅಸಲಿಗೆ ಸಂಶೋಧನೆ ಅಂದರೇನು.? ಯಾವುದಾದರೂ ದೃಢವಾದ ಆಧಾರದ ಮೇಲೆ ವಿಭಿನ್ನ ಚರ್ಚೆಯಾಗುವ ಅವಕಾಶವಿದ್ದಲ್ಲಿ ಸಂಶೋಧನೆಗೆ ಜಾಗವಿದೆ. ಜೋಕಾಲಿ ಆಡುವವನು ಗಟ್ಟಿಯಾದ  ಹುಣಸೆಮರಕ್ಕೆ ಜೋಕಾಲಿ ಕಟ್ಟಿದರೆ ಅದು ಗಟ್ಟಿಯಾಗಿ ನಿಲ್ಲುತ್ತದೆ, ಬದಲಿಗೆ ಟೊಳ್ಳಾದ ನುಗ್ಗೆಮರಕ್ಕೆ ಜೋಕಾಲಿ ಕಟ್ಟಿದರೆ, ಜೋಕಾಲಿಯ ಜೊತೆಗೆ ಅವನೂ ಕೆಳಕ್ಕೆ ಬೀಳುವುದಿಲ್ಲವೇನು.!     ಹಾಗೆಯೇ ದೃಢವೇ ಅಲ್ಲದ ಕಪೋಲಕಲ್ಪಿತವಾದ ಈ ಆರ್ಯ-ದ್ರವಿಡ ಸಿದ್ಧಾಂತವನ್ನು ಅವಲಂಬಿಸಿ ಮತ್ತೇನಾದರೂ ಬರೆದರೆ ಅದೂ ಕಪೋಲಕಲ್ಪಿತವೇ ಆಗುತ್ತದಲ್ಲವೇ..!!

ಇವತ್ತು ಯಾರು ತಮ್ಮನ್ನು ತಾವು "ದ್ರವಿಡರು" ಎಂದುಕೊಂಡು, ಹೊರಗಿನಿಂದ ಬಂದ ಆರ್ಯರು ಅವರನ್ನು ಗುಲಾಮರನ್ನಾಗಿಸಿದರು ಎನ್ನುತ್ತಿದ್ದಾರೋ, ಅವರು ಆರ್ಯರಿಗಿಂತ ಹೆಚ್ಚು ಆಂಗ್ಲರ ಗುಲಾಮರಾಗಿಯೇ ಉಳಿದಿದ್ದಾರೆ ಅನ್ನೋದು ತಿಳಿಯುತ್ತದೆ. ಯಾವ ಪ್ರಾಚೀನ ಸಾಹಿತ್ಯದಲ್ಲೂ ಉಲ್ಲೇಖವೇ ಇರದೇ, ಈಗ್ಗೆ ಧುತ್ತನೆ ಹಲವು ದಶಕಗಳ ಹಿಂದೆ ಬ್ರಿಟಿಷರಿಂದ ಉದ್ಭವವಾದ ಈ AIT [ Aryan Invasion Theory ] ವಾದಗಳನ್ನು ನಂಬಿಕೊಂಡು, ಅದರದ್ದೇ ಆಧಾರದ ಮೇಲೆ ಮತ್ತಷ್ಟು ಹೊಸ ಕಥೆಗಳನ್ನು ಹೇಳುತ್ತಾರೆಂದರೆ, ಅವರ ಅಜ್ಞಾನಕ್ಕೆ ಮರುಕವನ್ನಷ್ಟೇ ಪಡಬಹುದು.!

ಭೌಗೋಳಿಕವಾಗಿಯೂ ಈ ಸಿದ್ಧಾಂತವು ಅವಾಸ್ತವಿಕ ಎಂಬುದನ್ನು ಹಲವು ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ವೇದದ ಯಾವ ಮೂಲೆಯಲ್ಲಿಯೂ ಗಣೇಶ-ಶಿವ ಅನಾರ್ಯರ ದೇವತೆ ಎಂದಾಗಲೀ, ಅಥವಾ ಇವರು ಹೇಳುವ ಭೂತಗಣ, ರುದ್ರಗಣಗಳು ಅನಾರ್ಯರೆಂದು ಎಲ್ಲೂ ಹೇಳಿಲ್ಲ. ಅವರೆಲ್ಲ ದೇವತೆಗಳ ಒಂದು ಭಾಗವೇ ಆಗಿದ್ದು, ಕಶ್ಯಪರ ಮಕ್ಕಳೆಮ್ಬುದು ಸ್ಪಷ್ಟವಾಗಿದೆ. ಹೀಗಿದ್ದೂ ತಾವಾಗೆ ಇವರೆಲ್ಲರನ್ನು 'ಅನಾರ್ಯ' ಎಂಬ ಕಲ್ಪಿತವಾದ ಗುಂಪಿಗೆ ಸೇರಿಸಿದರೆ, ಅದು ಅವರ ಹಣೆಬರಹ..!!


ಇನ್ನು, ಬೇರೆ ಕಡೆಯ ಲೇಖನಗಳನ್ನು ಓದುವಾಗ, ಶಿವನ ಬಗ್ಗೆ "ತಸ್ಕರಾಣಾಂ ಪತಯೇ", ಕುಮ್ಬಾರನೆಂಬ ವರ್ಣನೆಯಿರುವುದನ್ನು ಉಲ್ಲೇಖಿಸಿದ್ದಾರೆ. ಸರಿ. ಆದರೆ ಈ ಕುಂಬಾರ-ಕಮ್ಮಾರ ಅಂದರೆ ದ್ರಾವಿಡರು ಅಂತ ಹೇಳಿರುವುದು ಯಾರು.? ವೇದವೇ.? ಅಲ್ಲ, ಮತ್ತದೇ ಬ್ರಿಟಿಷರು..
ಮಣ್ಣಿನಿಂದ ಮಡಿಕೆಯನ್ನು ಸೃಷ್ಟಿ ಮಾಡುವವನಿಗೆ 'ಕುಂಬಾರ' ಎಂದು ಕರೆದಂತೆ, ಇಡೀ ಜಗತ್ತನ್ನು ಸೃಷ್ಟಿ ಮಾಡುವವನಿಗೆ ವಿಶ್ವದ ಕುಂಬಾರ ಎನ್ನುವುದರಲ್ಲಿ 'ಸಂಘರ್ಷ' ಉಂಟುಮಾಡುವ ವಿಚಾರ ಎಲ್ಲಿದೆ.? 
ವೇದ-ಪುರಾಣಗಳಿಗೆ ತನ್ನದೇ ಆದ ಅರ್ಥವ್ಯಾಪ್ತಿಯಿದೆ. ಅದಕ್ಕೆಂದೇ ಅವುಗಳ ಅರ್ಥಗಳನ್ನು ಸರಿಯಾಗಿ ತಿಳಿದುಕೊಳ್ಳಲೆಂದೇ, ಶಿಕ್ಷಾ-ನಿರುಕ್ತ ಮುಂತಾದ ಪರಿಕರಗಳು, ಭಾಷಾತ್ರೈವಿಧ್ಯ,ರೀತಿಶತಕಗಳ ಪರಿಚಯ ಇವುಗಳನ್ನು ಹೇಳಲಾಗಿದೆ. ಇವಾವುದರ ಗಂಧ-ಗಾಳಿಯೂ ಇಲ್ಲದೆ ವೇದ-ಪುರಾಣಗಳನ್ನು ಅರ್ಥೈಸಲು ಹೊರಟರೆ ಆಗುವ ಸ್ಥಿತಿ ಇಷ್ಟೇ..!!!

ಬರೆಯಲೂ ಎಲ್ಲರಿಗೂ ಹಕ್ಕಿದೆ. ಒಬ್ಬ ಹುಚ್ಚನೂ ಸಾಹಿತ್ಯವನ್ನು ಬರೆಯಬಹುದು.. ಆ ನಿಟ್ಟಿನಲ್ಲಿ  ಇದೂ ಒಂದು ಕೃತಿ ಅಂತ ಭಾವಿಸಿ, ಮನೆಯ ಇಲಿಗಳ ಆಹಾರವಾಗಿ ತಂದಿಡಬಹುದು.. ಆದರೆ, ಇದು ಒಂದು  ಸಂಶೋಧನೆಯೆಂದೋ, ವಸ್ತುನಿಷ್ಠ ಕಾದಂಬರಿಯೆಂದೋ ಹೇಳುವುದಾದಲ್ಲಿ, ಅದು ಹಾಸ್ಯಾಸ್ಪದ..!!

ವೇದಗಳ ಕಾಲದಿಂದಲೂ ಇಂತಹ ಕಿಡಿಗೇಡಿಗಳು ಇದ್ದೆ ಇದ್ದಾರೆ.. ಸದಾ ವೇದಗಳನ್ನು ತೆಗಳುವುದು, ದೇವತೆಗಳನ್ನು ಕೀಳಾಗಿ ನೋಡುವುದು ಇವೇ ಅವರ ಕುಲಕಸುಬು. ಶಿಶುಪಾಲ,ಹಿರಣ್ಯಕಶಿಪು,ಮಧು-ಕೈಟಭ,ಕಲಿ ಇವರೆಲ್ಲ ಇದೇ ಗುಂಪಿಗೆ  ಸೇರಿದವರು.. ಇಂತಹ ಲಕ್ಷಣವುಳ್ಳ ವ್ಯಕ್ತಿಗಳನ್ನು, ಮಹರ್ಷಿ ವೇದವ್ಯಾಸರು "ದೈತ್ಯ"ರು ಎಂದು ಕರೆದಿದ್ದಾರೆ.

ಈಗಲೂ ಇಂತಹ ವ್ಯಕ್ತಿಗಳಿದ್ದಾರೆ.. ಅವರನ್ನು "ಬುದ್ಧಿಜೀವಿಗಳು" ಎಂದು ಕರೆಯಬಹುದಾಗಿದೆ..!!


1 comment:

  1. ನಾವ್ ಕೂಡ ಆ ಪುಸ್ತಕ ಓದಿಲ್ಲಾ ... ನಮಗದು ಸಿಕ್ಕಿಲ್ಲಾ... ಆದರೂ ಚಿಕ್ಕದಾಗಿ ಒಂದು ಆಲೋಚನೆ
    ನಂಬಿಕೆ ಮತ್ತು ಅನುಭವಗಳ ಮೂಲಕ ದೇವರನ್ನು ಪೂಜಿಸುವ ನಾವು ಮತ್ತೊಬ್ಬರ ಸುಳ್ಳು ಮಾತುಗಳಿಗೆ ಚಿಂತೆ ಏಕೆ ಮಾಡಬೇಕು .. ದೇವರಿದ್ದಾರೆ ಮತ್ತು ಇಲ್ಲಾ ಎಂಬುದಕ್ಕೆ ಕಥೆಗಳ ಬರೆದು ನಾಟಕವಾಡಿ , ಚಲನಚಿತ್ರ ಮಾಡಿ ಅನೇಕ ಪ್ರಯೋಗ ಪ್ರದರ್ಶನಗಳ ನಡೆಸಿದಂತೆ ಇದು ಕೂಡ ಒಂದು ಎಂಬುದಾಗಿ ಸುಮ್ಮನಿರಬಹುದು ... ಪುಸ್ತಕದಲ್ಲಿ ಇರುವುದನ್ನು ಸತ್ಯ ಎಂದು ಸುಳ್ಳು ಎಂದು ಸುಮ್ಮನೆ ಚರ್ಚೆ ಮಾಡುವುದರ ಹಿಂದೆ ಯಾವುದೋ ರಾಜಕೀಯ ಅಡಗಿದೆ ... !!!!!

    ReplyDelete