Thursday 25 July 2013

ಶ್ರದ್ಧಾಗೀತೆ

ಸಮರದಲ್ಲಿ ಅಮರರಾಗಿಹ ಹುತಾತ್ಮರ ಸ್ಮರಣದಿ
ಹಾಡುತಿಹೆನು ಇಂದು ಶ್ರದ್ಧಾಗೀತೆ ಧನ್ಯವಾದದಿ..

ಮರಳಿ ಮತ್ತೆ ಬರುವರೇನು ? ಜಯವ ತಂದ ವೀರರು..
ನನ್ನ ಹಾಡಿನಂಜಲಿಯಲಿ ಅವರಿಗಾಗಿ ಕಣ್ಣನೀರು..

ರಕ್ತಹೋಳಿಯಾಡಿದವರು,
ಧ್ವಜದಲಿಹ ತ್ರಿವರ್ಣ ಇವರು
ಹೆಮ್ಮೆಯ ಈ ಶೂರರು..!!

ವಿಜಯದ ಪುಷ್ಪ ಅರಳುತಿಹುದು, ಸೂಸಿ ನಗುವಿನ ಸೊಡರು..
ಅವರ ರುಧಿರ ಸಿಂಚನದಿ, ಆಯಿತೆಮ್ಮ ಭೂಮಿ ಹಸಿರು..
ಕ್ರಾಂತಿಗೀತೆಯಾತ್ಮದಲರು..
ನವ್ಯ ಬಾನ ಭಾನು ಇವರು..
ಹೆಮ್ಮೆಯ ಈ ಶೂರರು..!!

ಸ್ವದೇಶದ ಸ್ವತಂತ್ರತೆಯನು ಉಳಿಸಲವರು ಮಡಿದರು..
ವಿಶ್ವದಲ್ಲಿ ವಿಹರಿಸಿಹುದು ಮುಕ್ತಿಯ ಸಂದೇಶ ತೇರು..
ದೇಶ ಜೀವದೊಂದೇ ಉಸಿರು..
ಸ್ವಾಭಿಮಾನರೂಪ ಇವರು..
ಹೆಮ್ಮೆಯ ಈ ಶೂರರು..!!    





No comments:

Post a Comment