Monday 17 September 2012

"ಗಣೇಶನ ಹಬ್ಬ" ಅಂದಾಗಲೆಲ್ಲಾ ನೆನಪಾಗೋದು ಅವರೇ....


1890 ರ ದಶಕ.. 1857 ರ ಭೀಕರ ಸ್ವತಂತ್ರ ಸಂಗ್ರಾಮ ತಣ್ಣಗಾಗಿ ಅದೆಷ್ಟೋ ವರ್ಷಗಳು ಕಳೆದು ಹೋಗಿದ್ವು. ತದನಂತರ ಅಲ್ಲಲ್ಲಿ ಸಣ್ಣ-ಪುಟ್ಟ ಹೋರಾಟಗಳು ನಡೆದರೂ, ಅಷ್ಟೊಂದು ಯಶಸ್ವಿಯಾಗಲಿಲ್ಲ. ಈ ಮಧ್ಯೆ ಬ್ರಿಟಿಷರನ್ನು ನಡುಗಿಸಿದ ಒಂದೇ ಒಂದು ದಿಟ್ಟ ಹೋರಾಟವೆಂದರೆ, 'ವಾಸುದೇವ ಬಲವಂತ್ ಫಡ್ಕೆ'ಯ ಮೊಟ್ಟಮೊದಲ ಸಶಸ್ತ್ರಕ್ರಾಂತಿ. ಆದರೆ ಅವನ ಬಂಧನದ ನಂತರ ಆ ಹೋರಾಟವೂ ಶಮನವಾಗಿಹೋಯಿತು. ಕ್ರಾಂತಿಯ ಜ್ವಾಲೆ ತಣ್ಣಗಾಗಿದ್ದರೂ, ಅದರದೊಂದು ಕಿಡಿ ಮಾತ್ರ ಎಲ್ಲರಲ್ಲಿ ಬೂದಿಮುಚ್ಚಿದ ಕೆಂಡದಂತೆ ಹಾಗೇ ಜೀವಂತವಾಗಿತ್ತು. 

ಇದನ್ನರಿತ ಬ್ರಿಟಿಶ್ ಸರ್ಕಾರ, 1885 ರಲ್ಲಿ ಎ.ಓ.ಹ್ಯೂಮ್ ನಿಂದ "ಇಂಡಿಯನ್ ನ್ಯಾಷನಲ್ ಕಾಂಗ್ರೆಸ್"ನ್ನು ಸ್ಥಾಪಿಸಿತು."ಯುದ್ಧ ಮಾಡಿದರೆ ಸ್ವಾತಂತ್ರ್ಯ ಸಿಗೋದಿಲ್ಲ, ಅರ್ಜಿಗಳನ್ನು ಹಾಕಿ 'ಭಿಕ್ಷಾ'ಪಾತ್ರೆ ಹಿಡಿದು ನಿಂತರೆ, ಸ್ವತಂತ್ರ ಸಿಕ್ಕರೂ ಸಿಗಬಹುದು" ಎಂಬ ಧೋರಣೆಯನ್ನಿಟ್ಟುಕೊಂಡು ಹುಟ್ಟಿಕೊಂಡ I.N.C ಜನರಲ್ಲಿನ ಕ್ರಾಂತಿಯ ಮನೋಭಾವವನ್ನು ಮತ್ತಷ್ಟು ಶಾಂತಗೊಳಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಯಿತು. 

ಇಂತಹ ನಿಸ್ತೇಜವಾದ ಪರಿಸ್ಥಿತಿಯಲ್ಲಿ, ಮತ್ತೊಮ್ಮೆ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ, ಸ್ವಾತಂತ್ರ್ಯಯಜ್ಞದ ಅಗ್ನಿಯನ್ನು ಮತ್ತೆ ಪ್ರಜ್ವಲಗೊಳಿಸುವ ಕಾರ್ಯ ಆಗಲೇಬೇಕಿತ್ತು. ಅಂಥ ಯಜ್ಞದ ಆಧ್ವರ್ಯು ಆದವರು, "ಲೋಕಮಾನ್ಯ ಬಾಲಗಂಗಾಧರ ತಿಲಕರು". ಮನೆಗಳಲ್ಲಿ ಅವರವರ ಕುಟುಂಬದ ಮಟ್ಟಿಗೆ ಆಚರಿಸುತ್ತಿದ್ದ "ಗಣೇಶ ಚತುರ್ಥಿ"ಯನ್ನು ಸಾರ್ವಜನಿಕ ಉತ್ಸವವಾಗಿ ಮಾಡಿದವರು ಅವರೇ.1894 ರಲ್ಲಿ.. ಅದರ ಜೊತೆ ಶಿವಾಜಿ ಮಹಾರಾಜರ ಜಯಂತಿಯನ್ನೂ ಸಾರ್ವಜನಿಕ ಹಬ್ಬವನ್ನಾಗಿಸಿದ ಕೀರ್ತಿ ಅವರದ್ದೇ. ರಾಷ್ಟ್ರೀಯತೆಯ ಪುನರುತ್ಥಾನದಲ್ಲಿ ಇದೊಂದು ಮೈಲಿಗಲ್ಲು..
ಒಂದು ಧಾರ್ಮಿಕ ಹಬ್ಬವನ್ನು, ರಾಷ್ಟ್ರೀಯ ಉತ್ಸವವನ್ನಾಗಿ ಮಾಡಿದ್ದು ಮಹಾನ್ ಸಾಹಸವೇ..ಅದೊಂದು ಕಾರ್ಯದಿಂದ ಮತ್ತೆ ಜನರೆಲ್ಲರೂ ಮಾನಸಿಕವಾಗಿಯೇ ಸಂಘಟಿತರಾದರು. ಮುಂದಿನ ಹೋರಾಟಗಳಲ್ಲಿ, ಈ ಪೀಠಿಕೆ ಅದೆಂಥ ಮಹತ್ತರ ಪಾತ್ರ ವಹಿಸಿತು ಅನ್ನೋದು ಇತಿಹಾಸ ಬಲ್ಲವರಿಗೆ ಅಪರಿಚಿತವೇನೂ ಅಲ್ಲ..

ಇವತ್ತು ಗಲ್ಲಿ-ಗಲ್ಲಿಗಳಲ್ಲಿ, ಮನೆ-ಮನಗಳಲ್ಲಿ, ಜಾತಿ-ಪಂಥದ ಭೇದ ಮರೆತು, ಜನರೆಲ್ಲಾ ಒಗ್ಗೂಡಿ ಅತೀವ ಸಂಭ್ರಮದಿಂದ ಗಣೇಶನ ಹಬ್ಬವನ್ನ ಆಚರಿಸುತ್ತಿದ್ದಾರೆಂದರೆ, ಅದಕ್ಕೆ ಕಾರಣ ಆ ಲೋಕಮಾನ್ಯರೆ.. ಈ ಸಡಗರ-ಉತ್ಸಾಹಗಳನ್ನು ನೋಡಿದಾಗಲೆಲ್ಲಾ, ಮತ್ತೆ ಮತ್ತೆ ನೆನಪಾಗೋದು ಆ ತಿಲಕರು, ಅವರ ಸಂಘಟನಾ ಚಾತುರ್ಯ, ಮತ್ತು ದೂರದೃಷ್ಟಿ. ಗಣೇಶನ ಹಬ್ಬದಲ್ಲಿ ಸಂಸ್ಕೃತಿಯ ಜೊತೆಗೆ ರಾಷ್ಟ್ರಚಿಂತನೆಯೂ ಬೆರೆಯಲಿ ಎಂಬ ಅವರ ಸದಭಿಲಾಷೆ, ಶಾಶ್ವತವಾಗಿ ನೆಲೆಗೊಳ್ಳಲಿ..

ಎಲ್ಲರಿಗೂ ಗೌರೀ-ಗಣೇಶ ಉತ್ಸವದ ಹಾರ್ದಿಕ ಶುಭಾಶಯಗಳು...