Tuesday 24 January 2012

ಭವ್ಯಭಾರತೀ..

( ಭಾಮಿನಿ ಷಟ್ಪದಿಯಲ್ಲಿ ವಿರಚಿತ, ಭಾರತಾಂಬೆಯ ವರ್ಣನಾ ಸ್ತುತಿ..)

                          
 
ಸುತ್ತ ಸಾಗರದೊತ್ತಲೆಯ ಮುಗಿ-
ಲೆತ್ತರಗ ಭೋರ್ಗರೆವ ನದಿ ಫಲ
ಹೊತ್ತ ತರುಗಳ ಮುತ್ತು ರತ್ನವ ಬಿತ್ತಿ ಬೆಳೆದಿಹರ..
ಉತ್ತಮತ್ವದಿ ನಿತ್ಯ ರಾಜಿಪ
ಹೆತ್ತ ಭಾರತತಾಯಿಯಂಘ್ರಿಗೆ
ಮತ್ತೆ ಮತ್ತೆ ನಮಸ್ಕರಿಸಿ ಸಂಪ್ರಾರ್ಥಿಸುವೆ ಶುಭಕೆ...||೧||
 
ಆರ್ಷಚರಣಾರಾಮ ಗೋಪೀ
ಹರ್ಷಕನ ಲೀಲಾಲಹರಿಯಾ
ಕರ್ಷಿಸುವ ಮಹಿಮಾಮಹೀಪತಿವೃಂದ ತೇಜವನು..
ವರ್ಷಿಸುತಲಿರೆ ನಾಕಲೋಕವು
ಈರ್ಷಿಸುವ ತೆರದಲಿಹ ದೇವಮ-
ಹರ್ಷಿಗಣಸನ್ನಮಿತ ಭಾರತದೇವಿಗಾನಮಿಪೆ...||೨||
 
ನೇತ್ರವಹ್ನಿಯ ರೂಪೆರಡುದಶ
ಪುತ್ರಿ ದಕ್ಷನ ತಾಳ್ದ ನವಕೃತಿ
ಮಿತ್ರಪಾದ್ಯಧಿದೇವತಾ ಬಹುಪುಣ್ಯಪೂರುಷರ..
ಸತ್ರಯಾಗತಪೋಬಲದಿ ಸುಪ
ವಿತ್ರಭೂತಳಸಂಖ್ಯ ದಿವ್ಯ
ಕ್ಷೇತ್ರಧಾಮ ಪುನೀತಭಾರತದೇವಿಗಾನಮಿಪೆ...||೩||
 
ಸಾಲುಗೂಡುತ ಮಾರುತಗಳನು
ಕೂಲಿಸುವ ಹಿಮವಿಂಧ್ಯಸಹ್ಯಸು
ಶೈಲದಾವಳಿ ಬಗೆಯ ಖಗಮೃಗಸಂಗವಿಂಬಿಟ್ಟು..
ಹಾಲುನೊರೆಜಲಪಾತ ಝರಿಯನು
ಗಾಲ ಹಸಿರಿನ ವಸ್ತ್ರಧರ ವನ
ಮಾಲೆಯಿಂ ಭ್ರಾಜಿಸುವ ಭಾರತದೇವಿಗಾನಮಿಪೆ...||೪||
 
ದೇವನದಿ ಯಮುನಾ ಸರಸ್ವತಿ
ಪಾವನಾ ಕಾವೇರಿ ಕೃಷ್ಣೆಯ
ರಾವಗಂ ಮೈದುಂಬಿ ನರ್ತಿಸಿ ನಾಡಮೈದೊಳೆದು
ಹೂವುಕೇಸರಘನವ ಚಿಗುರಿಸಿ
ಜೀವಸಂಕುಲಗಳನು ಪೋಷಿಸಿ
ಕಾವ ಧುನಿತೀರ್ಥಗಳ ಭಾರತದೇವಿಗಾನಮಿಪೆ...||೫||
 
ವ್ಯಾಸಮುಖಸುಜ್ಞನಿಧಿ ಕಾಳಿಯ
ದಾಸಬಾಣಪ್ರಭೃತಿ ಪದದು
ಲ್ಲಾಸ ಪಂಪಾದಿಕವಿವಾಣೀಸ್ರೋತವುಗಮಿಸಿಹ..
ಲೇಸುಧರ್ಮಪ್ರಚುರಗೊಳಿಸಿದ
ಸಾಸಿರ ಮತಾಚಾರ್ಯಗುರುವಾ-
ಗ್ಭಾಸದಿಂ ಶೋಭಿಸಿಹ  ಭಾರತದೇವಿಗಾನಮಿಪೆ...||೬||
 
ವೇದಗೀತೊಂಕಾರದಿಂದ
ಪ್ರಾದಿಗೊಂಡತಿವಿಸ್ತರಿಪ ಸಂ
ವಾದಿಮುಖ್ಯಸ್ವರದಿ ನೈಕಧ ರಾಗರಾಗಿಗಳ..
ನಾದಭಾವದಲಯಕೆ ಭಂಗಿಯ
ಭೇದ ಮುದ್ರಿಪ ಕೋವಿದರ ಮನ
ಮೋದನಾಟ್ಯಪ್ರಥಿತ ಭಾರತದೇವಿಗಾನಮಿಪೆ...||೭|| 
 

ಕಲ್ಲಿನಲಿ ಕಾವ್ಯಗಳ ಮೂರ್ತಿಸಿ
ಪಲ್ಲವಿಸಿ ಗುಡಿಗೋಪುರಗಳತಿ
ಮಲ್ಲರಾಜರ ವಿಜಯಚಿಹ್ನೆಯ ಶಿಲ್ಪ ರಚಿಸಿಹರ..
ಫುಲ್ಲವರ್ಣದ ಕುಂಚದಲಿ ಸವಿ
ಫುಲ್ಲರೂಪದಚಿತ್ರಗಳ ಪರಿ-
ಫುಲ್ಲಿಸಿದ ಕಲೆಗಾರಭಾರತದೇವಿಗಾನಮಿಪೆ...||೮||

ಪ್ರಾಂತದೇಶಕೆ ಭಿನ್ನತೆಯ ಸಿರಿ
ವಂತ ಭಾಷಾಪ್ರಕರಯುಕ್ತ ನಿ
ತಾಂತ ಶಿಷ್ಟಾಚರಣಶೀಲ ಸುಸಂಸ್ಕೃತರು ಬೆರೆತ..
ಶಾಂತಿ ನಾಡಿನ ಕದಡಿದಧಮರ
ನಂತಿಸಲು ಮೊಳಗಿದ ಯುವಜನ
ಕ್ರಾಂತಿಗಳ ವಿಕ್ರಾಂತಭಾರತದೇವಿಗಾನಮಿಪೆ...||೯||  
 
ಲೋಕಮಾತೆಯೆ ಕಮಲೆ ವೀಣೆಯ 
ಝೇಂಕರಿಪ ವಾಗ್ದೇವಿ ದುರ್ಗೆಯೆ
ಪಂಕಜಾನನೆ ವಿಮಲೆ ಸರ್ವಪ್ರೇರಕಳೆ ಒಲಿದು..
ಶ್ರೀಕರಳೆ ನಿಜಕರದೊಳೆನ್ನ
ಸ್ವೀಕರಿಸು ಮಜ್ಜನನಿ ಭಾರತಿ
ಯೇಕಮಾತ್ರಭಿಲಾಷೆಯಿದುವೀ 'ಭಾರತೀಯ'ನಿಗೆ...||೧೦||

No comments:

Post a Comment